'ಮಿಣಿ ಮಿಣಿ' ಶಬ್ದ ಬಳಕೆಗೆ ನ್ಯಾಯಾಲಯದಿಂದ ತಡೆ!
ಬೆಂಗಳೂರು, ಫೆಬ್ರವರಿ 02: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಿತ್ರ ಅಥವ ಹೆಸರಿನ ಜೊತೆ 'ಮಿಣಿ ಮಿಣಿ' ಶಬ್ದ ಬಳಸಿ ಅಪಹಾಸ್ಯ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಳಿಕ 'ಮಿಣಿ ಮಿಣಿ' ಶಬ್ದದ ಬಗ್ಗೆ ಭಾರಿ ಚರ್ಚೆ ಆರಂಭವಾಗಿತ್ತು.
ಎಚ್. ಡಿ. ಕುಮಾರಸ್ವಾಮಿ ಪರವಾಗಿ ವಕೀಲ ಎಸ್. ಇಸ್ಮಾಯಿಲ್ ಬೆಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ್ ಅಪಹಾಸ್ಯ ಮಾಡದಂತೆ ಆದೇಶಿಸಿದರು.
ಅರ್ಜಿಯಲ್ಲಿ 'ಮಿಣಿ ಮಿಣಿ' ಪದ ಬಳಕೆ ಮಾಡಿ ಅರ್ಜಿದಾರರ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಆದ್ದರಿಂದ, ಪದ ಬಳಕೆ ಮಾಡದಂತೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆಯನ್ನು ಮಾರ್ಚ್ 10ಕ್ಕೆ ನ್ಯಾಯಾಲಯ ಮುಂದೂಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಳಿಕ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದರು. ಆಗ ಬಳಕೆ ಮಾಡಿದ 'ಮಿಣಿ ಮಿಣಿ' ಪದ ಭಾರಿ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಟ್ರಾಲ್ಗಳು ಹರಿದಾಡುತ್ತಿವೆ.

ನ್ಯಾಯಾಲಯದ ಆದೇಶವೇನು?
ಎಚ್. ಡಿ. ಕುಮಾರಸ್ವಾಮಿ ಚಿತ್ರ ಅಥವ ಹೆಸರಿನ ಜೊತೆ 'ಮಿಣಿ ಮಿಣಿ' ಶಬ್ದ ಬಳಸಿ ಅಪಹಾಸ್ಯ ಮಾಡಬಾರದು. ಯಾವುದೇ ಮಾನಹಾನಿ ವಿಚಾರಗಳನ್ನು ಪ್ರಕಟಿಸಬಾರದು. ಅರ್ಜಿದಾರರು ಕೋರಿರುವಂತೆ ಈಗಾಗಲೇ ಪೋಸ್ಟ್ ಮಾಡಿರುವ ಮಾನ ಹಾನಿಕಾರಕ ಸಂಗತಿ ಸಂಗತಿಗಳನ್ನು ತೆಗೆದು ಹಾಕಬೇಕು ಎಂದು ಮಾಧ್ಯಮ, ಟ್ವಿಟರ್, ಫೇಸ್ಬುಕ್, ಟಿಕ್ಟಾಕ್ಗಳಿಗೆ ಸೂಚನೆ ನೀಡಿದೆ.

ಎಲ್ಲಾ ಮಾಧ್ಯಮಗಳಿಗೆ ನೋಟಿಸ್
ಎಚ್. ಡಿ. ಕುಮಾರಸ್ವಾಮಿ ಪರವಾಗಿ ವಕೀಲ ಎಸ್. ಇಸ್ಮಾಯಿಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲಾ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿಯ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿದೆ.

ಅಪಹಾಸ್ಯಕ್ಕೆ ಕಾರಣವಾದ ಹೇಳಿಕೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಳಿಕ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆಗ ಸಹಜವಾಗಿ 'ಮಿಣಿ ಮಿಣಿ ಪೌಡರ್' ಎಂಬ ಪದ ಬಳಕೆ ಮಾಡಿದ್ದರು. ಈ ಹೇಳಿಕೆ ಅಪಹಾಸ್ಯಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಯನ್ನು ಇಟ್ಟುಕೊಂಡು ಟ್ರಾಲ್ ಮಾಡಲಾಗುತ್ತಿದೆ.

ಬೇಸರ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ
ಹೇಳಿಕೆ ಅಪಹಾಸ್ಯಕ್ಕೆ ಕಾರಣವಾದ ಬಳಿಕ ಮಾತನಾಡಿದ್ದ ಕುಮಾರಸ್ವಾಮಿ, "ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿ ಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದರು.












Click it and Unblock the Notifications