ವಿಧಾನಸಭೆ ಟಿಕೆಟ್ ಬಯಸಿರುವ ಪರಿಷತ್ ಸದಸ್ಯರ ಪಟ್ಟಿ!
ಬೆಂಗಳೂರು, ಜನವರಿ 18 : ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. 10ಕ್ಕೂ ಹೆಚ್ಚು ವಿಧಾನಪರಿಷತ್ ಸದಸ್ಯರು ವಿಧಾನಸಭೆ ಪ್ರವೇಶಿಸಲು ಟಿಕೆಟ್ ಬಯಸಿದ್ದಾರೆ. ಪಕ್ಷಗಳು ಎಂಎಲ್ಸಿಗಳಿಗೂ ಟಿಕೆಟ್ ನೀಡಲಿವೆಯೇ? ಕಾದು ನೋಡಬೇಕು.
ವಿಧಾನಪರಿಷತ್ ಸದಸ್ಯರ ಪೈಕಿ ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ ಅವರು ವಿಧಾನಪರಿಷತ್ ಸದಸ್ಯರು. ಆದರೆ, ಅವರು ಕೊರಟಗೆರೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ಬೆಂಗಳೂರು ರಾಜಕೀಯ : ಮಲ್ಲೇಶ್ವರಂಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಈ ಬಾರಿಯ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರ ಹಿಡಿಯುವ ಉತ್ಸಾಹದಲ್ಲಿರುವ ಕಾಂಗ್ರೆಸ್, ಗೆಲುವು ಸಾಧಿಸುವ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡಬಹುದು ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು.
ಮಂಗಳೂರು ದಕ್ಷಿಣ ಕ್ಷೇತ್ರ : ಕಾಂಗ್ರೆಸ್ v/s ಬಿಜೆಪಿ ನೇರ ಹಣಾಹಣಿ!
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವು ಕಾಂಗ್ರೆಸ್ ನಾಯಕರ ಹೆಸರು ಕೇಳಿಬರುತ್ತಿದೆ. ಬಿಜೆಪಿಯಲ್ಲಿಯೂ ಕೆಲವು ಪರಿಷತ್ ಸದಸ್ಯರು ವಿಧಾನಸಭೆ ಚುನಾವಣೆ ಟಿಕೆಟ್ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಯಾರು? ವಿವರಗಳು ಚಿತ್ರದಲ್ಲಿವೆ.....
ಡಾ.ಜಿ.ಪರಮೇಶ್ವರ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು 2014ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿದೆ. 2013ರ ಚುನಾವಣೆಯಲ್ಲಿ ಅವರು ತುಮಕೂರಿನ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ.
ಎಚ್.ಎಂ.ರೇವಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯ, ಕ್ಷೇತ್ರ ಜೆಡಿಎಸ್ ವಶದಲ್ಲಿದ್ದು ಕೆ.ಗೋಪಾಲಯ್ಯ ಶಾಸಕರು.
ಎಂ.ಆರ್.ಸೀತಾರಾಮ್
ಸಿದ್ದರಾಮಯ್ಯ ಸಂಪುಟದಲ್ಲಿ ಯೋಜನೆ, ಸಾಂಖ್ಯಿಕ, ಹಣಕಾಸು ಮತ್ತು ಅನುಷ್ಠಾನ ಖಾತೆ ಸಚಿವರಾಗಿರುವ ಎಂ.ಆರ್.ಸೀತಾರಾಮ್ ಅವರನ್ನು ವಿಧಾನಸಭೆ ಚುನವಣಾ ಕಣಕ್ಕಿಳಿಸುವ ಸಾಧ್ಯತೆ ಇದೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಅವರು ಸದ್ಯ ವಿಧಾನಪರಿಷತ್ ಸದಸ್ಯರು. ಈ ಬಾರಿಯೂ ಅವರು ಮಲ್ಲೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಎಂ.ಡಿ.ಲಕ್ಷ್ಮೀ ನಾರಾಯಣ
ವಿಧಾನಪರಿಷತ್ ಸದಸ್ಯ, ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಬಯಸಿದ್ದಾರೆ.
ಐವಾನ್ ಡಿಸೋಜಾ
ವಿಧಾನಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಮಂಗಳೂರು ದಕ್ಷಿಣ ಕ್ಷೇತ್ರದಿಂದ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು.
ಆರ್.ಬಿ.ತಿಮ್ಮಾಪುರ
ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿರುವ ಆರ್.ಬಿ.ತಿಮ್ಮಾಪುರ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಎಸ್.ಆರ್.ಪಾಟೀಲ್
ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್ ಅವರು ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ. ಬಾಗಲಕೋಟೆ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಮೋಟಮ್ಮ
ಪರಿಷತ್ ಸದಸ್ಯರಾಗಿ ಮೋಟಮ್ಮ ಅವರು ಹಲವಾರು ಬಾರಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಮೂಡಿಗೆರೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಕೆಲವು ಟಿಕೆಟ್ ಆಕಾಂಕ್ಷಿಗಳು
ವಿ.ಎಸ್.ಉಗ್ರಪ್ಪ, ಧರ್ಮಸೇನ, ರವಿ, ರಘು ಆಚಾರ್ ಅವರು ಸಹ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ಸಿಗುತ್ತದೆ? ಎಂದು ಕಾದು ನೋಡಬೇಕು.