ಸಮನ್ವಯ ಸಮಿತಿ ಸಭೆ ಗುರುವಾರ: ಪ್ರಮುಖ ನಿಗಮ ಮಂಡಳಿಗಳ ಮೇಲೆ ಕಾಂಗ್ರೆಸ್ ಕಣ್ಣು
ಬೆಂಗಳೂರು, ಜೂನ್ 13: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ನೆರವಾಗುವ ಉದ್ದೇಶದಿಂದ ರಚಿಸಲಾಗಿರುವ ಸಮನ್ವಯ ಸಮಿತಿಯು ಗುರುವಾರ ಸಭೆ ನಡೆಸಲಿದೆ.
ಇನ್ನೂ ಬಗೆಹರಿಯದ ಖಾತೆ ಹಂಚಿಕೆ ಗೊಂದಲದ ನಡುವೆಯೇ ಸರ್ಕಾರದ ಮುಂದಿನ ಆಡಳಿತ ಕಾರ್ಯವೈಖರಿ ಹಾಗೂ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ. ಜತೆಗೆ ಎರಡೂ ಪಕ್ಷಗಳ ನಡುವೆ ನಿಗಮ/ಮಂಡಳಿಯ ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಐವರು ಸದಸ್ಯರ ಸಮಿತಿಯು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಮುಂದಿನ ಐದು ವರ್ಷಗಳವರೆಗಿನ ಜಂಟಿ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಉಪ ಸಮಿತಿಯೊಂದನ್ನು ಇದೇ ವೇಳೆ ರಚಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ ಅವರು ಸಮನ್ವಯ ಸಮಿತಿಯಲ್ಲಿದ್ದಾರೆ.
ಪ್ರಮುಖವಾದ 14 ನಿಗಮ ಮಂಡಳಿಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಸಭೆಯಲ್ಲಿ ಈ ಬಗ್ಗೆ ಅದು ಪ್ರಸ್ತಾಪಿಸಲಿದೆ. ಕೆಲವು ಅತೃಪ್ತ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಮೂಲಕ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಬಯಸಿದೆ ಎನ್ನಲಾಗಿದೆ.












Click it and Unblock the Notifications