ದೂರಸಂಪರ್ಕ ಚಿಕಿತ್ಸೆಗೆ ಕೈಕೊಟ್ಟ ವೈದ್ಯ ವಿದ್ಯಾರ್ಥಿಗಳ ಮೇಲೆ ಡಿಸಿಎಂ ಬೇಸರ
ಬೆಂಗಳೂರು, ಮೇ 25: ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೋಮ್ ಐಸೋಲೇಶನ್ ಚಿಕಿತ್ಸೆಯ ಬಗ್ಗೆ ಅವಲೋಕನ ಮಾಡಿದರು. ಕೋವಿಡ್ ಹೋಮ್ ಐಸೋಲೇಶನ್ ವ್ಯವಸ್ಥೆಯಲ್ಲಿ ಟೆಲಿಕನ್ಸಲ್ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸ್ಟೆಪ್ಡೌನ್ ವ್ಯವಸ್ಥೆಯ ಬಗ್ಗೆ ಪರಾಮರ್ಶೆಯನ್ನು ಡಿಸಿಎಂ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರಸಂಪರ್ಕದ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಾರದ ವಿದ್ಯಾರ್ಥಿಗಳ ವರ್ತನೆಗೆ ಡಿಸಿಎಂ ಅತೀವ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ʼಸ್ಟೆಪ್ಡೌನ್ʼ ವ್ಯವಸ್ಥೆಯ ಪ್ರಗತಿ ಪರಿಶೀಲನೆಯನ್ನು ಡಿಸಿಎಂ ನಡೆಸಿದರು. ಈ ಸಂದರ್ಭದಲ್ಲಿ ಎರಡನೇ ಅಲೆಯಲ್ಲಿ ಹೋಮ್ ಐಸೋಲೇಶನ್ ವ್ಯವಸ್ಥೆ ಆಪ್ತರಕ್ಷಕನಂತೆ ಬದಲಾಗಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 10,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಹಾಗೂ 800ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಮನಸಾರೆ ಅಭಿನಂದಿಸುವೆ ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿತರಿಗೆ ಟೆಲಿಕನ್ಸಲ್ಟೆನ್ಸಿ ಮೂಲಕ ಸ್ಟೆಪ್ಡೌನ್ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಅಂತಿಮ ವರ್ಷದ ಎಲ್ಲ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವಂತೆ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರನ್ನು ಕೋರಲಾಗಿತ್ತು.

ದೊರೆಯದ ಸೂಕ್ತ ಸ್ಪಂದನೆ
ಈ ಮನವಿಗೆ ದೊಡ್ಡ ಮಟ್ಟದ ಸ್ಪಂದನೆ ವೈದ್ಯವಿದ್ಯಾರ್ಥಿಗಳಿಂದ ದೊರೆತಿಲ್ಲ. ಈ ವಿಚಾರವಾಗಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ "ವೈದ್ಯ ಸೇವೆ ಎಂದರೆ ಸಂಕಷ್ಟ ಕಾಲದಲ್ಲಿ ಜನರ ಸೇವೆಗೆ ಧಾವಿಸುವುದೇ ಹೊರತು ಪಲಾಯನ ಮಾಡುವುದಲ್ಲ. ಕಡಿಮೆ ಪ್ರಮಾಣದ ವಿದ್ಯಾರ್ಥಿಗಳು ಬಂದು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಹೊರಗೆ ಉಳಿದಿದ್ದಾರೆ. ಇದು ಬೇಸರದ ಸಂಗತಿ ಎಂದರು. ಕೇವಲ ಸೋಂಕಿತರಿಗೆ ಕರೆ ಮಾಡಿ ವೈದ್ಯಕೀಯ ಸಲಹೆ ನೀಡಲು ಹಿಂದೆಮುಂದೆ ನೋಡುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಯಾವ ಸಂದೇಶ ನೀಡಲಿದ್ದಾರೆ. ನಮ್ಮ ಭವಿಷ್ಯದ ಕಥೆ ಏನು? ಎಂದು ಬೇಸರ ವ್ಯಕ್ತಪಡಿಸಿದರು.

