Congress: ಸಿದ್ದರಾಮಯ್ಯ-ಡಿಕೆಶಿ ನಾಯಕತ್ವ ಬದಲಾವಣೆ ಬಗ್ಗೆ ಖರ್ಗೆ ಅಚ್ಚರಿ ಹೇಳಿಕೆ
ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವು ಚರ್ಚೆಯಲ್ಲೇ ಇದೆ. ಈ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪಕ್ಷಕ್ಕೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಕಾಂಗ್ರೆಸ್ನಲ್ಲಿ ಹಲವು ತಿಂಗಳಿನಿಂದ ಬಂಡಾಯದ ಬಿಸಿ, ದಲಿತ ನಾಯಕರ ಬೇಡಿಕೆ, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿ ಹೈಕಮಾಂಡ್ಗೆ ತಲೆನೋವಾಗಿದೆ. ಇದೀಗ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಅವರ ವಿಚಾರವಾಗಿಯೂ ಮಾತನಾಡಿದ್ದಾರೆ.
ಇಂದು ಜೇವರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ರೂಪಿಸಿರುವ 'ಕಲ್ಯಾಣ ಪಥ' ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ. ಇಬ್ಬರೂ ಯಾವ ಕಾರಣಕ್ಕೂ ವಿರುದ್ಧ ದಿಕ್ಕಿನಲ್ಲಿ ಹೋಗಬೇಡಿ, ನೇರ ದಾರಿಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿದರೆ ನಮ್ಮ ಭಾಗದಲ್ಲಿ ಕೆಲಸ ಆಗುತ್ತದೆ. ಹೀಗಾಗಿ ಇಬ್ಬರೂ ಜೊತೆಯಲ್ಲೇ ಸಾಗಬೇಕು. ಬೇರೆ ಬೇರೆ ದಿಕ್ಕಿನಲ್ಲಿ ಯಾವ ಕಾರಣಕ್ಕೂ ಹೋಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಜನರು ತಮ್ಮ ನಾಯಕರನ್ನು ಒಳ್ಳೆಯ ನಿರೀಕ್ಷೆಗಳೊಂದಿಗೆ ಆಯ್ಕೆ ಮಾಡುತ್ತಾರೆ. ಅದನ್ನು ಈಡೇರಿಸುವುದು ನಾಯಕರ ಕರ್ತವ್ಯ. ಅದನ್ನು ಬಿಟ್ಟು ನಾಯಕರೇ ತದ್ವಿರುದ್ಧವಾದ ದಿಕ್ಕಿನಲ್ಲಿ ಹೋದರೆ, ಜನರನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು. ಈ ವೇಳೆ ಈ ವಿಚಾರದ ಬಗ್ಗೆ ಪ್ರಸ್ತಾಪವಾಗಿದೆ. ಸಿದ್ದರಾಮಯ್ಯ ಅವರಿಗೆ ನಡೆದಾಡಲು ಸಾಧ್ಯವಾಗದ ಕಾರಣ ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಕಲ್ಯಾಣ ಕರ್ನಾಟಕವನ್ನು ಮರೆಯಬೇಡಿ
ಕಲ್ಯಾಣ ಕರ್ನಾಟಕವು ಅನೇಕ ಕಾಂಗ್ರೆಸ್ ಶಾಸಕರು ಹಾಗೂ ಸಂಸದರನ್ನು ಕಳುಹಿಸಿಕೊಟ್ಟಿದೆ. ಇದನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕೂ ಮರೆಯಬಾರದು. ಮೈಸೂರಿನಿಂದ ಪ್ರಾರಂಭವಾಗುವ ಯೋಜನೆಗಳು ಬೆಂಗಳೂರಿಗೆ ಬಂದು ನಿಲ್ಲುತ್ತವೆ. ಆದ್ರೆ. ಕಲ್ಯಾಣ ಕರ್ನಾಟಕದಿಂದ ಶುರುವಾಗುವ ಯೋಜನೆಗಳು ಇಡೀ ಕರ್ನಾಟಕವನ್ನೇ ತಲುಪುತ್ತವೆ ಎಂದೂ ಖರ್ಗೆ ಹೇಳಿದ್ದಾರೆ. ಈ ವರ್ಷ ಕಲ್ಯಾಣ ಕರ್ನಾಟಕಕ್ಕಾಗಿ 5000 ಕೋಟಿ ನೀಡುತ್ತಿದೆ. ಈ ಪ್ರದೇಶವು ಹಲವು ದಶಕಗಳಿಂದ ತೀರಾ ಹಿಂದುಳಿದಿತ್ತು. ಹಾಗಾಗಿ ಇನ್ನೂ ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ. ನಿಮ್ಮ ನಿರಂತರ ಬೆಂಬಲದಿಂದಲೇ ನಾನು ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಕಲ್ಯಾಣ ಕರ್ನಾಟಕದ ಜನರು ಹಾಗೂ ವಿಶೇಷವಾಗಿ ಕಲಬುರಗಿಯ ಜನರಿಗೆ ನನ್ನ ಧನ್ಯವಾದಗಳು ಎಂದು ಖರ್ಗೆ ಸ್ಮರಿಸಿದ್ದಾರೆ.

