‘ಇಂದಿರಾ ಕ್ಯಾಂಟೀನ್’ ಮುಚ್ಚಿ ಅಂತಾ ಹೇಳಿದ್ರಾ ಸಿಟಿ ರವಿ?
ಬೆಂಗಳೂರು: ಸಿಟಿ ರವಿ ಅವರ ವಿಚಾರ ಭಾರಿ ಚರ್ಚೆಯಾಗ್ತಿದೆ. ಅದರಲ್ಲೂ ಸಿಟಿ ರವಿ ಈ ಹಿಂದೆ ಕೊಟ್ಟಿದ್ದ ಹೇಳಿಕೆಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದು, 'ಇಂದಿರಾ ಕ್ಯಾಂಟೀನ್' ವಿಚಾರದಲ್ಲಿ ಸಿಟಿ ರವಿ ನೀಡಿದ್ದ ಹೇಳಿಕೆ ಟ್ರೋಲ್ಗೆ ಆಹಾರವಾಗುತ್ತಿದೆ. ಹಾಗಾದ್ರೆ 'ಇಂದಿರಾ ಕ್ಯಾಂಟೀನ್' ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಈ ಹಿಂದೆ ಏನ್ ಹೇಳಿದ್ರು? ತಿಳಿಯೋಣ ಬನ್ನಿ.
2013ರಿಂದ 2018ರವರೆಗೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಹಲವು ಯೋಜನೆ ಜಾರಿಗೆ ತಂದರು. ತಮಿಳುನಾಡಿನ 'ಅಮ್ಮ ಕ್ಯಾಂಟೀನ್' ರೀತಿಯೇ 2017ರಲ್ಲಿ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ 175 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಇಂದಿರಾ ಕ್ಯಾಂಟೀನ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆಗ ಸಿಟಿ ರವಿ ಅವರು ಕೂಡ 'ಇಂದಿರಾ ಕ್ಯಾಂಟೀನ್' ಬಗ್ಗೆ ಹೇಳಿಕೆ ನೀಡಿದ್ರು, ಅದು ಈಗ ಟ್ರೋಲ್ಗೆ ಗುರಿಯಾಗಿ ಚರ್ಚೆಗೆ ಗ್ರಾಸವಾಗಿದೆ.

'ಊಟಕ್ಕೆ ಇಲ್ಲದ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ!'
ಹೌದು, 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ 'ಇಂದಿರಾ ಕ್ಯಾಂಟೀನ್' ಹೆಸರಿನ ಬಗ್ಗೆ ಮೊದಲು ಚರ್ಚೆ ಶುರುವಾಗಿತ್ತು. ಆಗ ಸಿಟಿ ರವಿ ಅವರು ಹೇಳಿಕೆ ನೀಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ಊಟಕ್ಕೆ ಇಲ್ಲದ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ, ಆ ಹೆಸರಿನಲ್ಲಿ ದುಡ್ಡು ಹೊಡೆಯೋದಕ್ಕೆ ಕಾಂಗ್ರೆಸ್ ಮಾಡಿದ ಸಂಚು ಇದು. ಮುಖ್ಯಮಂತ್ರಿಗಳು ಯಾವುದೇ ನಿರ್ಧಾರ ತಗೋಂಡಿಲ್ಲ, ಆದರೆ ನಾನು ವಿನಂತಿ ಮಾಡ್ತೇನೆ ನೀವು 'ಇಂದಿರಾ ಕ್ಯಾಂಟೀನ್' ಮುಚ್ಚಿ. ಇಂದಿರಾ ಕ್ಯಾಂಟೀನ್ ಮುಚ್ಚಿದರೆ ಸರ್ಕಾರಿ ಹಣ ಪೋಲಾಗುವುದನ್ನು ತಪ್ಪಿಸಬಹುದು' ಎಂದಿದ್ದರು.
'ಸೋನಿಯಾ ಗಾಂಧಿ ಹೆಸರೂ ಇಡಲಿ'
ಅಲ್ಲದೆ ಇದೇ ವೇಳೆ ' ಇಂದಿರಾ ಕ್ಯಾಂಟೀನ್' ವಿರುದ್ಧ ವಾಗ್ದಾಳಿ ಮುಂದುವರಿಸಿದ್ದ ಸಿಟಿ ರವಿ, 'ರಾಜಕೀಯ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಅಂತಾ ಇಟ್ಟಿದ್ದಾರೆ, ಕಾಂಗ್ರೆಸ್ ದುಡ್ಡಲ್ಲೇ ಕೊಡುವುದಾದರೆ ನಮ್ಮದೇನು ತೊಂದರೆ ಇಲ್ಲ. ಕಾಂಗ್ರೆಸ್ನವರು ಕೊಳ್ಳೆ ಹೊಡೆದ ದುಡ್ಡಿನಲ್ಲಿ ಜನರಿಗೆ ಅನ್ನ ಹಾಕೋದಾದರೆ ಅವರ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡಂಗೆ ಆಗುತ್ತೆ. ಅವರು ಕೊಳ್ಳೆ ಹೊಡೆದ ದುಡ್ಡಲ್ಲಿ ಊಟ ಹಾಕೋದಾದರೆ ಇಂದಿರಾ ಕ್ಯಾಂಟೀನ್ ಹೆಸರೂ ಇಡಲಿ, ಅವರ ತಂದೆ ಜವಹರಲಾಲ್ ನೆಹರು ಹೆಸರೂ ಇಡಲಿ, ಅವರ ಮಗ ರಾಜೀವ್ ಗಾಂಧಿ ಅವರ ಹೆಸರೂ ಇಡಲಿ, ಇನ್ನೂ ಬೇಕಾದ್ರೆ ಸೋನಿಯಾ ಗಾಂಧಿ ಅವರಿಗೆ ಸಂತೋಷ ಆಗುತ್ತೆ ಸೋನಿಯಾ ಕ್ಯಾಂಟೀನ್ ಅಂತಾ ಹೇಳಿ ನಾನ್ ವೆಜ್ ಮಾಡಲಿ' ಎಂದಿದ್ದರು.

