ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲ ರೈತರಿಗೆ ಸಂಕಷ್ಟ!
ಬೆಂಗಳೂರು, ಡಿ. 08: ಕಳೆದ ಅಧಿವೇಶನದಲ್ಲಿಯೇ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ಸಿಕ್ಕಿದೆ. ಸುದೀರ್ಘ ಚರ್ಚೆಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ವಿಧಾನ ಪರಿಷತ್ನಲ್ಲೂ ಕಾಯ್ದೆ ಪಾಸ್ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಇದೇ ಸಂದರ್ಭದಲ್ಲಿ ನಡೆದ ಗಂಭೀರ ಚರ್ಚೆ ಇಡೀ ನಾಡಿನ ಜನರನ್ನು ಚಿಂತನೆಗೆ ಹಚ್ಚುವಂತಿದೆ.
ಮೊದಲು ಪುಕ್ಕಟೆಯಾಗಿ ಜಿಯೋ ಸಿಮ್ ಕೊಟ್ಟರು. ಅದರಿಂದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಮುಳುಗಿಹೋಯಿತು. ಜಿಯೋದವರು ಮೂರು ತಿಂಗಳ ಬಳಿಕ ದುಡ್ಡು ಕಟ್ಟಿರಿ ಎಂದರು. ಅದೇ ರೀತಿ 25 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯ ಇದ್ದವರೂ ರೀತಿ ಈಗ ಭೂಮಿ ಖರೀದಿ ಮಾಡಬಹುದು ಎಂದು ಹೇಳಿದ್ದೀರಿ. ಮೊದಲು ಜಮೀನ್ದಾರಿ ಪದ್ದತಿ ವ್ಯವಸ್ಥೆ ಇತ್ತು. ಮತ್ತೆ ಅದೇ ಹಳೆ ಪದ್ದತಿಗೆ ವಾಪಾಸ್ ಕೊಂಡೊಯ್ಯುತ್ತಿದ್ದೀರಿ. ಕಾರ್ಪೊರೇಟ್ ಸಂಸ್ಥೆಗಳು ಜಮೀನನ್ನು ವಶಕ್ಕೆ ಪಡೆಯಲಿವೆ. ಯಾವ ಬೆಳೆ ಬೆಳಯಬೇಕು ಎಂದು ಸಂಸ್ಥೆ ನಿಯಂತ್ರಣ ಮಾಡಲಿದೆ. ರೈತ ಕೂಲಿಕಾರನಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಚರ್ಚೆಯಲ್ಲಿ ಮಾತನಾಡಿ ಎಚ್ಚರಿಸಿದರು.

ನ್ಯಾಯಾಲಯದಲ್ಲಿದ್ದಾಗ ಚರ್ಚೆ ಹೇಗೆ?
ವಿಧಾನ ಪರಿಷತ್ ಕಲಾಪದಲ್ಲಿ ವಿಧೇಯಕದ ಮೇಲೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಿದ್ದಾಗ ಇಲ್ಲಿ ಅದನ್ನು ಹೇಗೆ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯ? ಕೋರ್ಟ್ನಲ್ಲಿರುವ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರೂ ಸಹಮತ ವ್ಯಕ್ತಪಡಿಸಿದರು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಶಾಸನ ಸಭೆಯಲ್ಲಿ ಚರ್ಚೆ ಮಾಡಬಾರದು ಎಂದು ನಾವೇ ನಿಯಮ ಮಾಡಿಕೊಂಡಿದ್ದೇವೆ ಎಂದು ಪಾಟೀಲ್ ಸದನಕ್ಕೆ ವಿವರಿಸಿದರು.