ಹಣಕಾಸು ಸಚಿವರಾಗಿ 16 ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಎಲ್ಲರೂ ಮೆಚ್ಚಬೇಕು. ದಲಿತರು ಸೇರಿದಂತೆ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಅವರು ಕೆಲಸ ಮಾಡುತ್ತಾರೆ. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಕೂಡ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಡಿಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದು ಇಬ್ಬರೂ ಸಮರ್ಥ ನಾಯಕರು ಎಂದು ಕೊಂಡಾಡಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ: ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಆಗುತ್ತಿದೆ. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತಿಲ್ಲ. ನರೇಗಾ ಯೋಜನೆಯಲ್ಲಿ ನಮಗೆ ಹಣ ಸಿಗುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಮೋದಿ ಹನ್ನೊಂದು ವರ್ಷದಲ್ಲಿ 11 ಸುಳ್ಳುಗಳನ್ನು ಹೇಳಿದ್ದಾರೆ.

ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಅಕೌಂಟ್ಗೆ ಹಾಕಲಿಲ್ಲ. ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡಲಿಲ್ಲ. ಆದರೂ ಯುವಕರು ಯಾಕೆ ಮೋದಿಗೆ ಬೆಂಬಲ ಕೊಡ್ತಾರೋ ಗೊತ್ತಿಲ್ಲ. ಪೆಟ್ರೋಲ್ ಡೀಸೆಲ್ ಕಡಿಮೆ ಮಾಡೋದಾಗಿ ಹೇಳಿದವರು ಹೆಚ್ಚಿಸಿದ್ದಾರೆ. ಗಂಗಾನದಿ ಇಂದಿಗೂ ಸ್ವಚ್ಛ ಆಗಲಿಲ್ಲ. ಮೇಕ್ ಇನ್ ಇಂಡಿಯಾದಡಿಯೂ ನೌಕರಿ ಕೊಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಬುಲೆಟ್ ಟ್ರೈನ್ ಅಂದ್ರು ಅದೂ ಆಗಲಿಲ್ಲ. ಪಿಎಂ ಕಿಸಾನ್ ಯೋಜನೆ ಮಾಡಿದ್ರು, ಇದರಿಂದಲೂ ರೈತರಿಗೆ ಲಾಭ ಸಿಗಲಿಲ್ಲ. ಹಣ ತಗೊಂಡು ಪರಾರಿ ಆದವರನ್ನು ವಿದೇಶದಿಂದ ಹಿಡಿದು ತರುತ್ತೇವೆ ಅಂದ್ರೂ ಅದೂ ಆಗಲಿಲ್ಲ ಎಂದಿದ್ದಾರೆ. ಮೋದಿ 11 ವರ್ಷದಲ್ಲಿ ಹೇಳಿದ 11 ಸುಳ್ಳುಗಳು ಇವು. ನಾನು ಇಷ್ಟು ವರ್ಷ ಅಧಿಕಾರ ನಡೆಸಿದ್ದೇನೆ. ಆದರೆ ಸುಳ್ಳು ಹೇಳಿಲ್ಲ. ಏನೂ ಹೇಳದೆ ಕೆಲಸ ಮಾಡಿದ್ದೇವೆ ಎಂದು ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
1,166 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
ಇಂದು ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ರೂಪಿಸಿರುವ 'ಕಲ್ಯಾಣ ಪಥ' ಯೋಜನೆಗೆ ಜೇವರ್ಗಿಯಲ್ಲಿ ಚಾಲನೆ ನೀಡಿದ್ದು ಅತ್ಯಂತ ತೃಪ್ತಿ ತಂದಿದೆ. ಈ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ 1,166 ಕಿ.ಮೀ ಗ್ರಾಮೀಣ ರಸ್ತೆಗಳನ್ನು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಅಭೂತಪೂರ್ವ ಯೋಜನೆ ಜಾರಿ ಮಾಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಇಂದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ 38 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದ ನೆರವಿನೊಂದಿಗೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವ "ಕಲ್ಯಾಣ ಪಥ" ಯೋಜನೆಗೆ ಚಾಲನೆ ನೀಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಪ್ರದೇಶದ ರಸ್ತೆ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಳೆದ ವರ್ಷದ ಬಜೆಟ್ನಲ್ಲಿ 5000 ಕೋಟಿ ರೂ. ಅನುದಾನ ನೀಡಿದಂತೆ ಈ ವರ್ಷವು ಕೂಡ ಇದೇ ಅನುದಾನವನ್ನು ನೀಡಲಾಗಿದೆ ಎಂದಿದ್ದಾರೆ.












Click it and Unblock the Notifications