ಬೆಂಗಳೂರಿಗರೇ ಹುಷಾರ್: ರಾಜ್ಯದ ಪೈಕಿ ಸಿಲಿಕಾನ್ ಸಿಟಿಯಲ್ಲೇ ಅತಿಹೆಚ್ಚು ಕೊರೊನಾ!
ಬೆಂಗಳೂರು, ಜೂನ್ 6: ಕರ್ನಾಟಕದಲ್ಲಿ ಕಡಿಮೆ ಆಯಿತು ಕೊರೊನಾ ವೈರಸ್ ಎನ್ನುವಷ್ಟರಲ್ಲೇ ಲೆಕ್ಕಾಚಾರಗಳು ಉಲ್ಟಾ ಹೊಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಇನ್ನೇನು ಕೊವಿಡ್-19 ಹೋಯ್ತು ಎನ್ನುವಷ್ಟರದಲ್ಲೇ ರಾಜ್ಯದಲ್ಲಿ ಮಹಾಮಾರಿ ಹೊಸ ದಾಖಲೆ ಬರೆದಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 300 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಕೊರೊನಾಗೆ ಕೊರ್ಬೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಲು ಡಿಸಿಜಿಐ ಅನುಮೋದನೆ
ಇದೇ ಅವಧಿಯಲ್ಲಿ 146 ಸೋಂಕಿತರು ಗುಣಮುಖರಾಗಿದ್ದು, ಒಬ್ಬರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಭಾನುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 39,53,359 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 39,10,837 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 2414 ಸಕ್ರಿಯ ಪ್ರಕರಣಗಳಿವೆ.
ಕೇಂದ್ರ ಸರ್ಕಾರದಿಂದ ಪಂಚರಾಜ್ಯಗಳಿಗೆ ಎಚ್ಚರಿಕೆ ಸಂದೇಶ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಮಹಾರಾಷ್ಟ್ರ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಸೂಚನೆ ರವಾನಿಸಿದೆ. ಈ ಸಂಬಂಧ ಜೂನ್ 3ರಂದೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಪತ್ರವೊಂದನ್ನು ಕಳುಹಿಸಿದೆ. ಆ ಮೂಲಕ ಕೊರೊನಾವೈರಸ್ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು "ಕಟ್ಟುನಿಟ್ಟಾದ ನಿಗಾ ಇರಿಸಲು ಮತ್ತು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲು" ಸಚಿವಾಲಯ ತಿಳಿಸಿದೆ. ಅದಾಗ್ಯೂ, ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯು ಏರಿಕೆ ಕಂಡಿದೆ.
301ರಲ್ಲಿ ಬೆಂಗಳೂರಿನಲ್ಲೇ 291 ಪ್ರಕರಣಗಳು ವರದಿ
ಕರ್ನಾಟಕದ ಇಡೀ ರಾಜ್ಯದಲ್ಲಿ 301 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪಕ್ಕಾ ಆಗಿದ್ದರೆ, ಅದರಲ್ಲಿ 291 ಮಂದಿ ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 291 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 17,88,895ಕ್ಕೆ ಏರಿಕೆಯಾಗಿದೆ. ಇದುವರೆಗೂ 17,69,636 ಸೋಂಕಿತರು ಗುಣಮುಖರಾಗಿದ್ದರೆ, 16,964 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೋವಿಡ್-19 ಅಪಾಯ ಇನ್ನೂ ಕಡಿಮೆಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.
ಬೆಂಗಳೂರು ಹೊರತಾಗಿ ಇತರೆ ಎಲ್ಲಾ ಜಿಲ್ಲೆ ಸೇರಿ 10 ಪ್ರಕರಣ
ಕರ್ನಾಟಕದಲ್ಲಿ ವರದಿ ಆಗಿರುವ ಒಟ್ಟು 301 ಕೊರೊನಾವೈರಸ್ ಪ್ರಕರಣಗಳಲ್ಲಿ 291 ಪ್ರಕರಣಗಳು ಬೆಂಗಳೂರು ನಗರ ಜಲ್ಲೆಗೆ ಸೇರಿವೆ. ಉಳಿದ 10 ಸೋಂಕಿತ ಪ್ರಕರಣಗಳ ಪೈಕಿ ಬಳ್ಳಾರಿ 1, ಬೆಳಗಾವಿ 1, ಚಿತ್ರದುರ್ಗ 1, ದಕ್ಷಿಣ ಕನ್ನಡ 2, ಮೈಸೂರು 3, ಶಿವಮೊಗ್ಗ 1 ಹಾಗೂ ಉಡುಪಿ ಜಿಲ್ಲೆಯಲ್ಲಿ 1 ಕೋವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4880 ಜನರಿಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸಲಾಗಿದೆ. 16533 ಜನರಿಗೆ RT-PCR ತಪಾಸಣೆ ನಡೆಸಲಾಗಿದ್ದು, ಒಂದು ದಿನದಲ್ಲಿ ಒಟ್ಟು 21413 ಮಂದಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ.
ಕರ್ನಾಟಕದಲ್ಲಿ ಈವರೆಗೂ 5,44,47,002 ಜನರಿಗೆ ಮೊದಲ ಡೋಸ್, 5,24,51,310 ಜನರಿಗೆ ಎರಡನೇ ಡೋಸ್ ಮತ್ತು 25,87,287 ಮಂದಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 10,93,04,646 ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
Recommended Video