ಇದೆಲ್ಲದರ ನಡುವೆ ನಮ್ಮನ್ನು ಕಾಡುವ ಪ್ರಶ್ನೆ ಪ್ರಧಾನಿ ಮೋದಿ ಎಲ್ಲಿ?
ಬೆಂಗಳೂರು, ಏಪ್ರಿಲ್ 16: ರಾಜ್ಯ ಬಿಜೆಪಿ ಸರಕಾರದ ಕಾರ್ಯವೈಖರಿ, ಕೊರೊನಾ ನಿರ್ವಹಣೆ, ಉಪ ಚುನಾವಣೆಯ ಸಂಬಂಧ ಸಾಲುಸಾಲು ಟ್ವೀಟ್ ಗಳನ್ನು ಮಾಡುತ್ತಿರುವ ಕೆಪಿಸಿಸಿ, ಪ್ರಧಾನಿ ಮೋದಿ ಎಲ್ಲಿ ಎನ್ನುವ ಪ್ರಶ್ನೆಯನ್ನು ಟ್ವಿಟ್ಟರ್ ಮೂಲಕ ಎತ್ತಿದೆ.
ದೇಶದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ, ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಟೀಕಿಸಿದ್ದ ಕಾಂಗ್ರೆಸ್, ಕೇಂದ್ರದ ಮೋದಿ ಸರಕಾರ ತುಘ್ಲಕ್ ದರ್ಬಾರ್ ಸರಕಾರ ಎಂದು ವ್ಯಂಗ್ಯವಾಡಿತ್ತು.
ಕೆಪಿಸಿಸಿ ಮಾಡಿರುವ ಟ್ವೀಟ್ ಹೀಗಿದೆ, " ಕೊರೊನಾ ಕೋಲಾಹಲ ಸೃಷ್ಟಿಸಿದೆ, ಆಸ್ಪತ್ರೆಗಳು ಸ್ಮಶಾನಗಳಾಗಿವೆ, ಸ್ಮಶಾನಗಳು ನರಕವಾಗಿವೆ, ಲಸಿಕೆಗಳು ಖಾಲಿಯಾಗಿವೆ, ಜನತೆ ಕಂಗಾಲಾಗಿದ್ದಾರೆ, ಆರ್ಥಿಕತೆ ಪಾತಾಳ ಸೇರಿದೆ, ಸೋಂಕಿತರಿಗೆ ಹಾಸಿಗೆಯಿಲ್ಲ, ಹಾಸಿಗೆ ಸಿಕ್ಕವರಿಗೆ ಚಿಕಿತ್ಸೆ ಇಲ್ಲ, ಇದೆಲ್ಲದರ ನಡುವೆ ನಮ್ಮನ್ನ ಕಾಡುವ ಪ್ರಶ್ನೆ ಪ್ರಧಾನಿ ಎಲ್ಲಿ" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದಲ್ಲದೇ, ರಾಜ್ಯ ಆರೋಗ್ಯ ಖಾತೆಯ ಸಚಿವ ಡಾ.ಸುಧಾಕರ್ ಅವರನ್ನೂ ಟೀಕಿಸಿ ಕೆಪಿಸಿಸಿ ಟ್ವೀಟ್ ಮಾಡಿದ್ದು ಹೀಗೆ, "ಕೊರೊನಾ ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್ನಲ್ಲಿ ಮೋಜು ಮಾಡುತ್ತಿದ್ದಿರಿ, 2ನೇ ಅಲೆಯಲ್ಲಿ ಸಿಡಿ ತಡೆಯಾಜ್ಞೆಯಲ್ಲಿ ಬ್ಯುಸಿಯಾಗಿದ್ದಿರಿ, ಲಸಿಕೆ, ಆಕ್ಸಿಜನ್, ರೆಮಿಡಿಸಿವಿರ್, ಹಾಸಿಗೆಗಳ ಕೊರತೆಯಿಂದ ಹಾಹಾಕರವೆದ್ದಿದೆ".
"ಅದೆಲ್ಲದರ ಜವಾಬ್ದಾರಿ ಮರೆತು ಹೀಗೆ ಸಂವೇದನರಹಿತವಾಗಿ ಜೋಕ್ ಮಾಡಿಕೊಂಡಿರುವುದು ನಾಚಿಕೆಗೇಡಲ್ಲವೇ, @mla_sudhakar ಅವರೇ?"ಎಂದು ಕೆಪಿಸಿಸಿ , ಸಚಿವ ಸುಧಾಕರ್ ಅವರನ್ನೂ ತರಾಟೆಗೆ ತೆಗೆದುಕೊಂಡಿದೆ.
"ರಾಜ್ಯದಲ್ಲಿ ಲಸಿಕೆ ಕೊರತೆಯಾಗಿರುವ ಹಿಂದೆಯೇ ಸೋಂಕಿತರ ಚಿಕಿತ್ಸೆಗೆ ಅತ್ಯಗತ್ಯವಾದ ರೆಮಿಡಿಸಿವಿರ್ ಔಷಧದ ಕೊರತೆ ಉಂಟಾಗಿದೆ. ಕಾಳಸಂತೆಯಲ್ಲಿ 15 ರಿಂದ 20 ಸಾವಿರ ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. @BJP4Karnataka, @mla_sudhakar ಅವರೇ, ರೆಮಿಡಿಸಿವಿರ್ ಕೊರತೆ ನೀಗಿಸಲು, ಕಾಳಸಂತೆ ಹಾವಳಿ ತಪ್ಪಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ"ಎಂದು ಕೆಪಿಸಿಸಿ ಪ್ರಶ್ನೆ ಎತ್ತಿದೆ.












Click it and Unblock the Notifications