ದ್ವಿಚಕ್ರ ವಾಹನ ಶವಯಾತ್ರೆಗೆ ಹೆಗಲು ಕೊಟ್ಟ ಕಾಂಗ್ರೆಸ್ ನಾಯಕರು!
ಬೆಂಗಳೂರು, ಜೂ. 29: ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಬೀದಿಗಳಿದು ಪ್ರತಿಭಟನೆ ಮಾಡಿದರು. ಆದರೆ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮುಂಜಾಗ್ರತೆ ತೆಗೆದು ಕೊಳ್ಳದೆ ಪ್ರತಿಭಟನೆ ಮಾಡಿದ್ದು ಜನರ ಟೀಕೆಗೆ ಗುರಿಯಾಗಿದೆ. ಸತತವಾಗಿ ಕಳೆದ 22 ದಿನಗಳಿಂದ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೋವಿಡ್-19 ನಿಂದಾಗಿರುವ ಲಾಕ್ಡೌನ್ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
Recommended Video
ತಮ್ಮ ಮನೆಗಳಿಂದ ಸೈಕಲ್ ಮೇಲೆ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕರು ಅಲ್ಲಿಂದ ಆದಾಯ ತೆರಿಗೆ ಕಚೇರಿಗೆ ಸೈಕಲ್ ಮೇಲೆಯೇ ತೆರಳಿದರು. ಆದಾಯ ತೆರಿಗೆ ಇಲಾಖೆ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದು ವಿಶೇಷ.

ಸೈಕಲ್ ಏರಿದ ನಾಯಕರು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೈಕಲ್ನಲ್ಲಿ ಶಿವಾನಂದ ಸರ್ಕಲ್ನಲ್ಲಿರುವ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಗೆ 18 ನಿಮಿಷಗಳಲ್ಲಿ ತಲುಪಿದರು. ಸಿಎಂ ಗೃಹ ಕಚೇರಿ ಕೃಷ್ಣಾ ಎದುರಿನಿಂದ ಸಾಗಿದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಕಚೇರಿ ತನಕ ಎಲ್ಲೂ ನಿಲ್ಲಿಸದೇ ಹೋದರು. ಸಿದ್ದರಾಮಯ್ಯ ಅವರ ವೇಗದ ಸೈಕಲ್ ಸವಾರಿಗೆ ಇತರ ಕಾಂಗ್ರೆಸ್ ನಾಯಕರು ಸುಸ್ತಾದಂತೆ ಕಂಡು ಬಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್,
ಚಲುವರಾಯಸ್ವಾಮಿ ಸೇರಿದಂತೆ ಅನೇಕರು ಸಾಥ್ ಕೊಟ್ಟರು. 1974ರ ಬಳಿಕ ಇದೇ ಮೊದಲ ಬಾರಿ ಸೈಕಲ್ ಹೊಡೆದಿದ್ದಾಗಿ ಸಿದ್ದರಾಮಯ್ಯ ಅವರು ಹೇಳಿದರು.
ಇನ್ನು ಸದಾಶಿವನಗರ ಮನೆಯಿಂದ ಸೈಕಲ್ ಮೇಲೆ ಕ್ಷೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು. ಕೆಪಿಸಿಸಿ ಕಚೇರಿಯಿಂದ ಎಲ್ಲರೂ ಜೊತೆಯಾಗಿ ಆದಾಯ ತೆರಿಗೆ ಕಚೇರಿಗೆ ಸೈಕಲ್ ಮೇಲೆ ತೆರಳಿದ್ದು ವಿಶೇಷ.

ಬೈಕ್ ಶವಯಾತ್ರೆ
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ದ್ವಿಚಕ್ರ ವಾಹನದ ಶವ ಯಾತ್ರೆಯೊಂದಿಗೆ ಆದಾಯ ತೆರಿಗೆ ಕಚೇರಿಗೆ ತೆರಳಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ದ್ವಿಚಕ್ರ ವಾಹನದ ಶವಯಾತ್ರೆಗೆ ಹೆಗಲು ಕೊಟ್ಟರು.
ಒಂದು ಸಾವಿರಕ್ಕೂ ಹೆಚ್ಚು ಜನರು ಏಕಾಏಕಿ ಸೈಕಲ್ ಏರಿ ರಸ್ತೆಗೆ ಇಳಿದಿದ್ದರಿಂದ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೊತೆಗೆ ಜನರಿಗೆ ಅನಗತ್ಯ ಕಿರಿಯಾಯಿತು. ಕಾಂಗ್ರೆಸ್ ನಾಯಕರ ಐಕಲ್ ಸವಾರಿ, ಪ್ರತಿಭಟನೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಇರಲೇ ಇಲ್ಲ. ಜೊತೆಗೆ ಮಾಸ್ಕ್, ಗ್ಲೌಸ್ ಹಾಕಿಕೊಳ್ಳುವ ಗೋಜಿಗೆ ಯಾರೂ ಹೋಗಿರಲಿಲ್ಲ. ಪ್ರತಿಭಟನೆಗೆ ಅನುಮತಿಯನ್ನೂ ಪಡೆದಿರಲಿಲ್ಲ.