ಬಡವರ 5 ಸ್ಟಾರ್ ಹೋಟೆಲ್ಗೆ ಮರುಜೀವ?
ಹೀಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ವಿಚಾರ ಪುನಃ ಮುನ್ನೆಲೆಗೆ ಬರುತ್ತಿದೆ. ಅದ್ರಲ್ಲೂ ಸಿಟಿ ರವಿ ಅವರು 'ಇಂದಿರಾ ಕ್ಯಾಂಟೀನ್' ವಿಚಾರವಾಗಿ ನೀಡಿದ್ದ ಹೇಳಿಕೆ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಹಾಗೇ ಬಿಜೆಪಿ ಸರ್ಕಾರದಲ್ಲಿ 'ಇಂದಿರಾ ಕ್ಯಾಂಟೀನ್'ಗಳಿಗೆ ಸರಿಯಾಗಿ ಅನುದಾನ ನೀಡಿಲ್ಲ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದು. ಇಷ್ಟೆಲ್ಲಾ ಆರೋಪಗಳ ನಡುವೆ 'ಇಂದಿರಾ ಕ್ಯಾಂಟೀನ್'ಗಳಿಗೆ ಮರುಜೀವ ನೀಡಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಬಿಜೆಪಿ ಅವಧಿಯಲ್ಲಿ ಅವಸಾನ?
ಅಂದಹಾಗೆ ಕಾಂಗ್ರೆಸ್ ಈ ಆರೋಪವನ್ನ ಮೊದಲಿನಿಂದ ಮಾಡುತ್ತಲೇ ಬಂದಿದೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ಯಾಂಟೀನ್ಗಳು ಹೊಳಪು ಕಳೆದುಕೊಳ್ಳಲು ಪ್ರಾರಂಭಿಸಿದವು. ಗುತ್ತಿಗೆದಾರರಿಗೆ ಪಾವತಿ ವಿಳಂಬ, ನಗರ ಸ್ಥಳೀಯ ಸಂಸ್ಥೆಗಳ ಹಂಚಿಕೆಯಲ್ಲಿ ಗಣನೀಯ ಕಡಿತ ಮತ್ತು ರಾಜ್ಯ ಸರ್ಕಾರ ಕಡಿತ ಮಾಡಿದ್ದ ಅನುದಾನ ಕ್ಯಾಂಟೀನ್ಗಳ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು ಎಂಬ ಆರೋಪವಿತ್ತು. ಆದ್ರೆ ಈಗ ಮತ್ತೊಮ್ಮೆ ಸಿಎಂ ಆಗಿರುವ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ಗಳಿಗೆ ಮರುಜೀವ ತುಂಬಲು ಸಜ್ಜಾಗಿದ್ದಾರೆ.

'ಇಂದಿರಾ ಕ್ಯಾಂಟೀನ್'ಗೆ ದುಡ್ಡು ಕೊಟ್ಟಿರಲಿಲ್ವಾ?
2017-18 ಮತ್ತು 2018-19ರಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರಗಳು ಕ್ಯಾಂಟೀನ್ಗೆ ಕ್ರಮವಾಗಿ 100 ಮತ್ತು 145 ಕೋಟಿ ರೂ. ನೀಡಿದ್ದವು. ಆದರೆ ಬಿಜೆಪಿ ಸರ್ಕಾರ ಗ್ರಾಹಕರ ಕೊರತೆ ಎಂದು ಹೇಳಿ 2 ವರ್ಷಗಳಿಂದ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಗಂಭೀರ ಆರೋಪವನ್ನ ಕಾಂಗ್ರೆಸ್ ಮಾಡಿತ್ತು. ಇದರಿಂದಾಗಿ 2022-23ರ ಬಜೆಟ್ನಲ್ಲಿ ಬಿಬಿಎಂಪಿ 63 ಕೋಟಿ ರೂ. ನೀಡಿತ್ತು. ಪ್ರಾಸಂಗಿಕವಾಗಿ, ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮುನ್ಸಿಪಲ್ ಕಾರ್ಪೊರೇಶನ್ನ ಪ್ರತಿ ವಾರ್ಡ್ಗಳಲ್ಲಿ 'ಅಟಲ್ ಆಹಾರ ಕೇಂದ್ರ' ಸ್ಥಾಪಿಸುವುದಾಗಿ ಭರವಸೆ ನೀಡಿತ್ತು.












Click it and Unblock the Notifications