ಮಂಡ್ಯ ಕಾಂಗ್ರೆಸ್ ಬಂಡಾಯ ಶಮನಕ್ಕೆ ಪ್ರಯತ್ನ
ಬೆಂಗಳೂರು, ಏ. 2 : ಚುನಾವಣೆ ಸಮಯದಲ್ಲಿ ಮಂಡ್ಯ ಕಾಂಗ್ರೆಸ್ ಬಣ ರಾಜಕೀಯವನ್ನು ಶಮನಗೊಳಿಸಲು ಕೆಪಿಸಿಸಿ ಮುಂದಾಗಿದೆ. ಜಿಲ್ಲೆಯ ಪದಾಧಿಕಾರಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿ, ವಕೀಲ ಪಿ.ಎಂ.ಸೋಮಶೇಖರ್ ಅವರನ್ನು ಕಾರ್ಯಧ್ಯಕ್ಷರಾಗಿ ನೇಮಿಸಲಾಗಿದೆ.
ಮಾಜಿ ವಿದೇಶಾಂಗ ಸಚಿವ ಎಂ.ಎಸ್.ಕೃಷ್ಣ ಇನ್ನೆರಡು ದಿನದಲ್ಲಿ ಮಂಡ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯ ಬಣ ರಾಜಕೀಯವನ್ನು ಶಮನಗೊಳಿಸಲು ಮುಂದಾಗಿರುವ ರಾಜ್ಯ ನಾಯಕರು, ಮೊದಲ ಬಾರಿಗೆ ಜಿಲ್ಲೆಯೊಂದಕ್ಕೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿ ಮಾಡಿ, ಪಿ.ಎಂ.ಸೋಮಶೇಖರ್ ಅವರನ್ನು ಕಾರ್ಯಧ್ಯಕ್ಷರಾಗಿ ನೇಮಕ ಮಾಡಿದೆ.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಗೆ 2012ರಲ್ಲಿ ಆತ್ಮಾನಂದ ಅಧ್ಯಕ್ಷತೆಯಲ್ಲಿ 30 ಮಂದಿ ಪದಾಧಿಕಾರಿಗಳು ನೇಮಕಗೊಂಡಿದ್ದರು. ಇವರಲ್ಲಿ ಕೃಷ್ಣ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಅಂಬರೀಷ್ ಬಣದ ಆರೋಪವಾಗಿತ್ತು. ಆದ್ದರಿಂದ ಸದ್ಯ ಕಾರ್ಯಾಧ್ಯಕ್ಷ ಸೇರಿ 35 ಮಂದಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದರಿಂದಾಗಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಸದ್ಯ ಒಬ್ಬರು ಅಧ್ಯಕ್ಷ, ಒಬ್ಬರು ಕಾರ್ಯಾಧ್ಯಕ್ಷ ಸೇರಿ ಒಟ್ಟು 65 ಮಂದಿ ಪದಾಧಿಕಾರಿಗಳಿದ್ದಾರೆ. ಈ ಮೂಲಕ ಕೆಪಿಸಿಸಿ ಜಿಲ್ಲೆಯಲ್ಲಿ ಉಂಟಾಗಿದ್ದ ಬಣ ರಾಜಕೀಯವನ್ನು ಚುನಾವಣೆ ಕಾಲದಲ್ಲಿ ಶಮನಗೊಳಿಸಲು ಮುಂದಾಗಿದೆ. ಎಲ್ಲರೂ ಒಟ್ಟಾಗಿ ಚುನಾವಣೆಗೆ ಕೆಲಸ ಮಾಡುತ್ತಾರೆಯೇ ಕಾದು ನೋಡಬೇಕು.
ಪದಾಧಿಕಾರಿಗಳ ಪಟ್ಟಿ : ಹೆಚ್ಚುವರಿ ಉಪಾಧ್ಯಕ್ಷರು- ಮಂಜುನಾಥ್, ಎಂ.ಎಸ್.ಲಿಂಗಯ್ಯ, ಕೆ.ಸಿ.ಜೋಗಿಗೌಡ, ಎಂ.ಸಿ.ಚಂದ್ರಶೇಖರ್, ಪಿ.ನಾಗೇಶ್, ಚಿಕ್ಕರಾಮಾಂಜನೇಯಗೌಡ, ಎಂ.ಡಿ.ಜಯರಾಮ್, ಪ್ರಸನ್ನ ಕುಮಾರ್, ಸಿ.ನಾಗಭೂಷಣ್, ಸಿದ್ದರಾಜು, ನಾಗರಾಜು, ಸಚ್ಚಿದಾನಂದ, ಸುರೇಶ್ ಹಾಗೂ ವಿಜಯಲಕ್ಷ್ಮೀ ರಘುನಂದನ್.
ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು : ಎನ್.ದ್ಯಾವೇಗೌಡ, ಸಿ.ಎಂ.ನಾಗರಾಜು, ವಿ.ಎಸ್.ನಾಗರಾಜು, ಸಿ.ನಾಗೇಗೌಡ, ಸಿ.ಎಂ.ಮಹೇಶ್, ಎಚ್.ಬಿ.ಚಂದ್ರಶೇಖರ್, ರಾಜಶೇಖರ್, ಎಚ್.ಕೆ.ಪುಟ್ಟಸ್ವಾಮಿ, ಎಸ್.ಚಿಕ್ಕಣ್ಣ, ಕೆ.ಟಿ.ಕೆಂಪಯ್ಯ, ವೈ.ಎನ್.ಚಂದ್ರು, ಎಂ.ಸಿ.ಧನಂಜಯ, ಕೆ.ಭಾರತಿ, ರಾಮೇಗೌಡ, ಶಂಕರ್, ಅಕ್ರಂ, ಬೇಲೂರು ಸೋಮಶೇಖರ್, ನಸರೀನ್ ತಾಜ್ ಹಾಗೂ ಮುನಾವರ್ ಖಾನ್.
ಹೆಚ್ಚುವರಿ ಕಾರ್ಯದರ್ಶಿಗಳು : ಸೈಯದ್ ಗಫೂರ್, ಮಂಜುಳಾ, ಕೆ.ಪಿ.ರವಿಕುಮಾರ್, ಎಂ.ಬಿ.ರಮೇಶ್, ಎಂ.ಸಿ.ಮಹಾಲಿಂಗಂ, ಶಿವರಾಂ, ಮಂಜು, ಜಾರ್ಜ್, ಜಗದೀಶ್ ಚಂದ್ರ ಮತ್ತು ರಮೇಶ್ ಮಳವಳ್ಳಿ.
ರಮ್ಯಾ ವಿರುದ್ಧ ಅಸಮಾಧಾನ : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಸಚಿವ ಅಂಬರೀಶ್ ಅವರ ಆಪ್ತ ಹಾಗೂ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲವಿದ್ದರೆ ಗೆದ್ದು ಬಿಡಬಹುದು ಎಂದು ರಮ್ಯಾ ಅವರು ಭಾವಿಸಿರುವಂತಿದೆ. ಆದರೆ ಅಷ್ಟೇ ಸಾಕಾಗದು. ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸವೂ ಅತಿ ಮುಖ್ಯ ಎಂದು ಅವರು ಹೇಳಿದ್ದಾರೆ.












Click it and Unblock the Notifications