Cyclone Alert: ಅರಬ್ಬಿ-ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಿಂಗಾರು ಸಕ್ರಿಯ, ಕರ್ನಾಟಕ ಮೇಲೆ ಪ್ರಭಾವ, ಎಲ್ಲೆಲ್ಲಿ ಮಳೆ?
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕದಲ್ಲಿ ಈವರೆಗೆ ದುರ್ಬಲಗೊಂಡಿರುವ ಮಳೆ ಮತ್ತೆ ಚುರಕುಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ಒಂದೆಡೆ ಹಿಂಗಾರು ಮಳೆ ಸಕ್ರಿಯಗೊಳ್ಳುತ್ತಿದೆ. ಮತ್ತೊಂದೆಡೆ ಅರಬ್ಬಿ ಸಮುದ್ರ ವಾಯುಭಾರ ಕುಸಿತಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಪ್ರಾಥಮಿಕ ಹಂತ (ಸುಳಿಗಾಳಿ) ಹಂತದಲ್ಲಿದೆ. ಇದರ ಪ್ರಭಾವವು ಕರ್ನಾಟಕದಲ್ಲಿ ಮೇಲೆ ಆಗಲಿದೆಯೇ ಎಂಬುದ ಮಾಹಿತಿ ಇಲ್ಲಿದೆ.
ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇದು ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಾಡು ಹೊಂದಿ. ಪಶ್ಚಿಮ ದಿಕ್ಕಿನತ್ತ ಸಾಗಲಿದೆ. ಆದರೆ ಇದರಿಂದ ಕರ್ನಾಟಕ ಕರಾವಳಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಜ್ಞಾನಿ ಡಾ.ಪ್ರಸಾದ್ ಅವರು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಸದ್ಯ ಸುಳಿಗಾಳಿ ರೂಪದಲ್ಲಿರುವ ವೈಪರಿತ್ಯವು ನಾಳೆ ಶುಕ್ರವಾರ ಅಕ್ಟೊಬರ್ 20ರಂದು ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ. ನಂತರ ಅಕ್ಟೊಬರ್ 23ರಂದು ಮತ್ತಷ್ಟು ತೀವ್ರಗೊಂಡ ಅನೇಕ ಕಡೆಗಳಲ್ಲಿ ತನ್ನದೇ ಆದ ಪ್ರಭಾವ ಬೀರುವ ಸಾಧ್ಯತೆಗಳು ಇವೆ ಎಂದರು.
ಭಾರತದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ದಕ್ಷಿಣ ದ್ವೀಪ ಎನ್ನಲಾಗುವ 'ತಮಿಳುನಾಡು, ಪಾಂಡಿಚೇರಿ, ಕೇರಳ, ಕರ್ನಾಟಕ ದಕ್ಷಿಣ ಒಳನಾಡು, ರಾಯಲ್ಸೀಮಾ, ಆಂಧ್ರ ಪ್ರದೇಶ ಕರಾವಳಿ ಭಾಗಗಳಲ್ಲಿ' ಈಶಾನ್ಯ ದಿಕ್ಕಿನಿಂದ ಬೀಸುವ ಹಿಂಗಾರು ಮಳೆಯ ಮಾರುತಗಳ ಸಕ್ರಿಯಗೊಂಡಿವೆ. ಆದರೆ ಆರಂಭದಲ್ಲಿ ಈ ಹಿಂಗಾರು ಮಳೆ ದುರ್ಬಲವಾಗಿದ್ದು, ವಾರದ ಬಳಿಕ ಆರ್ಭಟಿಸಲಿದೆ ಎಂದರು.
ಕರ್ನಾಟದಲ್ಲಿ ಎಲ್ಲೆಲ್ಲಿ ಹೇಗಿರಲಿದೆ ಮಳೆ?
ಇದೆಲ್ಲ ವೈಪರಿತ್ಯಗಳ ಪ್ರಭಾವದಿಂದಾಗಿ ಮುಂದಿನ ಒಂದು ವಾರ ಕರಾವಳಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆ ಹಗುರವಾಗಿ ಮಳೆ ಗಲಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಬಿಸಿಲಿನ ವಾತಾವರಣ ಹೆಚ್ಚಾಗಿರಲಿದೆ. ಬೆಂಗಳೂರಿನಲ್ಲಿ ನಾಳೆ ಶುಕ್ರವಾರ ಮತ್ತು ಶನಿವಾರ ತುಸು ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಅಲ್ಲಲ್ಲಿ ಹಗುರ ಮಳೆ ಸಾಧ್ಯತೆಗಳು ಇವೆ. ಈ ವೇಳೆ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ವಿಜ್ಞಾನಿ ಡಾ. ಪ್ರಸಾದ್ ಅವರು ಮುನ್ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಅಕ್ಟೋಬರ್ 27ರವರೆಗೆ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ನಂತರ ವಾಡಿಕೆಗಿಂತ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications