ಮೋಸದಿಂದ ಮನನೊಂದ ದಂಪತಿ ಆತ್ಮಹತ್ಯೆ
ರಾಮನಗರ, ಮೇ 22 : ನಂಬಿದವರು ತಮಗೆ ಮೋಸ ಮಾಡಿದವರು ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ. ತಮ್ಮ ಮೃತ ದೇಹಗಳನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾನಮಾಡಿ ಎಂದು ಡೆತ್ ನೋಟ್ ನಲ್ಲಿ ದಂಪತಿಗಳು ಬರೆದಿಟ್ಟಿದ್ದಾರೆ.
ಮೃತಪಟ್ಟವರನ್ನು ಚೆನ್ನೈ ಮೂಲದ ವಿಜಯಾನಂದ ಶೆಟ್ಟಿ (40), ಮೈಸೂರು ಮೂಲದ ಲಕ್ಷ್ಮೀ (40) ಎಂದು ಗುರುತಿಸಲಾಗಿದೆ. ರಾಮನಗರ ಸಮೀಪದ ಐಜೂರಿನ ತಮ್ಮ ನಿವಾಸದಲ್ಲಿ ವಿಜಯಾನಂದ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪತ್ನಿ ಲಕ್ಷ್ಮೀ ವಿಷಸೇವಿಸಿ ಸಾವನ್ನಪ್ಪಿದ್ದಾರೆ.

ವಿಜಯಾನಂದ ಶೆಟ್ಟಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಈ ದಂಪತಿಗಳು ಐಜೂರಿನಲ್ಲಿ ನೆಲೆಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು ನಂಬಿದವರು ತಮಗೆ ಮೋಸ ಮಾಡಿದ್ದಾರೆ ಎಂದು ನೋಟ್ ನಲ್ಲಿ ಬರೆದಿದ್ದಾರೆ.
ಡೆತ್ ನೋಟ್ ನಲ್ಲೇನಿದೆ : ದಂಪತಿಗಳು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ನಾವು ಒಬ್ಬರನ್ನು ನಂಬಿ ಚೆಕ್ ಮತ್ತ ಬೆಲೆಬಾಳುವ ವಸ್ತುಗಳನ್ನು ಅವರಿಗೆ ನೀಡಿದ್ದೆವು. ಆದರೆ, ಅವರು ನಮಗೆ ಮೋಸ ಮಾಡಿದರು. ಆದ್ದರಿಂದ ಮನನೊಂದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಎಂದು ಬರೆದಿಟ್ಟಿದ್ದಾರೆ.
ಐಜೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಡೆತ್ ನೋಟ್ ನಲ್ಲಿ ದಂಪತಿಗಳು ಮೋಸ ಮಾಡಿದವರ ಹೆಸರನ್ನು ಬರೆದಿಲ್ಲ. ನಾವು ಯಾರಿಗೂ ಮೋಸ ಮಾಡಿಲ್ಲ ಎಂದು ಮಾತ್ರ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications