ಮೊದಲ ಸಲ ಕರ್ನಾಟಕ ಭವನಕ್ಕೆ ಒಟ್ಟಿಗೆ ಬಂದ ದೇವೇಗೌಡ ದಂಪತಿ
Recommended Video
ನವದೆಹಲಿ, ಜುಲೈ 17 : ದೆಹಲಿಯಲ್ಲಿರುವ ಕರ್ನಾಟಕ ಭವನ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಜೊತೆ ಮೊದಲ ಬಾರಿಗೆ ಕರ್ನಾಟಕ ಭವನಕ್ಕೆ ಆಗಮಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ನಿ ಚೆನ್ನಮ್ಮ ಜೊತೆಯಾಗಿ ಇರುವರೆಗೂ ಕರ್ನಾಟಕ ಭವನಕ್ಕೆ ಭೇಟಿ ನೀಡಿರಲಿಲ್ಲ. ಮಂಗಳವಾರ ಅವರ ದೆಹಲಿಯಲ್ಲಿದ್ದು, ಕರ್ನಾಟಕ ಭವನಕ್ಕೆ ಭೇಟಿ ನೀಡಿದರು.
ಶೃಂಗೇರಿಯಲ್ಲಿ ಅತಿರುದ್ರಯಾಗ ನಿಲ್ಲಿಸಲ್ಲ :ದೇವೇಗೌಡರ ಕುಟುಂಬ
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ಅವರನ್ನು ಭೇಟಿ ಮಾಡಲು ಎಚ್.ಡಿ.ದೇವೇಗೌಡರು ಕರ್ನಾಟಕ ಭವನಕ್ಕೆ ಮಂಗಳವಾರ ಆಗಮಿಸಿದ್ದರು. ಆಗ ಪತ್ನಿ ಚೆನ್ನಮ್ಮ ಅವರನ್ನು ಕರೆದುಕೊಂಡು ಹೋಗಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿಯನ್ನು ಒಟ್ಟಿಗೆ ನೋಡಿ ಕರ್ನಾಟಕ ಭವನದ ಸಿಬ್ಬಂದಿಯೂ ಸಂತಸಗೊಂಡರು. ದೇವೇಗೌಡ ದಂಪತಿ ಭವನಕ್ಕೆ ಆಗಮಿಸಿದ ಕೆಲವು ಹೊತ್ತಿನಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿ, ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಕರ್ನಾಟಕ ಭವನಕ್ಕೆ ಆಗಮಿಸಿದರು.
ಎಚ್.ಡಿ.ದೇವೇಗೌಡ, ಚೆನ್ನಮ್ಮ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕ ಭವನದಲ್ಲಿ ಒಟ್ಟಿಗೆ ಮಧ್ಯಾಹ್ನದ ಊಟ ಮಾಡಿದರು. ಮೂರು ದಿನಗಳ ಕಾಲ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲು ಎಚ್.ಡಿ.ಕುಮಾರಸ್ವಾಮಿ ದೆಹಲಿಗೆ ಆಗಮಿಸಿದ್ದಾರೆ.
ಮೊದಲ ಬಾರಿಗೆ ಕರ್ನಾಟಕ ಭವನಕ್ಕೆ ಭೇಟಿ
ಎಚ್.ಡಿ.ದೇವೇಗೌಡರು ಮಾಜಿ ಪ್ರಧಾನಿಗಳು. ಹಾಲಿ ಹಾಸನ ಜಿಲ್ಲೆಯ ಲೋಕಸಭಾ ಸದಸ್ಯರು. ಹಲವು ಬಾರಿ ಅವರು ದೆಹಲಿಗೆ ಭೇಟಿ ನೀಡುತ್ತಾರೆ. ಅಲ್ಲಿಯೇ ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ. ಆದರೆ, ಪತ್ನಿ ಜೊತೆ ಅವರು ಚಾಣಕ್ಯಪುರಿನಲ್ಲಿರುವ ಕರ್ನಾಟಕ ಭವನಕ್ಕೆ ಭೇಟಿ ನೀಡಿದ್ದು ಕಡಿಮೆ.
