ಲೋಕಸಭಾ ಚುನಾವಣೆ: ಕಾಂಗ್ರೆಸ್ನಿಂದ ಬೆಳಗಾವಿಗೆ ಹೊಸ ಮುಖ, ಚಿಕ್ಕೋಡಿಗೆ ಹಳೆ ಮುಖ ಕಣಕ್ಕೆ: ಯಾರದು?
ಬೆಳಗಾವಿ, ಫೆಬ್ರವರಿ 12: ಬೆಳಗಾವಿ ಲೋಕಸಭಾ ಕ್ಷೇತ್ರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇತ್ತ ಕಾಂಗ್ರೆಸ್ ಗೆ ಅಭ್ಯರ್ಥಿಯ ಕಸರತ್ತನ್ನ ಮುಂದುವರಿಸಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹೊಸ ಮುಖಕ್ಕೆ ಸಿಗುವುದು ಬಹುತೇಕ ಖಚಿತವಾಗಿದೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ 28 ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನ ನೇಮಕ ಮಾಡಿದ್ದು, ಕುಂದನಗರಿ ಬೆಳಗಾವಿಗೆ ಸಚಿವ ಸತೀಸ್ ಜಾರಕಿಹೊಳಿ ಅವರನ್ನ ಸಂಯೋಜಕರಾಗಿ ನೇಮಕ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಬ್ಬರ ಹೆಸರನ್ನು ಹೈಕಮಾಂಡ್ ಕಳುಹಿಸಿದ್ದರೂ ಜಿಲ್ಲೆಯ ನಾಯಕರು ಒಬ್ಬರ ಪರ ಲಾಬಿ ನಡೆಸಿದ್ದಾರೆ.

ಈಗಾಗಲೇ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಸಚಿವ ಸತೀಶ ಜಾರಕಿಹೊಳಿ ಅವರ ಅತ್ಯಾಪ್ತ ಡಾ.ಗಿರೀಶ ಸೋನವಾಲ್ಕರ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಲಾಬಿ ನಡೆಸಿದ್ದು, ಈ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಹೆಸರು ಹೈಕಮಾಂಡ್ ಕೈ ಸೇರಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಪುತ್ರನಿಗೆ ಟಿಕೆಟ್ ಕೊಡಬೇಕು ಎಂಬ ಹಟವೂ ಇಲ್ಲ. 'ಭವಿಷ್ಯದಲ್ಲಿ ಅವರೂ ಒಬ್ಬ ಆಕಾಂಕ್ಷಿ ಎಂಬುದನ್ನು ವ್ಯಕ್ತಪಡಿಸಲು ಟಿಕೆಟ್ ಕೇಳಿದ್ದಾರೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ಹಲವು ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ನನ್ನ ಪುತ್ರ ಕೂಡ ಟಿಕೆಟ್ ಆಕಾಂಕ್ಷಿ. ಆದರೆ, ಪಕ್ಷದ ನಿರ್ಧಾರವೇ ಅಂತಿಮ' ಎಂದು ಹೇಳಿ ಲಕ್ಷ್ಮಿ ಹೆಬ್ಬಾಳಕರ ಕೂಡ ಸೋನವಾಲ್ಕರ ಹೆಸರಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಇನ್ನೂ ಬೆಳಗಾವಿ ಲೋಕಸಭ ಕ್ಷೇತ್ರಕ್ಕೆ ಸಚಿವ ಸತೀಶ ಜಾರಕಿಹೊಳಿ ತಮ್ಮ ಪುತ್ರಿಗೆ ಟಿಕೆಟ್ ಕೇಳುತ್ತಾರೆ ಅಥವಾ ಹೈಕಮಾಂಡ್ ಒತ್ತಡಕ್ಕೆ ಮಣಿದು ತಾವೇ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಸೋನವಾಲ್ಕರಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿಯುವ ಮೂಲಕ ಅಚ್ಚರಿ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.
ಡಾ.ಗಿರೀಶ ಸೋನವಾಲ್ಕರ ಯಾರು?
ಡಾ.ಗಿರೀಶ ಸೋನವಾಲ್ಕರ ಅವಿಭಜಿತ ಗೋಕಾಕ ತಾಲ್ಲೂಕಿನ ಮೂಡಲಗಿಯವರು. ಕೃಷಿ, ಸಹಕಾರ ಕ್ಷೇತ್ರದಲ್ಲಿ ಅವರ ಕುಟುಂಬಕ್ಕೆ ದೊಡ್ಡ ಹೆಸರಿದೆ. ಗಿರೀಶ ಅವರ ತಂದೆ ಕೃಷ್ಣಪ್ಪ ಸೋನವಾಲ್ಕರ 1994ರಲ್ಲಿ ರೈತಸಂಘದಿಂದ ಅರಬಾವಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಸೋತಿದ್ದರು. ಗೀರಿಶ್ಸೋನವಾಲ್ಕರ ಅವರ ಕುಟುಂಬ ಜಾರಕಿಹೊಳಿ ಕುಟುಂಬಗಳಿಗೆ ಆಪ್ತ. ಗಿರೀಶ ಅವರು ಬೆಳಗಾವಿ 'ಲೇಕ್ವೀವ್' ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ದೇಶಕರಾಗಿದ್ದಾರೆ.
ಡಾ.ಗಿರೀಶ ಸೋನವಾಲ್ಕರ ಅವರು ಲಿಂಗಾಯತ ರೆಡ್ಡಿ ಸಮುದಾಯದವರು. ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ, ಕುರುಬ ಮತ್ತು ಅಹಿಂದ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿದೆ. ಗಿರೀಶ ಅವರಿಗೆ ಟಿಕೆಟ್ ಕೊಡುವ ಮೂಲಕ ಈ ಎಲ್ಲ ಸಮುದಾಯಗಳ ಮತ ಒಗ್ಗೂಡಿಸಿ ಮುಸ್ಲಿಂ ಮತಗಳನ್ನೂ ಸೇರಿಸಿದರೆ ಗೆಲುವು ಸುಲಭ ಎನ್ನುವುದು ಕಾಂಗ್ರೆಸ್ ನಾಯಕರ ತಂತ್ರಗಾರಿಕೆಯಾಗಿದೆ.
ಇನ್ನೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರ ಹೆಸರನ್ನ ಸೂಚಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2019ರಲ್ಲಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಪ್ರಕಾಶ ಹುಕ್ಕೇರಿ ಸೋಲು ಅನುಭವಿಸಿದ್ದರು. ಇದೀಗ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರಕಾಶ್ ಹುಕ್ಕೇರಿ ಅವರಿಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರಕಾಶ್ ಹುಕ್ಕೇರಿ ಮಾತನಾಡಿದ್ದು, ಪದೇಪದೇ ಒದಿಸಿಕೊಳ್ಳಲು ನಾನೇನು ಫುಟ್ಬಾಲ್ ಅಲ್ಲ. ಹೈಕಮಾಂಡ್ ಹೇಳಿದರು ಸಹ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಕುರುಬ ಸಮಾಜಕ್ಕೆ ಟಿಕೆಟ್ ನೀಡುವುದಾಗಿ ಹೇಳಿದ್ದ ಸತೀಶ ಜಾರಕಿಹೊಳಿ ಅವರು ಲಕ್ಷ್ಮಣರಾವ್ ಚಿಂಗಳೆ ಹೆಸರನ್ನೂ ಸೂಚಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications