ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಲು ಅಡ್ಡಿಯಾಯಿತು ಜಾತಿ?
ಬೆಂಗಳೂರು, ಫೆಬ್ರವರಿ 06: ಇಂದು ಹತ್ತು ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆ ಆದರು. ಸಂಪುಟ ಸೇರಿಯೇ ತಿರುತ್ತಾರೆಂದು ನಿರೀಕ್ಷೆ ಇಟ್ಟಿದ್ದ ಕೆಲವರ ಹೆಸರು ಪಟ್ಟಿಯಿಂದ ಕೊನೆಯ ಕ್ಷಣದಲ್ಲಿ ಹೊರಬಿತ್ತು. ಅದರಲ್ಲಿ ಒಂದು ಹೆಸರು ಸಿ.ಪಿ.ಯೋಗೇಶ್ವರ್ ಅವರದ್ದು.
'ಆಪರೇಷನ್ ಕಮಲ'ದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. 'ನೂತನ ಸಚಿವ ಯೋಗೇಶ್ವರ್ ಅವರಿಗೆ ಶುಭಾಶಯಗಳು' ಫ್ಲೆಕ್ಸ್ಗಳು ಚನ್ನಪಟ್ಟಣ, ರಾಮನಗರದಲ್ಲಿ ರಾರಾಜಿಸುತ್ತಿದ್ದವು. ನಿನ್ನೆಯವರೆಗೂ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಯೋಗೇಶ್ವರ್ ಗೆ ಮಂತ್ರಿ ಕುರ್ಚಿ ಕೈಯಿಂದ ಜಾರಿದೆ.
ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?
ಯಡಿಯೂರಪ್ಪ ಆಪ್ತರಾಗಿದ್ದರೂ ಮಂತ್ರಿ ಪದವಿ ಸಿಗದೇ ಇರುವುದಕ್ಕೆ ಯೋಗೇಶ್ವರ್ ಅವರ ಜಾತಿಯೇ ಕಾರಣ ಎನ್ನಲಾಗುತ್ತಿದೆ. ಇಂದು ಪ್ರಮಾಣ ವಚನ ಸ್ವೀಕರಿಸಿದ ಹತ್ತು ಮಂದಿಯಲ್ಲಿ ನಾಲ್ಕು ಮಂದಿ ಒಕ್ಕಲಿಗ ಸಮುದಾಯವರಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಸಹ ಒಕ್ಕಲಿಗ ಸಮುದಾಯದವರಾಗಿದ್ದು ಅವರಿಗೂ ಮಂತ್ರಿ ಸ್ಥಾನ ಕೊಟ್ಟರೆ ಒಂದು ಜಾತಿಗೆ ಹೆಚ್ಚಿನ ಆದ್ಯತೆ ಆಗುತ್ತದೆಯೆಂಬ ಲೆಕ್ಕಾಚಾರ ಬಿಜೆಪಿಯದ್ದು.
ಯೋಗೇಶ್ವರ್ ಅವರನ್ನು ಬೆಳೆಸಲು ನಿರ್ಧರಿಸಿದ್ದ ಪಕ್ಷ
ಸಿ.ಪಿ.ಯೋಗೇಶ್ವರ್ ಅವರನ್ನು ರಾಮನಗರ-ಕನಕಪುರ ಭಾಗದ ಪ್ರಭಾವಿ ಜಾತಿ ನಾಯಕ ಮಾಡುವ ಉಮೇದು ಬಿಜೆಪಿ ಗೆ ಇತ್ತು. ಇದೇ ಕಾರಣದಿಂದ ಸೋತರೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ನಿರ್ಣಯವನ್ನು ಮೊದಲಿಗೆ ಮಾಡಲಾಗಿತ್ತು.
ಏಳು ಮಂದಿ ಒಕ್ಕಲಿಗ ಸಮುದಾಯದ ಮಂತ್ರಿಗಳು
ಆದರೆ ಇಂದು ಸೇರ್ಪಡೆಯಾದ ಸಚಿವರನ್ನು ಸೇರಿ ಈಗಾಗಲೇ ಏಳು ಮಂದಿ ಒಕ್ಕಲಿಗ ಸಮುದಾಯದವರೇ ಸಂಪುಟದಲ್ಲಿದ್ದಾರೆ. ಹಾಗಾಗಿ ಯೋಗೇಶ್ವರ್ ಅವರಿಗೆ ಕಾಯುವಂತೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ.