ದೆಹಲಿಯಲ್ಲಿ ಆಯಾ ರಾಜ್ಯಗಳ ಹೆಸರಿನಲ್ಲಿ ಭವನವಿದ್ದು, ರಾಜ್ಯದಿಂದ ದೆಹಲಿಗೆ ತೆರಳುವ ರಾಜಕೀಯ ನಾಯಕರು ಅಲ್ಲಿ ವಾಸ್ತವ್ಯ ಹೂಡುತ್ತಾರೆ. ಸಭೆಗಳನ್ನು ನಡೆಸುತ್ತಾರೆ. ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡುತ್ತಾರೆ.
1954ರಲ್ಲಿ ವಿವಾಹ
ಎಚ್.ಡಿ.ದೇವೇಗೌಡರು 1954ರಲ್ಲಿ ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು ವಿವಾಹವಾದರು. ದೇವೇಗೌಡ ಚೆನ್ನಮ್ಮ ದಂಪತಿಗೆ ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಎಚ್.ಡಿ.ಕುಮಾರಸ್ವಾಮಿ 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಎಚ್.ಡಿ.ರೇವಣ್ಣ ಸಚಿವರಾಗಿದ್ದಾರೆ.
ದೇವೇಗೌಡರ ಮತ್ತು ಚೆನ್ನಮ್ಮ ದಂಪತಿ ಮೇ ತಿಂಗಳಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಒಟ್ಟಿಗೆ ಆಗಮಿಸಿದ್ದರು. ಇಂದು ಕರ್ನಾಟಕ ಭವನಕ್ಕೆ ಒಟ್ಟಿಗೆ ಭೇಟಿ ಕೊಟ್ಟಿದ್ದಾರೆ.
ದಂಪತಿಗಳ ದೇವಾಲಯ ಪ್ರವಾಸ
ಎಚ್.ಡಿ.ದೇವೇಗೌಡರು ಅಪಾರವಾದ ದೈವ ಭಕ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ದೇವೇಗೌಡರು ವಿವಿಧ ದೇವಾಲಯಕ್ಕೆ ಭೇಟಿ ನೀಡುವಾಗ ಪತ್ನಿ ಚೆನ್ನಮ್ಮ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ತಿರುಪತಿ, ಶೃಂಗೇರಿ ಮುಂತಾದ ದೇವಾಲಯಕ್ಕೆ ದಂಪತಿಗಳು ಒಟ್ಟಿಗೆ ಭೇಟಿ ನೀಡಿದ್ದಾರೆ.
2018ರ ವಿಧಾನಸಭೆ ಚುನಾವಣೆ ಬಿ.ಫಾರಂ ವಿತರಣೆಗೆ ಮುನ್ನ ದೇವೇಗೌಡ ಮತ್ತು ಚೆನ್ನಮ್ಮ ಅವರು ಶೃಂಗೇರಿಗೆ ಭೇಟಿ ನೀಡಿ ಒಟ್ಟಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಹೋಮ ಮಾಡಿಸಿದ್ದರು.
ಎಚ್.ಡಿ.ಕುಮಾರಸ್ವಾಮಿಯೂ ದೆಹಲಿಯಲ್ಲಿ
ದೇವೇಗೌಡ, ಚೆನ್ನಮ್ಮ ದಂಪತಿಗಳ ಪುತ್ರ ಎಚ್.ಡಿ.ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಗಳು. ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲು ಕುಮಾರಸ್ವಾಮಿ ಸಹ ದೆಹಲಿ ಪ್ರವಾಸದಲ್ಲಿದ್ದಾರೆ. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೇವೇಗೌಡರು ದೆಹಲಿಗೆ ತೆರಳಿದ್ದಾರೆ.