ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಹೊಸ ತಂತ್ರಕ್ಕೆ ಮೊರೆಹೋದ ಕಾಂಗ್ರೆಸ್
Recommended Video

ಬೆಂಗಳೂರು, ಮಾರ್ಚ್ 11: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರ್ನಾಟಕ ಕಾಂಗ್ರೆಸ್, ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ತಂತ್ರಕ್ಕೆ ಮೊರೆ ಹೋಗಿದೆ.
ಕಾಂಗ್ರೆಸ್ ಪಕ್ಷವು ಟೆಲಿಕಾಲಿಂಗ್ ಮೂಲಕ ಕ್ಷೇತ್ರದ ಕಾರ್ಯಕರ್ತರನ್ನು ತಲುಪುವ ಯತ್ನ ಮಾಡುತ್ತಿದ್ದು, ಅವರ ಆಯ್ಕೆ ಯಾರು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
ಮೊದಲೆ ರೆಕಾರ್ಡ್ ಮಾಡಿದ ಕಾಲ್ ಒಂದು ಕ್ಷೇತ್ರದ ಕಾರ್ಯಕರ್ತರಿಗೆ ಬರುತ್ತದೆ. ದಿನೇಶ್ ಗುಂಡೂರಾವ್ ಅವರ ಧ್ವನಿಯಲ್ಲಿ ಪ್ರೀ ರೆಕಾರ್ಡೆಡ್ ಕಾಲ್ ಇದಾಗಿದ್ದು, ನಿಮ್ಮ ಕ್ಷೇತ್ರಕ್ಕೆ ಸೂಕ್ತವಾದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಕೇಳುತ್ತಾರೆ.
ಆ ನಂತರ ಬೀಪ್ ಶಬ್ದವೊಂದು ಬಂದ ನಂತರ ಆ ಕರೆಯು ವಾಲ್ಸ್ ಮೇಲ್ ಆಗಿ ಪರಿವರ್ತಿತಗೊಳ್ಳುತ್ತದೆ. ಆಗ ಮತದಾರನು ತನಗೆ ಇಷ್ಟ ಬಂದ ಹೆಸರನ್ನು ಹೇಳಿದರೆ ಅದು ದಾಖಲಾಗುತ್ತದೆ. ಪ್ರಸ್ತುತ ಬಾಗಲಕೋಟೆ ಮತ್ತಿತರ ಕ್ಷೇತ್ರಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ.

ಟೆಲಿ ಕಾಲಿಂಗ್ ಮಾಡುತ್ತಿದೆ ಕಾಂಗ್ರೆಸ್
ಕರೆಯು 'ಆತ್ಮೀಯ ಕಾಂಗ್ರೆಸ್ ಕಾರ್ಯಕರ್ತರೇ ನಮಸ್ಕಾರ' ಎಂದು ಶುರುವಾಗುತ್ತದೆ. ಆ ನಂತರ ಕರೆ ಸ್ವೀಕರಿಸಿರುವವರ ಮತಕ್ಷೇತ್ರ ಕೇಳಲಾಗುತ್ತದೆ. ಆ ನಂತರ ಆ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ಕೆಲವು ಕಾಂಗ್ರೆಸ್ ಆಕಾಂಕ್ಷಿಗಳ ಹೆಸರುಗಳು ಕೇಳಿ ಬರುತ್ತವೆ. ಅಂತಿಮವಾಗಿ ಕರೆ ಸ್ವೀಕರಿಸಿದ ವ್ಯಕ್ತಿಯು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರು ಹೇಳುವದರೊಂದಿಗೆ ಕರೆ ಕಡಿತಗೊಳ್ಳುತ್ತದೆ.

ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರದಲ್ಲಿ ಮಾತ್ರ
ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರಗಳಲ್ಲಿ ಮಾತ್ರವೇ ಈ ರೀತಿಯ ಪ್ರಯೋಗ ಮಾಡಲಾಗುತ್ತಿದೆ. ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ವಿಜಯಪುರ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಾತ್ರವೇ ಈ ಟೆಲಿ ಕಾಲ್ಗಳು ಬರುತ್ತಿವೆ.

ಈ ಹಿಂದೆ ಬಿಜೆಪಿ ಪ್ರಯೋಗ ಮಾಡಿತ್ತು
ಈ ರೀತಿಯ ಪ್ರಯೋಗವನ್ನು ಈ ಹಿಂದೆ ಬಿಜೆಪಿ ಸಹ ಮಾಡಿತ್ತು. ಅದನ್ನೇ ಕಾಂಗ್ರೆಸ್ ಈಗ ಬಳಸುತ್ತಿದೆ. ಕಾರ್ಯಕರ್ತರೂ, ಬೂತ್ ಸಮಿತಿ ಅಧ್ಯಕ್ಷರುಗಳ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಾಗುತ್ತಿರುವುದು ಕಾಂಗ್ರೆಸ್ ನಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಇದಕ್ಕೆ ಮುನ್ನಾ ಹೈಕಮಾಂಡ್ ಅಥವಾ ರಾಜ್ಯ ನಾಯಕರುಗಳೇ ಟಿಕೆಟ್ ನಿರ್ಧಾರ ಮಾಡುತ್ತಿದ್ದರು.

ಗೊಂದಲ ನಿವಾರಣೆಗಾಗಿ ಈ ತಂತ್ರ
ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷವು 21 ಕ್ಷೇತ್ರಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದು, ಆ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಯತ್ನಿಸುತ್ತಿದೆ. ಜೆಡಿಎಸ್ ಜೊತೆಗಿನ ಮೈತ್ರಿಯ ಲಾಭವನ್ನು ಪೂರ್ಣವಾಗಿ ಪಡೆದುಕೊಳ್ಳಬೇಕು ಮತ್ತು ಅಭ್ಯರ್ಥಿಗಳ ಆಯ್ಕೆ ನಡುವೆ ಗೊಂದಲವಾಗಿ ಅದು ಫಲಿತಾಂಶದ ಮೇಲೆ ಪರಿಣಾಮ ಬೀರದಂತೆ ತಡೆಯಲು ಈ ತಂತ್ರದ ಮೊರೆ ಹೋಗಿದೆ ರಾಜ್ಯ ಕಾಂಗ್ರೆಸ್.












Click it and Unblock the Notifications