ಸಚಿವ ಸ್ಥಾನ ಕೈತಪ್ಪಿದಕ್ಕೆ ಹೈಕಮಾಂಡ್ ಅಲ್ಲ, ಸಿಎಂ ಕಾರಣ: ಲಿಂಬಾವಳಿ
ಯೋಗೇಶ್ವರ್ ಗೆ ಸ್ಥಾನ ನೀಡಲು ವಿಶ್ವನಾಥ್ ವಿರೋಧ?
ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ವಿಶೇಷವಾಗಿ ಉಪಚುನಾವಣೆ ಸೋತಿರುವ ಎಚ್.ವಿಶ್ವನಾಥ್ ಅವರು ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ ಎನ್ನಲಾಗುತ್ತಿದೆ. ಬಹಿರಂಗವಾಗಿಯೂ ಅವರು ಈ ಬಗ್ಗೆ ಮಾತನಾಡಿದ್ದರು.
ಎಚ್.ವಿಶ್ವನಾಥ್ ಹಠಕ್ಕೆ ಯೋಗೇಶ್ವರ್ ಬಲಿ?
ಒಂದು ವೇಳೆ ಚುನಾವಣೆ ಸೋತಿರುವ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ದೊರೆತರೆ ನಂತರ ಅವರನ್ನು ಪರಿಷತ್ ಸದಸ್ಯರನ್ನಾಗಿಸಬೇಕಾಗುತ್ತದೆ. ಬಿಜೆಪಿಗೆ ಇರುವ ಸಂಖ್ಯಾಬಲದ ಪ್ರಕಾರ ಕೆಲವರನ್ನಷ್ಟೆ ಸದಸ್ಯರನ್ನಾಗಿಸಬಹುದು. ಒಂದು ವೇಳೆ ಯೋಗೇಶ್ವರ್ ಅವರನ್ನು ಸದಸ್ಯರನ್ನಾಗಿಸಿದರೆ ಚುನಾವಣೆ ಸೋತಿರುವ ತಮ್ಮನ್ನು ಪರಿಷತ್ ಸದಸ್ಯರನ್ನಾಗಿಸಲಾಗುವುದಿಲ್ಲ ಎಂಬ ಲೆಕ್ಕಾಚಾರ ವಿಶ್ವನಾಥ್ ಅವರಿಗಿದೆ. ವಿಶ್ವನಾಥ್ ಅವರ ತೀವ್ರ ಒತ್ತಾಯ, ಪರೋಕ್ಷ ಬೆದರಿಕೆ ಬಳಿಕ ಅವರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಅವರು ಕೊನೆಯ ಘಳಿಗೆಯಲ್ಲಿ ಯೋಗೇಶ್ವರ್ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?
ಪಕ್ಷದೊಳಗಿರುವವರಿಗೂ ಯೋಗೇಶ್ವರ್ ಬೇಕಿರಲಿಲ್ಲ
ಬಿಜೆಪಿ ಪಕ್ಷದ ಒಳಗಿರುವವರಿಗೂ ಯೋಗೇಶ್ವರ್ ಸಚಿವರಾಗುವುದು ಬೇಡವಾಗಿತ್ತು ಎನ್ನಲಾಗಿದೆ. ಆರ್.ಅಶೋಕ್ ಹಾಗೂ ಆಶ್ವತ್ಥನಾರಾಯಣ್ ಬಿಜೆಪಿಯ ಪ್ರಮುಖ ಒಕ್ಕಲಿಗ ಮುಖಂಡರಾಗಿದ್ದಾರೆ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿ ಅವರ ಪ್ರಭಾವ ಪಕ್ಷದಲ್ಲಿ ಹೆಚ್ಚಾಗುವುದು ಹಿರಿಯರಾದ ಅಶೋಕ್ ಅವರಿಗೆ ಬೇಕಿಲ್ಲ ಹಾಗಾಗಿ ಯೋಗೇಶ್ವರ್ ಸಚಿವ ಸ್ಥಾನಕ್ಕೆ ಕೊಕ್ಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.