ಭಿನ್ನಮತೀಯ ರಾಮಲಿಂಗಾ ರೆಡ್ಡಿಗೆ ಮತ್ತೊಬ್ಬ ಕೈ ಶಾಸಕ ಸಾಥ್
ಚಿಕ್ಕಬಳ್ಳಾಪುರ, ಜೂನ್ 04: ಕಾಂಗ್ರೆಸ್ ಮೇಲೆ ಸಿಡಿದೆದ್ದಿರುವ ಹಿರಿಯ ಮುಖಂಡ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಸಾಥ್ ನೀಡಿದ್ದಾರೆ.
ರಾಮಲಿಂಗಾ ರೆಡ್ಡಿ ಅವರ ಪರಿಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಮತ್ತೋರ್ವ ಅತೃಪ್ತ ಕಾಂಗ್ರೆಸ್ ಶಾಸಕ ಸುಧಾಕರ್, ರಾಮಲಿಂಗಾ ರೆಡ್ಡಿ ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು, ಆದರೆ ಈಗ ಅವರಿಗೆ ಅವಕಾಶ ನೀಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರಿಬ್ಬರೂ ಬಿಜೆಪಿಗೆ ಹೋಗುತ್ತಾರೆಯೇ ಎಂಬ ಬಗ್ಗೆ ನನಗೆ ಎಳ್ಳಷ್ಟೂ ಮಾಹಿತಿ ಇಲ್ಲ, ಆದರೆ ಆ ವಿಚಾರವಾಗಿ ಮಾಧ್ಯಮಗಳಿಗೆ ಇರುವಷ್ಟೆ ನನಗೂ ಕುತೂಹಲ ಇದೆ ಎಂದಷ್ಟೆ ಹೇಳಬಲ್ಲೆ ಎಂದು ಸುಧಾಕರ್ ಅವರು ಹೇಳಿದ್ದಾರೆ.

'ಸಂಪುಟ ವಿಸ್ತರಣೆ ಎಚ್ಡಿಕೆಗೆ ಬಿಟ್ಟ ವಿಚಾರ'
ಸಂಪುಟ ವಿಸ್ತರಣೆ ಮಾಡುವುದು ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯಾವ ಹುದ್ದೆ ನೀಡುತ್ತಾರೆಯೋ ಕಾದು ನೋಡಬೇಕು, ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಅವರು ಪ್ರಯತ್ನಿಸಬೇಕು ಎಂದು ಸುಧಾಕರ್ ಅವರು ಹೇಳಿದರು.

ಕಾಂಗ್ರೆಸ್ಗೆ ನಿಷ್ಠನಾಗಿರುತ್ತೇನೆ: ಸುಧಾಕರ್
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿರುವುದಾಗಿ ಹೇಳಿದ ಸುಧಾಕರ್, ಬಿಜೆಪಿಯವರಿಗೆ 105 ಶಾಸಕರ ಬಲವಿದೆ. ಇನ್ನು 9 ಶಾಸಕರು ಅವರ ಜೊತೆಗೂಡಿದರೆ ಸರ್ಕಾರ ರಚಿಸುವ ಅವಕಾಶ ದೊರೆಯಲಿದೆ ಎಂದರು. ಆದರೆ ಸರ್ಕಾರವನ್ನು ಉಳಿಸಿಕೊಂಡು ಹೋಗುವ ಸಮರ್ಥರು ಕಾಂಗ್ರೆಸ್ನಲ್ಲಿದ್ದಾರೆ ಎಂದು ಅವರು ಹೇಳಿದರು.

'ವಿಶ್ವನಾಥ್ ಅವರು ರಾಜೀನಾಮೆ ನೀಡಬಾರದಿತ್ತು'
ದೇವೇಗೌಡ ಅವರನ್ನು ತುಮಕೂರಿನಿಂದ ಸ್ಪರ್ಧಿಸುವಂತೆ ಮಾಡಿ ಬೇಕೆಂದೇ ಅವರನ್ನು ಸೋಲಿಸಲಾಯಿತು ಎಂದು ವಿಶ್ವನಾಥ್ ಅವರು ಮಾಡಿರುವ ಆರೋಪ ಸುಳ್ಳು ಎಂದ ಅವರು, ವಿಶ್ವನಾಥ್ ಅವರು ರಾಜೀನಾಮೆ ನೀಡ ಬಾರದಿತ್ತು, ಆದರೆ ಅದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

'ಸಿದ್ದರಾಮಯ್ಯ ಎಲ್ಲರ ಪರ ಪ್ರಚಾರ ಮಾಡಿದ್ದಾರೆ'
ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ಸಿದ್ದರಾಮಯ್ಯ ಅವರು ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಎಲ್ಲರ ಪರವಾಗಿಯೂ ಪ್ರಚಾರ ಮಾಡಿದ್ದಾರೆ ಹಾಗಿದ್ದರೂ ಅವರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.












Click it and Unblock the Notifications