ಅರ್ಧ ಚರ್ಚೆ ಮುಗಿದಿದೆ
ಆಗ ಮಧ್ಯೆ ಪ್ರವೇಶಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಹರಿಪ್ರಸಾದ್ ಹಾಗೂ ಪಾಟೀಲ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಮಂಡಿಸಿದಾಗಲೇ ಅದಕ್ಕೆ ಆಕ್ಷೇಪಣೆ ಮಾಡಬೇಕಿತ್ತು. ಈಗಾಗಲೇ ಅರ್ಧ ಚರ್ಚೆ ನಡೆದಿದೆ. ಈಗ ಆಕ್ಷೇಪಣೆ ಸಲ್ಲದು. ಮೊದಲೇ ಏಕೆ ಪಾಯಿಂಟ್ ಆಫ್ ಆರ್ಡರ್ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಸದನಕ್ಕೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಾನೂನು ತಜ್ಞರ ಜೊತೆ ಜೊತೆ ಚರ್ಚಿಸಿದ ಬಳಿಕವೇ ವಿಧೇಯಕ ತರಲಾಗಿದೆ. ಚರ್ಚೆಗೆ ಯಾವುದೇ ತೊಂದರೆ ಇಲ್ಲ. ವಿಧಾನಸಭೆಯಲ್ಲಿ ಎರಡು ದಿನ ಚರ್ಚೆ ಆಗಿದೆ. ಇಲ್ಲಿ ಬಂದಾಗ ಕಲಾಪ ನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು. ನಿನ್ನೆಯೂ ಚರ್ಚೆಗೆ ಬಂದಿತ್ತು. ಆದರೆ ನೀವು ಚರ್ಚೆ ಬಿಟ್ಟು ಹೊರಟುಬಿಟ್ಟಿರಿ ಎಂದು ಆರೋಪಿಸಿದರು.

ರಕ್ತರಹಿತ ಕ್ರಾಂತಿ ಮಾಡಿದ್ದ ಅರಸು
ನಂತರ ಮಾತು ಮುಂದುವರೆಸಿದ ಬಿಕೆ ಹರಿಪ್ರಸಾದ್ ಅವರು, ಬ್ರಿಟೀಷರು ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದರು, ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದರು. ಇದನ್ನು ತಿದ್ದುಪಡಿ ಮಾಡಿ ಉಳುವವನೇ ಒಡೆಯ ಎಂದು ಕಾಯ್ದೆ ರೂಪಿಸಲಾಗಿತ್ತು. ರಕ್ತರಹಿತ ಕ್ರಾಂತಿ ಅರಸು ಕಾಲದಲ್ಲಿ ಆಯಿತು. ಈಗ ಅಂತಹ ಕಾಯ್ದೆಯನ್ನು ಮತ್ತೆ ರೈತರಿಗೆ ಅನ್ಯಾಯವಾಗುವ ರೀತಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಧೇಯಕಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗೆಲ್ಲ ರೈತರಿಗೆ ಸಂಕಷ್ಟ ಬರುತ್ತದೆ. ಮೊದಲ ಬಾರಿ ಸಿಎಂ ಆಗಿದ್ದಾಗ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಗೋಲಿಬಾರ್ ಆಗಿ ಆರು ಜನ ಮೃತಪಟ್ಟರು. ಆರು ಜನ ಸತ್ತಿಲ್ಲ ಎಂದರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ ಎಂದು ಬಿಕೆ ಹರಿಪ್ರಸಾದ್ ಅವರು ಸವಾಲು ಹಾಕಿದರು.

ಪರಿಷತ್ನಲ್ಲಿ ಮೋದಿ-ರಾಹುಲ್ ಪ್ರಸ್ತಾಪ
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಹರಿಪ್ರಸಾದ್ ಕೂಡ ನನ್ನ ಹಾಗೆಯೇ ಇಲ್ಲಿಗೆ ಬಂದಿದ್ದಾರೆ. ಆದರೆ ದೆಹಲಿ ಗುಂಗಿನಿಂದ ಇನ್ನು ಹೊರ ಬಂದಿಲ್ಲ. ಅಲ್ಲಿ ಮಾತನಾಡಬೇಕಾಗಿದ್ದನ್ನು ಇಲ್ಲಿ ಮಾತನಾಡುತ್ತಿದ್ದಾರೆ. ಅದನ್ನೆಲ್ಲಾ ನಿಮ್ಮ ನಾಯಕರಲ್ಲಿ ಹೇಳಿ. ಇದು ಆ ಸ್ಥಳ ಅಲ್ಲ. ರಾಜ್ಯದ ಬಗ್ಗೆ ಮಾತನಾಡಿ. ಎಲ್ಲಾ ತಂದು ಸರಿಯಬೇಡಿ, ಸೀಮಿತವಾಗಿ ಮಾತನಾಡಿದರೆ ಕೇಳಲು ಸಿದ್ದ. ನೀವು ಮೋದಿ ಏನು ಮಾಡಿದರು ಅಂತಾ ಮಾತನಾಡಲು ಹೋದರೆ ನಾವು ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತೇವೆ ಎಂದು ಕಾಲೆಳೆದರು.
ಆಯನೂರು ಮಾತಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್ನ ಬಿಕೆ ಹರಿಪ್ರಸಾದ್ ಅವರು, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ವಿರೋಧ ಪಕ್ಷದವರು ಇಲ್ಲದಾಗ ಕಾನೂನು ತಂದಿದ್ದೀರಿ. ಇಲ್ಲಿ ಮಾತನಾಡಬೇಡಿ ಎಂದರೆ ಹೇಗೆ? ಈ ಸದನವನ್ನು ಅಂತಹ ಸ್ಥಳ ಅಲ್ಲ ಅನ್ನುತ್ತಿದ್ದೀರಲ್ಲ? ನಿಮ್ಮ ಪ್ರಧಾನಿ ಸಂಸತ್ನ್ನೇ ಅಂತಹ ಸ್ಥಳ ಮಾಡಿದ್ದಾರಲ್ಲ? ಅದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು.

ಪ್ರಧಾನಿ ಹೆಸರು ಪ್ರಸ್ತಾಪದಿಂದ ಗದ್ದಲ
ಪ್ರಧಾನಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾದ-ಪ್ರತಿವಾದ ನಡೆಯಿತು. ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಮರಿತಿಬ್ಬೇಗೌಡ ಅವರು, ಆಯನೂರು ಮಂಜುನಾಥ್ ಮತ್ತು ಹರಿಪ್ರಸಾದ್ ಅವರು ಬಳಸಿದ್ದ ಒಂದು ಪದವನ್ನು ಕಡತದಿಂದ ತೆಗೆದುಹಾಕಿ ರೂಲಿಂಗ್ ನೀಡಿದರು.
ವಿಧಾಣ ಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಒಂದು ವಿಧೇಯಕದ ಬಗ್ಗೆ ಇಷ್ಟೊಂದು ಸತಾಯಿಸಿದ ಉದಾಹರಣೆ ಹಿಂದೆಂದೂ ಇಲ್ಲ. ಉತ್ತರ ನೀಡಲು ಸರ್ಕಾರ ಸಿದ್ದ ಇದೆ. ಉತ್ತರ ನಿಮಗೆ ತೃಪ್ತಿ ಕೊಡದಿದ್ದಲ್ಲಿ ನಂತರ ಬೇಕಿದ್ದಲ್ಲಿ ಮತ್ತೆ ಸ್ಪಷ್ಟೀಕರಣ ಕೊಡುತ್ತೇವೆ. ಬರೀ ಎಳೆದುಕೊಂಡು ಹೋಗುತ್ತೀರಾ? ಉತ್ತರ ಕೊಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಕಾನೂನು ತರಲು ತರಾತುರಿ ಯಾಕೆ?
ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಅವರು ಮಾತನಾಡಿ, ತರಾತುರಿ ಯಾಕೆ ಎಂದು ಪ್ರಶ್ನಿಸಿದರು. ಕಂದಾಯ ಸಚಿವ ಆರ್. ಅಶೋಕ್ ಅವರು, ಆರು ಬಾರಿ ಶಾಸಕರಾದ ನಾಯಕರಿಬ್ಬರು, ಇದು ಎಸಿ, ಕಂದಾಯ ಅಧಿಕಾರಿಗಳಿಗೆ ದುಡ್ಡು ಹೊಡೆಯುವ ಕಾನೂನು ಎಂದು ಹೇಳಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರು 79 ಎ, ಬಿ ಓಬಿರಾಯನ ಕಾಲದ ಕಾನೂನು, ಇದನ್ನು ತೆಗೆದುಹಾಕಿ ಎಂದು ಹೇಳಿದ್ದರು. ಇದಕ್ಕೆ ದಾಖಲೆ ನಮ್ಮಲ್ಲಿ ಇದೆ ಎಂದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್, ಇದು ಅವರ ವೈಯಕ್ತಿಕ ಅಭಿಪ್ರಾಯ. ಅದು, ಪಕ್ಷದ ಅಭಿಪ್ರಾಯ ಅಲ್ಲ ಎಂದರು. ಈ ವೇಳೆ ಸದನದಲ್ಲಿ ಮತ್ತೆ ಗದ್ದಲದ ವಾತಾವರಣ ಸೃಷ್ಠಿಯಾಯಿತು. ಬಳಿಕ ಸಚಿವರು ಪ್ರಸ್ತಾಪಿಸಿದ ಸದಸ್ಯರ ಹೆಸರನ್ನು ಕಡತದಿಂದ ತೆಗೆದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು.

