ಜನವರಿ 18 ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ, ಶಾಸಕರಿಗೆ ಎಚ್ಚರಿಕೆ?
ಬೆಂಗಳೂರು, ಜನವರಿ 16: ಆಪರೇಷನ್ ಕಮಲದ ಕತ್ತಿ ತಲೆ ಮೇಲೆ ತೂಗುತ್ತಿರುವ ಕಾರಣ ಎಚ್ಚೆತ್ತುಕೊಂಡಿರುವ ಕರ್ನಾಟಕ ಕಾಂಗ್ರೆಸ್ ಜನವರಿ 18 ಕ್ಕೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಸುತ್ತಿದೆ.
ಜನವರಿ 18 ರಂದು ನಗರದ ಖಾಸಗಿ ಹೊಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಕೆಲವು ಮಹತ್ವದ ಬದಲಾವಣೆಗಳ ಬಗ್ಗೆ ಶಾಸಕರಿಗೆ ಕೆಪಿಸಿಸಿ ಮಾಹಿತಿ ನೀಡಲಿದೆ, ಮತ್ತು ಆಪರೇಷನ್ ಕಮಲಕ್ಕೆ ಬಲಿ ಆಗದಂತೆ ಎಚ್ಚರ ನೀಡಲಿದೆ.
ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡು ಮುಂಬೈಗೆ ತೆರಳಿದ್ದ ಶಾಸರಲ್ಲಿ ಕೆಲವರು ವಾಪಸ್ ಬಂದಿದ್ದು, ರಮೇಶ್ ಜಾರಕಿಹೊಳಿ ಮಾತ್ರ ಅಲ್ಲೇ ಉಳಿದಿದ್ದಾರೆ. ಆದರೆ ಜನವರಿ 18 ರಂದು ನಡೆವ ಶಾಸಕಾಂಗ ಸಭೆಗೆ ಅವರೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರ ಉರುಳಿಸಲು ಬಿಜೆಪಿ ಮಾಡಿದ್ದ ಪ್ರಯತ್ನದಿಂದ ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಪಾರಾಗಿದೆ ಆದರೂ ಮುಂದುಯೂ ಆಪರೇಷನ್ ಕಮಲದ ಭೀತಿ ತಪ್ಪಿದ್ದಲ್ಲ ಹಾಗಾಗಿ ಕಾಂಗ್ರೆಸ್ ಶಾಸಕರಿಗೆ ತೀಕ್ಷ ಎಚ್ಚರಿಕೆ ನೀಡುವ ಕಾರಣ ಈ ಶಾಸಕಾಂಗ ಸಭೆ ಕರೆಯಾಗಿದೆ.
ಅತೃಪ್ತ ಶಾಸಕರನ್ನು ಮನವೊಲಿಸಲು ಕೆಲವು ಜವಾಬ್ದಾರಿಗಳನ್ನು ಕೊಡುವುದಾಗಿ ಕೆಪಿಸಿಸಿ ಹೇಳಿದ್ದು, ಸಂಪುಟದಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆ.ಸಿ.ವೇಣುಗೋಪಾಲ್ ಅವರು ಸಹ ಶಾಸಕಾಂಗ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರವನ್ನು ಯಾವುದೇ ಹಂತದಲ್ಲೂ ಬೀಳಲು ಬಿಡಬಾರದೆಂದು ಹೈಕಮಾಂಡ್ ಹೇಳಿರುವ ಕಾರಣ, ಶಾಸಕಾಂಗ ಸಭೆಯಲ್ಲಿ ಅವರು ಕೈ ಶಾಸಕರಿಗೆ ಎಚ್ಚರಿಕೆ ನೀಡಲಿದ್ದಾರೆ ಎನ್ನಲಾಗಿದೆ.












Click it and Unblock the Notifications