ರಾಕ್ಷಸಿ ಪ್ರವೃತ್ತಿಯ ಮೋದಿ
ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಿಮ್ಮದು ರಾಕ್ಷಿಸಿ ಪ್ರವೃತ್ತಿ ಗುಣ ಎಂದು ಜರಿದರು. ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೊರೊನಾ ವೈರಸ್ನಿಂದ ಜನರಿಗೆ ಕೆಲಸ ಇಲ್ಲ, ಊಟವೂ ಇಲ್ಲ. ಈ ಸಮಯದಲ್ಲಿ ಬೆಲೆ ಏರಿಕೆ ಮಾಡುವ ಅವಶ್ಯಕತೆ ಇತ್ತಾ? ಮೋದಿಯವರೇ ನಿಮಗೆ ಮಾನವೀಯತೆ ಇದೇಯೇನ್ರಿ? ಜನಸಾಮಾನ್ಯರು ಬದುಕಬಾರದಾ?ಎಂದು ಪ್ರಶ್ನಿಸಿದರು.
ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಹೀಗಾಗಿ ಪೆಟ್ರೋಲ್-ಡಿಸೇಲ್ ಬೆಲೆ 25 ರೂ. ಅಥವಾ 30 ರೂ.ಗಳಿಗೆ ಇಳಿಯಸಬೇಕು. ಇವತ್ತು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ತೈಲ ಬೆಲೆ ಇಳಿಕೆ ಮಾಡದೇ ಹೋದರೆ, ಕೊರೊನಾ ವೈರಸ್ ರೋಗ ಇದ್ದರೂ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ದೇಶ ಹಾಳು ಮಾಡುತ್ತಿದ್ದಾರೆ
ಪ್ರಧಾನಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಇಬ್ಬರಿಂದಲೇ ದೇಶ ಹಾಳಾಗುತ್ತಿದೆ ಎಂದು ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು. ಅವರಿಬ್ಬರಿಗೆ ಅದ್ಯಾರು ಸಲಹೆ ಕೊಡ್ತಾರೋ ಗೊತ್ತಿಲ್ಲ. ಅವರು ಮಾಡುವ ಪ್ರತಿಯೊಂದು ಕೆಲಸದಿಂದ ಸಾಮಾನ್ಯರಿಗೆ ತೊಂದರೆ ಆಗುತ್ತದೆ.
ರಕ್ಷಣಾ ಬಜೆಟ್ ಕೂಡ ಅವರು ಏರಿಸಲೇ ಇಲ್ಲ. ಕೇವಲ ಶೇಕಡಾ 1 ರಿಂದ 2 ರಷ್ಟು ಹೆಚ್ಚಿಗೆ ಮಾಡಿದ್ದಾರೆ. ಬಜೆಟ್ನಲ್ಲಿ ರಕ್ಷಣೆಗೆ ಮಾನ್ಯತೆ ಕೊಟ್ಟಿಲ್ಲ. ಅಲ್ಲಿಯೆ ಹೀಗೆ ಅಂದರೆ ಇನ್ನು ಇವರು ಯಾವುದನ್ನು ಒಳ್ಳೆಯದು ಮಾಡ್ತಾರೆ? ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಅನುಮತಿ ಕೊಟ್ಟಿಲ್ಲ
ನಾವು ಪ್ರತಿಭಟನೆ ಮಾಡುವುದಕ್ಕೆ ಅನುಮತಿ ಸಿಗುತ್ತಿಲ್ಲ. ಅನುಮತಿ ಕೊಡಲು ಆಗುವುದಿಲ್ಲ ಎಂತ ಅಧಿಕಾರಿಗಳು ಹೇಳುತ್ತಾರೆ. ಜನರ ಪರ ಧ್ವನಿ ಎತ್ತೋಕೆ ಯಾರ ಅನುಮತಿಯೂ ಬೇಕಿಲ್ಲ. ಧ್ವನಿ ಎತ್ತೋಕೆ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳು ನಮ್ಮ ವಿರುದ್ಧ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಸೋಂಕು ತಗುಲಿದವರು ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. 15 ದಿನ ಆಸ್ಪತ್ರೆಯಲ್ಲಿದ್ದರೆ ಲಕ್ಷ, ಲಕ್ಷ ಹಣ ಸುರಿಬೇಕು. ಬಡವರು ಎಲ್ಲಿಂದ ದುಡ್ಡು ತರಬೇಕು ಸ್ವಾಮಿ. ಈ ಸರ್ಕಾರಕ್ಕೆ ಬಾಯಿ, ಕಣ್ಣು, ಹೃದಯವೂ ಇಲ್ಲ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

ಹೋರಾಟ ಮುಂದುವರೆಯಲಿದೆ
ಈ ಹೋರಾಟ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ. ಮುಂದಿನ ತಿಂಗಳು 4ರಿಂದ 7ರವರೆಗೆ ಪ್ರತಿ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಈ ಹೋರಾಟ ನಡೆಸಲಾಗುವುದು. ಜನ ಸಾಮಾನ್ಯರ ಸಮಸ್ಯೆಗಳನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ತಲುಪಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿರದರು.












Click it and Unblock the Notifications