ಮುಂಗಡ ಟಿಕೆಟ್ ರದ್ದು; ಕೆಎಸ್ಆರ್ಟಿಸಿ ಮಹತ್ವದ ಸುತ್ತೋಲೆ
ಬೆಂಗಳೂರು, ಮಾರ್ಚ್ 22 : ಕೊರೊನಾ ಸೋಂಕು ಹರಡುವ ಭೀತಿಯಿಂದ ಜನರು ಬಸ್ಗಳಲ್ಲಿ ಸಂಚಾರ ನಡೆಸುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಕೆಎಸ್ಆರ್ಟಿಸಿ ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದ್ದು, ಅಪಾರವಾದ ನಷ್ಟ ಉಂಟಾಗುತ್ತಿದೆ.
ಮುಂಗಡ ಆಸನ ಕಾಯ್ದಿರಿಸಿದ ಪ್ರಯಾಣಿಕರು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವುದನ್ನು ರದ್ದುಗೊಳಿಸಿದ ಪ್ರಕರಣದಲ್ಲಿ ಯಾವುದೇ ಕಡಿತವಿಲ್ಲದೇ ಪೂರ್ಣ ಪ್ರಯಾಣದರವನ್ನು ಮರುಪಾವತಿಸುವ ಬಗ್ಗೆ ಕೆಎಸ್ಆರ್ಟಿಸಿ ಸುತ್ತೋಲೆ ಹೊರಡಿಸಿದೆ.
ಕೊರೊನಾ ಭೀತಿಯಿಂದ ನಿಗಮದ ಸಾರಿಗೆ ಸೇವೆಗಳಲ್ಲಿ ಪ್ರತಿದಿನ ಪ್ರಯಾಣಿಕರ ಸಂಚಾರ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಈಗಾಗಲೇ ನಿಗಮದ ವತಿಯಿಂದ ಸಾಕಷ್ಟು ಸಾರಿಗೆ ಸೇವೆಗಳನ್ನು ರದ್ದು ಮಾಡಲಾಗಿರುತ್ತದೆ ಎಂದು ಕೆಎಸ್ಆರ್ಟಿಸಿ ಹೇಳಿದೆ.
ನಿಗಮದ ವತಿಯಿಂದ ಸಾರಿಗೆ ಸೇವೆಗಳನ್ನು ರದ್ದುಗೊಳಿಸಿದಾಗ ಮುಂಗಡವಾಗಿ ಆಸನ ಕಾಯ್ದಿರಿಸಿದ ಪ್ರಯಾಣಿಕರಿಗೆ ಪೂರ್ಣ ಪ್ರಯಾಣ ದರವನ್ನು ಹಿಂದಿರುಗಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿಯ ಸುತ್ತೋಲೆ ಹೇಳಿದೆ.
ಆದರೆ, ಕಾರ್ಯಾಚರಣೆಯಲ್ಲಿರುವ ಸಾರಿಗೆಗಳಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದಲ್ಲಿ ನಿಗಮದ ರದ್ಧತಿ ನಿಯಮಾನುಸಾರ ಟಿಕೆಟ್ನ ಶೇ 10 ರಿಂದ 50ರಷ್ಟು ಪ್ರಯಾಣದರ (ಸ್ಲಾಬ್ ಆಧಾರದ ಮೇಲೆ) ಕಡಿತಗೊಳಿಸಿ ಉಳಿತ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.
ಹಲವಾರು ಮುಂಗಡ ಆಸನ ಕಾಯ್ದಿರಿಸಿದ ಪ್ರಯಾಣಿಕರು ಅವರ ಪ್ರಯಾಣಗಳನ್ನು ರದ್ದುಗೊಳಿಸುತ್ತಿದ್ದು, ಮುಂಗಡ ಆಸನ ಕಾಯ್ದಿರಿಸಿದ ಟಿಕೆಟ್ನ ಪೂರ್ಣ ಪ್ರಯಾಣದರವನ್ನು ಹಿಂದಿರುಗಿಸುವಂತೆ ಕೋರುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿ ಹೇಳಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಈ ಪರಿಸ್ಥಿತಿಯಲ್ಲಿ ನಿಗಮದ ವತಿಯಿಂದ ಪ್ರಯಾಣಿಕ ಸ್ನೇಹಿ ಉಪಕ್ರಮವಾಗಿ ಕೊರೊನಾ ಭೀತಿ ನಿವಾರಣೆಯಾಗಿ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬರುವ ತನಕ ತಾತ್ಕಾಲಿಕವಾಗಿ ಮುಂಗಡವಾಗಿ ಆಸನ ಕಾಯ್ದಿರಿಸಿದ ಪ್ರಯಾಣಿಕರು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವುದನ್ನು ರದ್ದುಗೊಳಿಸಿದ ಪ್ರಕರಣದಲ್ಲಿ ಸದರಿ ಪ್ರಯಾಣಿಕರಿಗೆ ಯಾವುದೇ ಕಡಿತವಿಲ್ಲದೇ ಮುಂಗಡ ಕಾಯ್ದಿರಿಸುವ ಶುಲ್ಕ ಒಳಗೊಂಡಂತೆ ಪೂರ್ಣ ಪ್ರಯಾಣದರವನ್ನು ಅವತಾರ್ ತಂತ್ರಾಶದಿಂದಲೇ ಮರುವಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ಆರ್ಟಿಸಿ ಸುತ್ತೋಲೆಯಲ್ಲಿ ತಿಳಿಸಿದೆ.