ಕೊಲ್ಲೂರು ಸಮಾಧಿ ವಿವಾದ: ನಾಡಿಗೆ ಕಾದಿದೆಯೇ ಕಂಟಕ?
ಉಡುಪಿ, ಜೂ 9: ಮುಜರಾಯಿ ವ್ಯಾಪ್ತಿಯಲ್ಲಿ ಬರುವ ಮತ್ತು ರಾಜ್ಯ ಸರಕಾರದ ಆದಾಯದ ಲೆಕ್ಕಾಚಾರದಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀಮಂತ ಕೊಲ್ಲೂರು ತಾಯಿ ಮೂಕಾಂಬಿಕಾ ದೇವಾಲಯದ ಆವರಣದಲ್ಲಿ ನಡೆದ ಸಮಾಧಿ ವಿವಾದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. (ಕುಕ್ಕೇ ಶ್ರೀಸುಬ್ರಹ್ಮಣ್ಯ ದೇವಾಲಯ ರಾಜ್ಯದಲ್ಲಿನ ಮುಜರಾಯಿ ವ್ಯಾಪ್ತಿಯಲ್ಲಿನ ಮೊದಲ ಶ್ರೀಮಂತ ದೇವಾಲಯ)
ದೇವಾಲಯದ ಗಡಿಯಲ್ಲಿ ಸ್ವಾಮೀಜಿಗಳ ಸಮಾಧಿ ಮಾಡಿರುವುದು ನಾಡು ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಕಂಟಕದ ಮುನ್ಸೂಚನೆ ಎಂದು ದೇಗುಲದ ಅರ್ಚಕರೊಬ್ಬರು ಹೇಳಿರುವುದು ಭಕ್ತ ವೃಂದ ಮತ್ತು ಆಸ್ತಿಕರು ಇನ್ನಷ್ಟು ಆತಂಕ ಪಡುವಂತಾಗಿದೆ. (ಸ್ವಾಮೀಜಿ ಸಾವು: ಕೊಲ್ಲೂರು ಪೂಜೆ ಸ್ಥಗಿತ)
ನಿತ್ಯಾನಂದ (ಬಿಡದಿ ನಿತ್ಯಾನಂದ ಅಲ್ಲ) ಆಶ್ರಮದಲ್ಲಿನ ಹಿರಿಯ ಸ್ವಾಮೀಜಿಗಳ ಶವವನ್ನು ದೇಗುಲದ ಗಡಿಯೊಳಗೆ ಸಮಾಧಿ ಮಾಡಿದ್ದು, ಈಗ ಅದು ಜಾತಿ, ರಾಜಕೀಯ, ಅಹಂ, ಒಣ ಪ್ರತಿಷ್ಠೆ, ಸ್ಥಳೀಯರು, ಪರಕೀಯರು ಎನ್ನುವ ತಿರುವು ಪಡೆದು ಕೊಳ್ಳುತ್ತಿರುವುದು ವಿಷಾದನೀಯ ಮತ್ತು ವಿವಾದಕ್ಕೆ ದೇವರೂ ಹೊರತಲ್ಲ ಎನ್ನುವಂತಾಗಿದೆ.
ದೇವಾಲಯದ ಅರ್ಚಕ ಮತ್ತು ಆಡಳಿತ ವರ್ಗ, ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ, ಅಪಾರ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವ ನಿತ್ಯಾನಂದ ಶ್ರೀಗಳ ಭಕ್ತರು ಸಮಾಧಿ ಸ್ಥಳಾಂತರಕ್ಕೆ ಇನ್ನಿಲ್ಲದಂತೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಈ ವಿವಾದವನ್ನು ಬ್ರಾಹ್ಮಣರು ಮತ್ತು ಬ್ರಾಹ್ಮಣರೇತರರು ಎನ್ನುವ ಜಾತಿ ಲೆಕ್ಕಾಚಾರಕ್ಕೆ ತಿರುಗಿಸಲು ಕೆಲ ಸಂಘಟನೆಗಳು ಹುನ್ನಾರ ನಡೆಸುತ್ತಿವೆ. ಕೊಲ್ಲೂರು ಕ್ಷೇತ್ರಕ್ಕೆ ಹೊರತಾದವರು ತರಹೇವಾರಿ ಹೇಳಿಕೆ ನೀಡಿ ಮನಸ್ಸಿಗೆ ಘಾಸಿ ನೀಡುತ್ತಿದ್ದಾರೆನ್ನುವುದು ಸ್ಥಳೀಯರ ಆರೋಪ.
ಈ ನಡುವೆ, ಸಮಾಧಿ ಸ್ಥಳಾಂತರಿಸ ಬೇಕೆಂದು ನಾಗರೀಕ ವೇದಿಕೆ, ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದೊಂದಿದೆ ಬುಧವಾರ (ಜೂ 11) ದಂದು ಕೊಲ್ಲೂರು ಬಂದಿಗೆ ಕರೆನೀಡಿದೆ.
