Breaking: ಅತ್ಯಾಚಾರ ಕೇಸ್ನಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್
ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದ ಮುನಿರತ್ನ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಮೊದಲಿಗೆ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್ನಲ್ಲಿ ಮುನಿರತ್ನ ಅವರ ಬಂಧನವಾಗಿತ್ತು. ಬಳಿಕ ಈ ಕೇಸ್ನಲ್ಲಿ ಜಾಮೀನು ಕೂಡ ಸಿಕ್ಕಿ ಹೊರಬರುವಷ್ಟರಲ್ಲಿ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.

ಬಳಿಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಸಂತ್ರಸ್ತ ಮಹಿಳೆಯು ಮುನಿರತ್ನ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಹಲವರಿಗೆ ಹನಿಟ್ರ್ಯಾಪ್ ಕೂಡ ಮಾಡುತ್ತಿದ್ದರು. ಇದರಲ್ಲಿ ಮಾಜಿ ಸಿಎಂಗಳೂ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವು ಎಸ್ಐಟಿ ರಚಿಸಿತ್ತು. ಮೊದಲಿಗೆ ಕಸ್ಟಡಿಯಲ್ಲಿದ್ದ ಮುನಿರತ್ನ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮುನಿರತ್ನ ಅವರನ್ನು ಕರೆದೊಯ್ಯಲಾಗಿತ್ತು. ತಿಂಗಳಿಗೂ ಹೆಚ್ಚು ಮುನಿರತ್ನ ಜೈಲುವಾಸದಲ್ಲಿದ್ದರು. ಇಂದು ಜಾಮೀನು ಸಿಕ್ಕಿರುವ ಹಿನ್ನೆಲೆ ಮುನಿರತ್ನ ರಿಲೀಫ್ ಆಗಿದ್ದಾರೆ.ಏನಿದು ಪ್ರಕರಣ?: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕರಾದ ಮುನಿರತ್ನ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮುನಿರತ್ನ ಅವರನ್ನು ಬಂಧಿಸಿದ್ದರು.
ಬಿಜೆಪಿ ಶಾಸಕ ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾದರು ಎನ್ನಲಾದ ಸಂತ್ರಸ್ತ ಮಹಿಳೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಮುನಿರತ್ನ ಮೊದಲಿಗೆ ನನ್ನನ್ನು ಪರಿಚಯ ಮಾಡಿಕೊಂಡು, ತನ್ನ ಬಳಿಗೆ ಕರೆಸಿಕೊಂಡಿದ್ದರು. ಗೋಡೌನ್, ವಿಕಾಸಸೌಧದಲ್ಲಿದ್ದ ಸಚಿವರ ಕಚೇರಿ, ಸರ್ಕಾರಿ ಕಾರು ಸೇರಿದಂತೆ ಹಲವು ಸ್ಥಳಗಳಲ್ಲಿ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ಆರೋಪ ಮಾಡಿದ್ದರು.
ನನ್ನ ಮೇಲೆ ಅತ್ಯಾಚಾರ ಮಾಡಿದ್ದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಕೂಡ ಮಾಡುತ್ತಿದ್ದರು. ನನ್ನನ್ನು ಬೇರೆಯವರೊಂದಿಗೆ ಮಲಗಿಸಿ, ಅಶ್ಲೀಲವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಸಿಕೊಳ್ಳುತ್ತಿದ್ದರು. ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಇಬ್ಬರು ಮಾಜಿ ಸಿಎಂಗಳಿಗೂ ಹನಿಟ್ರ್ಯಾಪ್ ಮಾಡಿ, ವಿಡಿಯೋಗಳನ್ನು ಮುನಿರತ್ನ ಇಟ್ಟುಕೊಂಡಿದ್ದರು. ಇದನ್ನು ಮುಂದಿಟ್ಟುಕೊಂಡೇ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು ಎಂದು ಸಂತ್ರಸ್ತ ಮಹಿಳೆ ಸುದ್ದಿಗೋಷ್ಠಿಯಲ್ಲೇ ಆರೋಪಿಸಿದ್ದರು.
ಒಂದು ವೇಳೆ ಮುನಿರತ್ನ ಅವರಿಗೆ ಜಾಮೀನು ಸಿಕ್ಕಿ ಹೊರಬಂದರೆ, ನಮ್ಮ ಪ್ರಾಣಕ್ಕೆ ಅಪಾಯವಿದೆ. ಸರ್ಕಾರ ನಮಗೆ ರಕ್ಷಣೆ ಕೊಡುವುದಾದರೆ, ಆ ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್ ಸಂಬಂಧಿಸಿದ ಸಾಕ್ಷಿಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸಂಚಲನ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಮುನಿರತ್ನ ಅವರಿಗೆ ಕೋರ್ಟ್ನಿಂದ ಜಾಮೀನು ಸಿಕ್ಕಿದೆ. ತನ್ನ ಮೇಲಿನ ಆರೋಪ ನಿಜವಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಮುನಿರತ್ನ ಹೇಳಿದ್ದರು.












Click it and Unblock the Notifications