ವರ್ಗಾವಣೆ ಭ್ರಷ್ಟಾಚಾರದಲ್ಲಿ ಲಂಚ ಪಡೆದಿಲ್ಲ ಎಂದರೆ ಸಿಎಂ ಜವಾಬ್ದಾರಿ ಮುಗಿಯೀತೆ?
ಹಾವೇರಿ, ಜುಲೈ 17: ಸರ್ಕಾರದ ವಿವಿಧ ಇಲಾಖೆ ವ್ಯಾಪ್ತಿಯ ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಲ್ಲಿ ತಾವು ಲಂಚ ಪಡೆದಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಜಾರಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸೋಮವಾರ ಹಾವೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಶ್ಯಾಡೊ ಸಿಎಂ ವಿಚಾರದ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಹಲವು ವಿಚಾರ ಎತ್ತಿದ್ದೇವೆ. ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಎಲ್ಲಾ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ವರ್ಗಾವಣೆಯಲ್ಲಿ ಸಿಎಂ ತಾವು ಯಾವುದಕ್ಕೂ ಹಣ ತಗೊಂಡಿಲ್ಲಾ ಎಂದು ಹೇಳಿದ್ದಾರೆ.

ಹೀಗೆ ಹೇಳುವ ಮೂಲಕ ಮುಖ್ಯಮಂತ್ರಿಗಳು ಜಾರಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಇಡೀ ಮಂತ್ರಿಮಂಡಲದ ಸದಸ್ಯರು, ಭಂಟರು ಲಂಚ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅಧಿಕಾರಿಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗುತ್ತಿದೆ.
ಬೇರೆಯವರು ಲಂಚ ತೆಗೆದುಕೊಂಡ ಸಿಎಂ ಜವಾಬ್ದಾರಿ ಮಗಿಯಿತಾ?
ಈ ಲಂಚಾವತಾರ ಮುಚ್ಚಿ ಹಾಕುವ ಸಲುವಾಗಿ ನಾನು ಲಂಚ ತೆಗೆದುಕೊಂಡಿಲ್ಲಾ. ಲಂಚ ತೆಗೆದುಕೊಂಡಿದ್ದಾರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಅಂದರೆ ಅದರ ಅರ್ಥ ಸರ್ಕಾರದಲ್ಲಿ ಬೇರೆಯವರು ತಗೊಂಡರೆ ಮುಖ್ಯಮಂತ್ರಿಗಳ ಜವಾಬ್ದಾರಿ ಮುಗಿಯಿತಾ? ಎಲ್ಲಾ ಸ್ಪಷ್ಟವಾಗಿ ಕಾಣುತ್ತಿದೆ. ಮುಖ್ಯಮಂತ್ರಿಗಳು ಪ್ರಕರಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪುನರುಚ್ಚರಿಸಿದರು.

ಇನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಗೆ ನೀಡಿದ್ದ ಜಮೀನು ಮಂಜೂರು ಮಾಡಿರುವುದನ್ನು ಹಿಂಪಡೆದು ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಬಡವರ ಮಕ್ಕಳಿಗೆ, ಅನಾಥರಿಗೆ ದೊಡ್ಡ ಸಹಾಯ ಆಗುತ್ತಿದೆ. ಜನಸೇವಾ ಟ್ರಸ್ಟ್ ಶಿಕ್ಷಣದದಲ್ಲಿ ದೊಡ್ಡ ಕೆಲಸ ಮಾಡುತ್ತಿದೆ. ಕ್ಯಾಬಿನೆಟ್ ಗೆ ಅಧಿಕಾರ ಇದೆ ಹಾಗಾಗಿ ನಾವು ಜಮೀನು ಮಂಜೂರು ಮಾಡಿದ್ದೆವು. ಇದು ಸೇಡಿನ ರಾಜಕಾರಣ ಅದು ಬಹಳ ದಿನ ನಡೆಯುವುದಿಲ್ಲ ಎಂದು ಗುಡುಗಿದರು.
ಬಳೆಯೂಟ್ಟು ಕೆಲಸ ಮಾಡಿದ್ದಾಗ ತೊಂದರೆ ಆಗಿತ್ತೆ
ಇನ್ನು ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕಿಕೊಂಡು ಅಡುಗೆ ಮಾಡುವಂತಿಲ್ಲ ಎಂಬ ಮಾರ್ಗಸೂಚಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಿಸಿಯೂಟ ತಯಾರು ಮಾಡೋರು ಬಳೆ ಹಾಕಿಕೊಂಡೇ ಕೆಲಸ ಮಾಡಿದ್ದಾರೆ. ಅಂದು ಯಾವ ತೊಂದರೆಯೂ ಆಗಿಲ್ಲ. ಆದರೆ ಈಗ ಏಕೆ ಏಕಾಏಕಿ ಹೀಗೆ ಮಾರ್ಗಸೂಚಿ ಹೊರಡಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಮಾಡಲು ಬೇರೆ ಹತ್ತು ಹಲವು ಕೆಲಸಗಳು ಇವೆ. ಅದೆಲ್ಲವನ್ನು ಬಿಟ್ಟು ಉಪಯೋಗಕ್ಕೆ ಬಾರದ ಕೆಲಸಗಳನ್ನು ಈ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ಅವರ ಆಡಳಿತವನ್ನು ಲೇವಡಿ ಮಾಡಿದರು.
ವಿಪಕ್ಷಗಳ ಸಭೆಯಿಂದ ಯಾವ ರಾಜಕೀಯ ಪ್ರಯೋಜನ ಇಲ್ಲ
ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಎರಡು ದಿನ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ. ಈ ಸಭೆಯಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರತಿ ಪಕ್ಷಗಳು ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಸಭೆ ಮಾಡುತ್ತಿವೆ. ಆದರೆ ಇಡೀ ಭಾರತದಲ್ಲಿ ಪ್ರತಿ ಪಕ್ಷಗಳು ಶಕ್ತಿಯುತವಾಗಿಲ್ಲ. ಪ್ರತಿ ಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಿವೆ. ಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ. ಒಕ್ಕೂಟ ರಚನೆಯಿಂದ, ನಾಳೆ ನಡೆಯುವ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ ಎಂದರು.
ಪ್ರಧಾನಿ ಮೋದಿ ಅವರನ್ನು ಸೋಲಿಸಬೇಕೆಂದು ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು ಪ್ರತಿ ಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ, ನಿರ್ಧಿಷ್ಟವಾದ ಕಾರ್ಯಕ್ರಮವಿಲ್ಲ. ಭಾರತ ದೇಶ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯವರಿಗೆ ಗೌರವ, ಮನ್ನಣೆ ಸಿಗುತ್ತಿದೆ ಎಂದು ಹೇಳಿದರು.












Click it and Unblock the Notifications