ದೇಗುಲದ ಅರ್ಚಕರ ಪ್ರಕಾರ ಏನು ಕಾದಿದೆ ನಾಡಿಗೆ ಕಂಟಕ? ಮುಂದೆ ಓದಿ..
ದೇಗುಲದ ಅರ್ಚಕರ ಪ್ರಕಾರ
ಮೂಕಾಂಬಿಕಾ ದೇವಾಲಯದ ಇತಿಹಾಸದ ಬಗ್ಗೆ ನಾಡಿಗೆ ವಿವರಿಸುವ ಅಗತ್ಯವಿಲ್ಲ. ಸಾಂಪ್ರದಾಯಿಕವಾಗಿ ಪೂಜೆ ನಡೆದುಕೊಂಡು ಬರುತ್ತಿರುವ ದೇವಾಲಯವಿದು. ಮಹಾತೋಭಾರ (ಮೂರು ಹೊತ್ತು ಪೂಜೆ) ದೇವಾಲಯಗಳಲ್ಲಿ ಇದೂ ಒಂದು. ಸಮಾಧಿ ದೇಗುಲದ ಗಡಿಯೊಳಗೆ ಆಗಿರುವುದು ನೈರ್ಮಲ್ಯಕ್ಕೆ ಚ್ಯುತಿ ತಂದಿದೆ.
ಆತಂಕ ಪಡಬೇಕಾಗಿರುವುದು ಏನು?
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಯಾವುದೇ ದೇವೀ ದೇವಾಲಯದ ಗರ್ಭಗುಡಿ, ದೇವಾಲಯದ ಪ್ರಾಂಗಣ, ಪೂಜಾ ವಿಧಿವಿದಾನದಲ್ಲಿ ನೈರ್ಮಲ್ಯಕ್ಕೆ, ಸಾಂಪ್ರದಾಯಿಕ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಸಮಾಧಿಯಿಂದ ದೇಗುಲದ ನೈರ್ಮಲ್ಯತೆಗೆ ಧಕ್ಕೆ ಬಂದಿದೆ. ವರ್ಷದ ಕೆಳಗೆ ಕೇದಾರನಾಥದಲ್ಲಿ ನಡೆದ ಜಲಪ್ರಳಯದಂತೆ ನೈಸರ್ಗಿಕ ವಿಕೋಪ ನಮ್ಮ ನಾಡಿನಲ್ಲೂ ನಡೆಯಬಹುದು ಎಂದು ದೇಗುಲದ ಪ್ರಧಾನ ಅರ್ಚಕರೊಬ್ಬರು ಭವಿಷ್ಯ ನುಡಿದಿದ್ದಾರೆ.
ನಿತ್ಯಾನಂದ ಮಂಡಳಿಯ ಆಶ್ರಮ
ಉಡುಪಿ ಜಿಲ್ಲಾಡಳಿತವೇ ಸಮಾಧಿಗೆ ಅನುಮತಿ ನೀಡಿದೆ. ಈಗಾಗಲೇ ಸಮಾಧಿ ಮಾಡಿರುವ ಕಳೇಬರವನ್ನು ಮತ್ತೆ ಸ್ಥಳಾಂತರಿಸಿದರೆ ಮುಂಬರುವ ಆಶ್ರಮದ ಸ್ವಾಮೀಜಿಗಳಿಗೆ ಮಾಡುವ ಅವಮಾನ. ದೇವಾಲಯದ ಪೂಜೆ ಯಥಾಪ್ರಕಾರ ಆರಂಭವಾಗಿದೆ, ಸಮಾಧಿ ವಿವಾದವನ್ನು ಇನ್ನಷ್ಟು ಬೆಳೆಸಬೇಡಿ - ನಿತ್ಯಾನಂದ ಮಂಡಳಿಯ ಆಶ್ರಮದ ಅಧ್ಯಕ್ಷ ಎರ್ಮಾಳು ಶಶಿಧರ್ ಶೆಟ್ಟಿ.
ಜಿಲ್ಲಾಧಿಕಾರಿಗಳ ಸೂಚನೆ
ಕೊಲ್ಲೂರು ದೇಗುಲದಲ್ಲಿನ ಸಮಾಧಿ ವಿವಾದದ ವಸ್ತುನಿಷ್ಠ ವರದಿ ಮೂರು ದಿನಗಳ ಒಳಗೆ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ದೇಗುಲದ ಮುಖ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ್ದಾರೆ.
ದೇಗುಲದ ಸಂಪ್ರದಾಯಕ್ಕೆ ಚ್ಯುತಿ ಬಾರದಿರಲಿ
ಸ್ವಾಮೀಜಿ ಸಮಾಧಿ ಹಿನ್ನಲೆಯಲ್ಲಿ ದೇಗುಲದ ಸಂಪ್ರದಾಯಕ್ಕೆ ಚ್ಯುತಿ ಬರಬಾರದು. ಹಾಗೇ ಇದನ್ನು ದೊಡ್ಡ ವಿವಾದ ಮಾಡುವುದು ಬೇಡ, ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶರು ಸಲಹೆ ನೀಡಿದ್ದಾರೆ.