ಅಮಿತ್ ಶಾ ಜೀ, ನಮ್ ಕಡೆ ಶ್ರೀಗಳ ಮುಂದೆ ಕಾಲ್ ಮೇಲೆ ಕಾಲ್ ಹಾಕಿ ಕೂರುವ ಪದ್ದತಿಯಿಲ್ಲ!
ತುಮಕೂರು, ಏಪ್ರಿಲ್ 1: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಒಂದು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಗುರುವಂದನಾ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಅಮಿತ್ ಶಾ, ಶ್ರೀಗಳ ಗದ್ದುಗೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ತುಂಬಿದ ವೇದಿಕೆಯಲ್ಲಿ ರಾಜ್ಯ ಸರಕಾರದ ಪ್ರಮುಖರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಾರಾಯಣಸ್ವಾಮಿ, ಯಡಿಯೂರಪ್ಪ, ಸುತ್ತೂರು ಮತ್ತು ಸಿದ್ದಗಂಗಾ ಮಠದ ಶ್ರೀಗಳು ಉಪಸ್ಥಿತರಿದ್ದರು. ಸುತ್ತೂರು ಮತ್ತು ಸಿದ್ದಗಂಗಾ ಮಠದ ಶ್ರೀಗಳ ಮಧ್ಯದ ಆಸನದಲ್ಲಿ ಅಮಿತ್ ಶಾ ಕುಳಿತಿದ್ದರು.
ಸಿದ್ದಗಂಗಾ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಫುಲ್ ಜೋಶ್: ಏನೀ ರಾಜಕೀಯ ಒಳಗಟ್ಟು
ಹಣೆಗೆ ನಾಮ ಹಾಕಿಕೊಂಡು ಸಾಂಪ್ರದಾಯಿಕವಾಗಿ ಅಮಿತ್ ಶಾ ಹಾಜರಿದ್ದರೂ, ಅವರು ಕೂತಿದ್ದ ಭಂಗಿ ಈಗ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ನಾಡಿನ ಇಬ್ಬರು ಶ್ರೀಗಳ ಅಕ್ಕಪಕ್ಕದಲ್ಲಿ ಅಮಿತ್ ಶಾ ಅವರು ಶೂ ಧರಿಸಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತಿದ್ದರು. ಅಮಿತ್ ಶಾ ಅವರ ಶೂ ಸಿದ್ದಗಂಗಾ ಶ್ರೀಗಳ ಕಡೆಗಿತ್ತು.
ಹಿಂದೂ ಸಮಾಜವನ್ನು ಉದ್ದಾರ ಮಾಡಲು ಅವತಾರವೆತ್ತಿದಂತೆ ಮಾತನಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರ, ಸಂಪ್ರದಾಯ, ಗೌರವ ಕೊಡುವುದು ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಇದೇ ರಾಹುಲ್ ಗಾಂಧಿ ನಿನ್ನೆಯ ದಿನ ಸಿದ್ದಗಂಗಾ ಮಠಕ್ಕೆ ಹೋದಾಗ, ಯಾವರೀತಿ ನಡೆದುಕೊಂಡರು ಎನ್ನುವುದನ್ನು ಚಿತ್ರ ಸಮೇತ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಟ್ವೀಟ್ ಮಾಡುತ್ತಿದೆ. ರಾಹುಲ್ ಗಾಂಧಿ ಶೂ ತೆಗೆದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿಂದೆಯೂ ಕೂಡಾ ಅಮಿತ್ ಶಾ ಅವರ ವಿರುದ್ದ ಈ ರೀತಿಯ ಆರೋಪ ಕೇಳಿ ಬಂದಿತ್ತು. ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡಾ ಅಮಿತ್ ಶಾ ವೇದಿಕೆಯಲ್ಲಿ ಕೂತಿರುವ ಶೈಲಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಚಪ್ಪಲಿ ತೆಗೆದಿಟ್ಟು ಹೋಗುವುದು, ಮಠಗಳಿಗೆ ನಾವು ಕೊಡ ಗೌರವ ಮತ್ತು ಸಂಸ್ಕೃತಿ, ಅದು ಬಿಟ್ಟು ಚಪ್ಪಲಿಯನ್ನು ಪೀಠಾಧಿಪತಿಗಳ ಕಡೆಗೆ ತೋರಿಸುವುದಲ್ಲ. ನೀವು ಹೊಂದಿರುವ ಕೇಂದ್ರದ ಸಚಿವ ಸ್ಥಾನ ಇಲ್ಲಿ ಅಪ್ರಸ್ತುತ, ಬಸವಣ್ಣನವರ ಮನೆಯಲ್ಲಿ ಎಲ್ಲರೂ ಸಮಾನರು. ಕೇಂದ್ರ ಸಚಿವರ ಈ ಕ್ರಮ ಸ್ವೀಕಾರಾರ್ಹವಲ್ಲ. ನಕಲಿ ಮತ್ತು ನಿಜವಾದ ನಂಬಿಕೆಯುಳ್ಳವರ ನಡುವಿನ ವ್ಯತ್ಯಾಸವನ್ನು ನೋಡಿ"ಎಂದು ಸುರ್ಜೇವಾಲ ಅವರು ಅಮಿತ್ ಶಾ ಮತ್ತು ರಾಹುಲ್ ಗಾಂಧಿಯವರ ಕೂತಿರುವ ಭಂಗಿಯ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
The respect & culture of Mutts is to “take off shoes” & not point your “feet towards the Seers”!
— Randeep Singh Surjewala (@rssurjewala) April 1, 2022
Post you hold doesn’t matter.
Everyone is equal in the home of Lord Basavanna.
HM’s action in Siddaganga Mutt is unacceptable.
See the difference between Fake and True Believer 👇 pic.twitter.com/8IPuxGl1FH
"ಬಸವಣ್ಣ ಎನ್ನುವುದು ಮಾನವೀಯತೆಯ, ಸರಳತೆಯ ಪ್ರತೀಕ. ಧಾರ್ಮಿಕ ಸಭೆಯಲ್ಲಿ, ಕಾಲಿನ ಮೇಲೆ ಕಾಲು ಹಾಕಿಕೊಂಡು ಸಿದ್ದಗಂಗಾ ಶ್ರೀಗಳ ಕಡೆ ಶೂ ತೋರಿಸಿ ಕೇಂದ್ರ ಗೃಹ ಸಚಿವರು ಏನು ಸಂದೇಶವನ್ನು ರವಾನಿಸುತ್ತಿದ್ದಾರೆ"ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ. 'ಪ್ರತೀ ಧರ್ಮವನ್ನು ಅಮಿತ್ ಶಾ ವ್ಯಾಪಾರದ ದೃಷ್ಟಿಯಿಂದ ನೋಡುತ್ತಾರೆ, ರಾಹುಲ್ ಗಾಂಧಿ ಎಲ್ಲ ಧರ್ಮಕ್ಕೂ ಗೌರವವನ್ನು ಕೊಡುತ್ತಾರೆ' ಎನ್ನುವ ಪ್ರತಿಕ್ರಿಯೆ ಸುರ್ಜೇವಾಲ ಟ್ವೀಟಿಗೆ ಬಂದಿದೆ.