ಹಸ್ತಲಾಘವದಿಂದ ಕೊರೋನಾ ಭೀತಿ; ಸ್ಪಷ್ಟೀಕರಣ ಕೇಳಿದ ಸಚಿವ
ಬೆಂಗಳೂರು, ಮಾರ್ಚ್ 4: ಆತ್ಮೀಯರನ್ನೂ ಸಹ ಹಸ್ತಲಾಘವ ಮಾಡಲೂ ಕೊರೋನಾ ವೈರಸ್ ಭೀತಿ ಆವರಿಸಿಬಿಟ್ಟಂತಾಗಿದೆ. ಹೀಗಾಗಿ ಹಸ್ತಲಾಘವದಿಂದ ಕರೋನಾ ವೈರಸ್ ಹರಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವರ ಕೇಳಿದ್ದಾರೆ. ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ಕ್ಷೇತ್ರದ ಜನರು, ಆತ್ಮೀಯರನ್ನು ಭೇಟಿಯಾದಾಗ ಹಸ್ತಲಾಘವ ಮಾಡುವುದು ಸಹಜ. ಆದರೆ ಕೊರೋನಾ ವೈರಸ್ ಸೋಂಕಿನ ಭೀತಿಯಿಂದಾಗಿ ಹಸ್ತಲಾಘವ ಮಾಡುವುದೋ ಬೇಡವೋ ಎಂಬ ಗೊಂದಲದಿಂದ ಕೈಮುಗಿದು ಬಿಡುತ್ತೇನೆ. ಆಗ ಕೆಲವರಿಗೆ ತಾವು ಸಚಿವನಾಗಿದ್ದರಿಂದ ಹಸ್ತಲಾಘವ ಮಾಡುತ್ತಿಲ್ಲ ಎಂಬ ಭಾವ ಬರುವುದು ಸಹಜ. ಹೀಗಾಗಿ ಸಚಿವರು ಹಸ್ತಲಾಘವದಿಂದ ಸೋಂಕು ಹರಡುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದರು.
Recommended Video
ಕರ್ನಾಟಕಕ್ಕಿಲ್ಲ ಕರೋನಾ ಭಯ, ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ
ಆಗ ಉತ್ತರ ನೀಡಿದ ವೈದ್ಯಕೀಯ ಸಚಿವ ಸುಧಾಕರ್ ಅವರು, ಆರೋಗ್ಯವಂತರಿಂದ ಕೊರೋನಾ ವೈರಸ್ ಸೋಂಕು ತಗಲುವುದಿಲ್ಲ. ಆದರೆ ಶೀತ, ಕೆಮ್ಮು ಜ್ವರದ ಲಕ್ಷಣ ಬಂದವರು ಸೀನುವಾಗಾಗಲೀ ಕೆಮ್ಮುವಾಗಾಗಲಿ ಮಾಸ್ಕ್ ಧರಿಸುವುದು ಉತ್ತಮ ಮಾಹಿತಿ ಕೊಟ್ಟಿದ್ದಾರೆ.
ಬರೀ ಕೈ ಅಡ್ಡ ಹಿಡಿದು ಸೀನದೇ ಕರವಸ್ತ್ರಬಳಸಬೇಕು. ಸೋಂಕಿತರ ಕೈಯಲ್ಲಿನ ಬೆವರಿನಿಂದ ಸಹ ಕರೋನಾ ಹರಡುವ ಸಾಧ್ಯತೆಯಿದೆ. ಹೀಗಾಗಿ ಹಸ್ತಲಾಘವಕ್ಕಿಂತ ಕೈಮುಗಿದು ನಮಸ್ಕರಿಸುವುದೇ ಒಳ್ಳೆಯದು. ಇದು ನಮ್ಮ ಸಂಸ್ಕೃತಿ ಸಹ ಎಂದು ಸಲಹೆ ನೀಡಿದರು.