ಕೊರೊನಾ ಭೀತಿ: ಕುವೆಂಪು ವಿವಿಯ ಘಟಿಕೋತ್ಸವ ಮುಂದೂಡಿಕೆ
ಕರ್ನಾಟಕ, ಮಾರ್ಚ್ 13: ಕರ್ನಾಟಕದಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಪರಿಣಾಮ, ನಾಳೆಯಿಂದ ಒಂದು ವಾರ ಕಾಲ ರಾಜ್ಯಾದ್ಯಂತ ಎಲ್ಲಾ ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಬಂದ್ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಶಾಲಾ-ಕಾಲೇಜುಗಳು ಮತ್ತು ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ರಜೆ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇದೇ ಮಾರ್ಚ್ 16 ಮತ್ತು 17 ಕ್ಕೆ ನಿಗದಿಯಾಗಿದ್ದ ಪ್ರತಿಭಾ ದಿನಾಚರಣೆ ಮತ್ತು ಕಾಲೇಜ್ ಡೇಯನ್ನು ರದ್ದು ಪಡಿಸಲಾಗಿದೆ.
ಮಾರ್ಚ್ 14ರಿಂದ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಆದೇಶ
ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ತುರ್ತು ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ಸೂಚನೆ ನೀಡಿರುವುದರಿಂದ, ಯಾರಿಗೂ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಕಾರ್ಯಕ್ರಮ ಮುಂದೂಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಇನ್ನೂ, ಕೋವಿಡ್-19 ಭೀತಿಯಿಂದ ಕುವೆಂಪು ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವವನ್ನೂ ಮುಂದೂಡಲಾಗಿದೆ.
''ಮಾರಣಾಂತಿಕ ಕೊರೊನಾ ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು-ವಿವಿಗಳಲ್ಲಿ ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳದಿರಲು ಯುಜಿಸಿ ಮತ್ತು ಕರ್ನಾಟಕ ಸರ್ಕಾರ ಸೂಚನೆ ನೀಡಿವೆ. ಹೀಗಾಗಿ ಮಾರ್ಚ್ 28ಕ್ಕೆ ನಿಗದಿಯಾಗಿದ್ದ ವಿವಿಯ ಘಟಿಕೋತ್ಸವವನ್ನು ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ ಮತ್ತು ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ವಿಚಾರ ಸಂಕಿರಣ, ಸಮಾವೇಶಗಳನ್ನು ಮುಂದೂಡಲಾಗಿದೆ'' ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.