ಹೋಮ್ ಐಸೋಲೇಷನ್ ದೊಡ್ಡ ಪರಿಹಾರ
ಕೋವಿಡ್ ಸಂದರ್ಭದಲ್ಲಿ ಹೋಮ್ ಐಸೋಲೇಷನ್ ಎನ್ನುವುದು ಅತಿದೊಡ್ಡ ಪರಿಹಾರವಾಗಿದೆ. ಬೆಂಗಳೂರಿನಂಥ ನಗರದಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಕರೆತಂದು ನಿರ್ವಹಣೆ ಮಾಡೋದು ಬಹಳ ಕಷ್ಟ ಎಂದ ಡಿಸಿಎಂ, ಈ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು. ಎರಡನೇ ಅಲೆ ಬಂದ ಮೇಲೆ ಈವರೆಗೆ 3.6 ಲಕ್ಷ ಜನ ಸೋಂಕಿತರಿಗೆ ಈ ವ್ಯವಸ್ಥೆಯಲ್ಲಿ ಸೇವೆ ಒದಗಿಸಲಾಗಿದೆ. ಇದುವರೆಗೆ 6 ಲಕ್ಷ ಮ್ಯಾನುಯಲ್ ಕರೆಗಳನ್ನು ಮಾಡಲಾಗಿದೆ. 5 ಲಕ್ಷಕ್ಕೂ ಹೆಚ್ಚು ಎಸ್ಎಂಎಸ್ ಸಂದೇಶಗಳ ಮೂಲಕ ವೈದ್ಯಕೀಯ ಸಲಹೆ ನೀಡಲಾಗಿದೆ. 8,000 ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸೂಚಿಸಲಾಗಿದ್ದು, 4,700 ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಇನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ 1,000ಕ್ಕೂ ಹೆಚ್ಚು ಸೋಂಕಿತರನ್ನು ತಕ್ಷಣವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತುರ್ತಾಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

ಉತ್ತಮ ಸೇವೆ ಸಲ್ಲಿಸಿದರಿಗೆ ಶ್ಲಾಘನೆ
ಈ ನೆಟ್ವರ್ಕ್ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳ ಜತೆಗೆ 800ಕ್ಕೂ ಹೆಚ್ಚು ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನವನ್ನು ಒಟ್ಟಾಗಿಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಅನೇಕ ಜೀವಗಳನ್ನು ಉಳಿಸಿದ ತೃಪ್ತಿ ಸರಕಾರಕ್ಕಿದೆ. ಇದರ ಶ್ರೇಯಸ್ಸು ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳೂ ಉಳಿದೆಲ್ಲರಿಗೂ ಸಲ್ಲುತ್ತದೆ ಸೇವೆಯಲ್ಲಿ ತೊಡಗಿಸಿಕೊಂಡ ಪ್ರಶಂಸಿಸಿದ್ದಾರೆ. ವರ್ಚುವಲ್ ಸಭೆಯಲ್ಲಿ ಹೋಮ್ ಹೈಸೋಲೇಷನ್ ಉಸ್ತುವಾರಿ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಸ್ಟೆಪ್ಡೌನ್ ವ್ಯವಸ್ಥೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿರುವ 10 ವೈದ್ಯರು ಮತ್ತು 10 ವೈದ್ಯ ವಿದ್ಯಾರ್ಥಿಗಳ ಹೆಸರುಗಳನ್ನು ಓದಿದರು. ಅವರ ಸೇವೆಯನ್ನು ಡಿಸಿಎಂ ಅವರು ಶ್ಲಾಘಿಸಿದರು.
Recommended Video

ಗ್ರಾಮೀಣ ಭಾಗದಲ್ಲಿ ಹೋಮ್ ಐಸೋಲೇಷನ್ ಇಲ್ಲ
ಗ್ರಾಮೀಣ ಭಾಗದಲ್ಲಿ ಈಗ ಹೋಮ್ ಐಸೋಲೇಷನ್ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಮಾಡಲಾಗಿದೆ. ಕೋವಿಡ್ ನಿರ್ವಹಣೆ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಿ ತಾಲೂಕು ಮಟ್ಟದಲ್ಲಿಯೇ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಸನಿಹದಲ್ಲಿ ಅಥವಾ ಅವರ ತಾಲೂಕಿನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದರು.












Click it and Unblock the Notifications