ಇದು ಭೂ ಕಳ್ಳರ ಕಾಯ್ದೆ
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡಿ, ಇದು ಸುಧಾರಣಾ ಕಾಯ್ದೆಯಲ್ಲ ಇದು, ಭೂ ಕಳ್ಳರ ಕಾಯ್ದೆ. ಸಿಎಂ ಯಡಿಯೂರಪ್ಪ ರೈತ ಚಳವಳಿಯಿಂದಲೇ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಅವರ ಹೋರಾಟ, ಚಳವಳಿ ಮೆಚ್ಚುತ್ತೇನೆ. ಯಡಿಯೂರಪ್ಪ ಸಿಎಂ ಆದಾಗ ರೈತರು ಸಂತಸ ಪಟ್ಟಿದ್ದರು. ನಾನೂ ಕೂಡ ಸಂತಸ ಪಟ್ಟಿದ್ದೆ. ರೈತರ ಶಾಲು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಿರಿ, ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ದಿರಿ. ಇದು ಇತಿಹಾಸ ಆದರೆ ಇಂತಹ ಹಿರಿಯ ಮೇಧಾವಿ, ಹೋರಾಟಗಾರ, ರೈತರ ಮಗ ಯಡಿಯೂರಪ್ಪ ಈ ರೀತಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ನೋವಿನ ಸಂಗತಿ ಎಂದರು.
Recommended Video

ಕಾನೂನಿಂದಲೇ ಗೋವು ಸಾಯಲಿವೆ
ಗೋವಿನ ರಕ್ಷಣೆಗೆ ನೆರವು ನೀಡಿ ಎಂದು ಬಂದ ಗೋ ಸಂರಕ್ಷಕರು ಸ್ವಾಮಿ ವಿವೇಕಾನಂದರನ್ನು ಕೋರಿದ್ದರು. ಅದಕ್ಕೆ ಸ್ವಾಮಿ ವಿವೇಕಾನಂದರು ಪ್ರತಿಕ್ರಿಯಿಸುತ್ತಾ ನನಗೂ ಗೋವಿನ ಬಗ್ಗೆ ಅನುಕಂಪ ಇದೆ. ದಯಮಾಡಿ ಗೋಶಾಲೆ ಕಾರ್ಯಕ್ರಮ ಬದಿಗೊತ್ತಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ಮಾಡುವ ಕೆಲಸ ಮಾಡೋಣ ಎಂದು ಗೋರಕ್ಷಕರಿಗೆ ಕರೆ ನೀಡಿದ್ದರು. ಗೋ ಹತ್ಯೆ ನಿಷೇಧ ಅಂತೀರಲ್ಲ? ಈ ಕಾಯ್ದೆ ತಂದರೆ ಒಂದು ಹಸುವೂ ಇರಲ್ಲ. ಎಲ್ಲ ಗೋವು ಮೇವಿಲ್ಲದೆ ಅವೇ ಸಾಯಲಿವೆ. ಕೋಳಿ, ಹಂದಿ ಸಾಕಾಣೆಯೂ ನಾಶವಾಗಲಿದೆ ಎಂದು ಮರಿತಿಬ್ಬೆಗೌಡ ಅವರು ಆತಂಕ ವ್ಯಕ್ತಪಡಿಸಿದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications