ಬಿಜೆಪಿ ಕ್ರಿಮಿನಲ್ ಅಪರಾಧಗಳನ್ನು ತೊಳೆಯುವ ವಾಷಿಂಗ್ ಮಷಿನ್-ಪ್ರಿಯಾಂಕ್ ಖರ್ಗೆ
ಬೆಂಗಳೂರು, ನವೆಂಬರ್ 30: ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಬಿಜೆಪಿ ವಿರುದ್ಧ ಮುಗಿಬಿದ್ದಿದೆ.
ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ. ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
ಮಂಡ್ಯದಲ್ಲಿ ಬಿಜೆಪಿ ತಂತ್ರ ಫಲಿಸುತ್ತಾ, ಮುಳುವಾಗುತ್ತಾ?
ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ನಿಯಂತ್ರಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಪೊಲೀಸರೆದುರು ಪರೇಡ್ ಮಾಡ್ತಿದ್ದ ರೌಡಿಗಳು ಈಗ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲು ಪರೇಡ್ ಮಾಡುತ್ತಿದ್ದಾರೆ. ರೌಡಿಗಳ ಸಮರ್ಥನೆಗೆ ಇಳಿದಿದೆ ಬಿಜೆಪಿ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕರ್ನಾಟಕ ಮತ್ತು ದೇಶದಲ್ಲಿ ಏನಾಗಿದೆ ಎಂದರೆ, ಕೇಸರಿ ಶಾಲು ಅಥವಾ ಬಿಜೆಪಿ ಶಾಲು ಹಾಕಿಕೊಂಡರೆ, ಎಲ್ಲಾ ಪಾಪಗಳು ಅಥವಾ ಪಾಪಿಗಳು ಪಾವನರಾಗಿ ಬಿಡುತ್ತಾರೆ. ಬಿಜೆಪಿ ಪಕ್ಷವೊಂಡು ವಾಷಿಂಗ್ ಮಿಷಿನ್ ರೀತಿ. ಹೊರಗಡೆ ಇದ್ದಾಗ ಪಾಪಿಗಳು ಇರುತ್ತಾರೆ, ಕೆಟ್ಟ ಕೆಲಸ ಮಾಡುತ್ತಾರೆ, ಕಾನೂನು ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆದರೆ ಅಂತವರೇ ಬಿಜೆಪಿ ಸೇರಿದ ತಕ್ಷಣ ಅಥವಾ ಕೇಸರಿ ಶಾಲು, ಬಿಜೆಪಿ ಶಾಲು ಧರಿಸಿದ ತಕ್ಷಣ ಅವರೆಲ್ಲರೂ ಪಾವನರಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಜನ ಸ್ಪಂದನೆ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳ ಸ್ಪಂದನೆಯಾಗುತ್ತಿದೆ
ಸಿಸಿಬಿ ಹಾಗೂ ಸಿಐಡಿಗೆ ಸಿಗಲಾರದವರು, ಸಂಪೂರ್ಣ ಗೃಹ ಇಲಾಖೆಗೆ ಸಿಗದವರು, ಬಿಜೆಪಿ ಸಂಸದರ ಜೊತೆ ಸುದ್ದಿಗೋಷ್ಠಿ ನಡೆಸುತ್ತಾರೆ. ಅವರ ಜೊತೆ ರಕ್ತದಾನ ಶಿಬಿರ ಮಾಡುತ್ತಾರೆ. ಅವರ ಮುಂದೆ ಭಾಷಣ ಮಾಡುತ್ತಾರೆ. ಇದರಿಂದ ಕರ್ನಾಟಕದಲ್ಲಿ ಬಿಜೆಪಿ ಎಂತಹ ಪ್ರವೃತ್ತಿ ಬೆಳೆಸುತ್ತಿದೆ ಎನ್ನುವುದನ್ನು ನೋಡಬಹುದು. ಎಲ್ಲೋ ಒಂದು ಕಡೆ, ಈ ಚುನಾವಣೆ ಗೆಲ್ಲಲು ಅವರ ಸಾಧನೆ ಮೇಲೆ ಆಗಲ್ಲ ಎಂದು ಅವರಿಗೆ ಗೊತ್ತಾಗಿದೆ. ಜನ ಸ್ಪಂದನೆ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳ ಸ್ಪಂದನೆಯಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ನಮ್ಮ ಕಾರ್ಯಕರ್ತರ ವಿರುದ್ಧ ಮೂರು ಸಿಸಿಬಿ ಪ್ರಕರಣಗಳು ದಾಖಲಾಗಿದೆ
ಈ ಬಾರಿ ಚುನಾವಣೆಯನ್ನು ಹಣದ ಮೇಲೆ ಗೆಲ್ಲಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಎಷ್ಟು ವಿಪರ್ಯಾಸ ಎಂದರೆ, ಗೃಹ ಇಲಾಖೆ ಯಾವರೀತಿ ಕೆಲಸ ಮಾಡುತ್ತಿದೆ ಎಂದರೆ, ಅವರ ಆದ್ಯತೆಗಳು ಏನು ಎಂದರೆ, ಪೋಸ್ಟರ್ ಅಂಟಿಸಿದ ನಮ್ಮ ಕಾರ್ಯಕರ್ತರಿಗೆ ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ. ಅವರ ವಿರುದ್ಧ ಮೂರು ಸಿಸಿಬಿ ಪ್ರಕರಣಗಳು ದಾಖಲಾಗಿದೆ. ಅವರು ಎಲ್ಲೂ ಓಡಿ ಹೋಗಿಲ್ಲ. ಎಲ್ಲಾ ನೋಟಿಸ್ಗೂ ಉತ್ತರಿಸುತ್ತಿದ್ದಾರೆ. ಅದಕ್ಕೆ ಸಿಸಿಬಿ ತನಿಖೆ ನಡೆಯುತ್ತಿದೆ. ಆದರೆ ಯಾರಿಗೆ ಲುಕ್ಔಟ್ ನೋಟಿಸ್ ಜಾರಿಯಾಗಿತ್ತೋ ಅವರು ಬಿಜೆಪಿ ಸಂಸದರ ಜೊತೆಗೆ ಇರುತ್ತಾರೆ ಎಂದರು.
ಬಿಜೆಪಿ ಸರ್ಕಾರ ಯಾವುದಕ್ಕೆ ಆದ್ಯತೆ ಕೊಡಬೇಕು ಅದಕ್ಕೆ ಕೊಡುತ್ತಿಲ್ಲ
ಯಾರು ಬಿಜೆಪಿ ಸಂಸದರ ಜೊತೆ ಕಾಣಿಸುತ್ತಾರೆ, ಅವರು ಸಿಸಿಬಿ ಕಾಣಿಸುತ್ತಿಲ್ಲವೇ..? ಅಥವಾ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬಶಶರದು ಎಂದು ಆದೇಶ ಏನಾದರೂ ಬಂದಿದೆಯೇ..? ಇವರು ನಮ್ಮ ಪಕ್ಷಕ್ಕೆ ಉಪಯೋಗವಾಗಿದ್ದಾರೆ, ಹೀಗಾಗಿ ಅವರನ್ನು ಬಂಧಿಸಬಾರದು ಎಂದು ಆದೇಶ ಏನಾದರೂ ಹೋಗಿದೆಯಾ..? ಬಿಜೆಪಿ ಸರ್ಕಾರ ಯಾವುದಕ್ಕೆ ಆದ್ಯತೆ ಕೊಡಬೇಕು ಅದಕ್ಕೆ ಕೊಡುತ್ತಿಲ್ಲ. ಕಾರ್ಯಕ್ರಮ ನಡೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮತ್ತೆ ಕಣ್ಮರೆಯಾಗಿದ್ದಾರೆ ಎಂದರೆ ಗೃಹ ಇಲಾಖೆ ಎಷ್ಟು ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಉದಾಹರಣೆ ಎಂದು ಹೇಳಿದರು.