ಸಚಿವ ಬಾಬುರಾವ್ ವಿರುದ್ಧ ಬೆದರಿಕೆ, ವಂಚನೆ ಆರೋಪ
ಬೆಂಗಳೂರು, ಜುಲೈ 06: ಜವಳಿ ಮತ್ತು ಅಂತರಿಕ ಸಾರಿಗೆ, ಬಂದರು ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ಕೋಟ್ಯಂತರ ರುಪಾಯಿ ವಂಚನೆ ಆರೋಪ ಹೊರೆಸಲಾಗಿದೆ.
ಸಚಿವ ಚಿಂಚನಸೂರ್ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಂತ್ರಸ್ತ ಮಹಿಳೆ ಅಂಜನಾ ವಿ. ಶಾಂತವೀರ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.[ಆಸೆ ತೋರಿಸಿ ಮೋಸ ಮಾಡಿದ ಚಿಂಚನಸೂರ್ : ಆರೋಪ]
ಅಂಜನಾ ವಿ. ಶಾಂತವೀರ್ ಎಂಬ ಮಹಿಳೆಯಿಂದ ಸುಮಾರು 11 ಕೋಟಿ 88 ಲಕ್ಷ ರೂಪಾಯಿಗಳನ್ನು ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಾಲ ರೂಪದಲ್ಲಿ ಪಡೆದುಕೊಂಡಿದ್ದರು. ಅದರೆ, ಇದುವರೆವಿಗೂ ಸಾಲ ವಾಪಸ್ ಮಾಡಿಲ್ಲ ಹಾಗೂ ಅವರು ನೀಡಿದ ಚೆಕ್ ಗಳು ಬೌನ್ಸ್ ಆಗಿದೆ. ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಲ್ಲಿ ಅಂಜನಾ ಅವರು ಬೇಡಿಕೊಂಡಿದ್ದಾರೆ.

2011 ಜನವರಿಯಿಂದ ಸೆಪ್ಟಂಬರ್ ತಿಂಗಳ ವರೆಗೆ ವಿವಿಧ ಮೊತ್ತಗಳಲ್ಲಿ ಒಟ್ಟು 11 ಕೋಟಿ 88 ಲಕ್ಷ ರೂಪಾಯಿ ಸಾಲ ಪಡೆದಿರುವ ಕುರಿತು ಆಗಿರುವ ಒಪ್ಪಂದ ಪತ್ರವನ್ನು ಲಗತ್ತಿಸಿ ಮನವಿಯನ್ನು ಸ್ಪೀಕರ್ ಕಚೇರಿಗೆ ಕಳಿಸಲಾಗಿದೆ. ಪಡೆದ ಸಾಲಕ್ಕೆ ಪ್ರತಿಯಾಗಿ ನನಗೆ # 692458 ನಂಬರಿನ ಚೆಕ್ಕನ್ನು 30:04:2015ನೇ ದಿನಾಂಕಕ್ಕೆ ಕೊಟ್ಟಿದ್ದಾರೆ. ಈ ಚೆಕ್ ವಿಧಾನಸೌಧ ಬ್ರಾಂಚ್ಗೆ ಸಂಬಂಧಪಟ್ಟಿದ್ದಾಗಿದೆ. ಆದರೆ ಈ ಚೆಕ್ ಬೌನ್ಸ್ ಆಗಿದೆ. ಅಕೌಂಟ್ನಲ್ಲಿ ಹಣವಿಲ್ಲ. ಇದರಿಂದ ನಮಗೆ ಶಾಕ್ ಆಗಿದೆ ಎಂದು ಅಂಜನಾ ಹೇಳಿದ್ದಾರೆ.
ಅಂಜನಾ ಅವರ ಮನವಿ ಪರಿಶೀಲಿಸಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಸಚಿವರು - ಶಾಸಕರನ್ನು ಸ್ಪೀಕರ್ ನೇಮಿಸುವುದಿಲ್ಲ. ಹೀಗಾಗಿ ಅವರ ಮೇಲೆ ಪ್ರಕರಣ ದಾಖಲಿಸುವ ಅನುಮತಿ ನೀಡುವ ಅಧಿಕಾರ ವಿಧಾನಸಭಾಧ್ಯಕ್ಷರಿಗೆ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ, ಸಚಿವರಿಗೆ ಪ್ರಮಾಣ ವಚನ ಬೋಧಿಸುವ ರಾಜ್ಯಪಾಲರ ಮೊರೆ ಹೋಗಲು ಅಂಜನಾ ವಿ. ಶಾಂತವೀರ್ ಸಿದ್ಧತೆ ನಡೆಸಿದ್ದಾರೆ.
ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಆಕೆಯ ಆರೋಪದ ವಿರುದ್ಧವೇ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications