ಮಹಾರಾಷ್ಟ್ರದಲ್ಲಿ ಕೋವಿಡ್ ಉಲ್ಬಣ: ಕರ್ನಾಟಕದ ಜನರಿಗೆ ಆರೋಗ್ಯ ಇಲಾಖೆ ಸಲಹೆಗಳೇನು?
ಬೆಂಗಳೂರು, ಅಕ್ಟೋಬರ್ 25: ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ರೋಪಾಂತರ ತಳಿಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಧ್ಯೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುವವರು ಆರೋಗ್ಯ ಕಡೆಗೆ ಹೆಚ್ಚು ಗಮನ ಹರಿಸುವಂತೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಮಂಗಳವಾರ ಸಲಹಾ ಪತ್ರ ಹೊರಡಿಸಿರುವ ಇಲಾಖೆಯು ಕೆಲವು ಸಲಹೆಗಳನ್ನು ರಾಜ್ಯದ ಜನರಿಗೆ ನೀಡಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ BA 2.75 ಮತ್ತು BJ.1 ಹಾಗೂ ಓಮಿಕ್ರಾನ್ ರೋಪಾಂತರ ತಳಿಯು ಪತ್ತೆಯಾಗಿದೆ. ಕರ್ನಾಟಕ, ಬೆಂಗಳೂರಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದೆ.
ಹೀಗಾಗಿ ದೀಪಾವಳಿ ಮತ್ತು ಮುಂಬರಲಿರುವ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಜನರು ಗುಂಪುಗೂಡುತ್ತಾರೆ. ಇದರಿಂದ ಕೊರೊನಾ ಹೆಚ್ಚಾಗುವ ಸಂಭವವಿದೆ. ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಕಂಡು ಬಂದಲ್ಲೂ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ. ಕೊರೋನಾ ತಪಾಸಣೆ ಸಹ ಮಾಡಿಕೊಂಡು ವರದಿ ಬರುವವರೆಗೆ ಪ್ರತ್ಯೇಕವಾಗಿರಿ ಎಂದು ತಿಳಿಸಿದೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರ ಆರೈಕೆ ಪಡೆದರೆ ಒಳಿತು. ಎಸಿ ಕೊಠಡಿಯಲ್ಲಿದ್ದರೆ, ಅಗತ್ಯ ಗಾಳಿ ಬೆಳಕಿಲ್ಲದ ಸ್ಥಳಗಳಲ್ಲಿ ಮಾಸ್ಕ್ ಧರಿಸಿ. ಹಬ್ಬಗಳ ಆಚರಣೆಯನ್ನು ಹೊರಾಂಗಣದಲ್ಲಿ ಆಚರಿಸುವುದು ಮತ್ತು ಗಂಪುಗೂಡುವುದರಿಂದ ದೂರವಿರಲು ಪ್ರಯತ್ನಿಸಿ. ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಬಾಕಿ ಇರುವವರು, ಹಿರಿಯ ನಾಗರಿಕರು ಕೂಡಲೇ ಲಸಿಕೆ ಪಡೆಯಿರಿ. ಇತರ ಕಾಯಿಲೆಗಳಿಂದ ಬಳಲುವವರು ವೈದ್ಯರ ಸಲಹೆ ಮೇರೆಗೆ ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳಬಹುದು.
ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಹಾಗೂ ಪರಿಸರಕ್ಕೆ ಪೂರಕವಾದ ಹಸಿರು ಪಟಾಕಿಗಳನ್ನೆ ಹೊಡೆಯಿರಿ. ಅಲ್ಲದೇ ಪದೇ ಪದೆ ಕೈ ತೊಳೆಯುವುದು, ಕೆಮ್ಮುವಾಗ ಕರವಸ್ತ್ರ ಅಥವಾ ಕೈ ಬಳಕೆ ಮಾಡುವುದು ಸೇರಿದಂತೆ ಅಗತ್ಯ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ. ಈ ಮೂಲಕ ಆರೋಗ್ಯದಿಂದ ಇರುವಂತೆ ಕರ್ನಾಟಕ ಜನರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ.