ಬಿಜೆಪಿಯಿಂದ ಆಪರೇಷನ್ ಕಮಲ ಶುರು? ಕಾಂಗ್ರೆಸ್ನಲ್ಲಿ ಆತಂಕ
ಬೆಂಗಳೂರು, ಆಗಸ್ಟ್ 09: ಬಿಜೆಪಿಯಿಂದ ಆಪರೇಷನ್ ಕಮಲ ಪ್ರಾರಂಭವಾಗಿದೆ. ಕೂಡಲೇ ಎಚ್ಚುತ್ತುಕೊಳ್ಳದಿದ್ದರೆ ಅಪಾಯವಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಕೆಪಿಸಿಸಿಯನ್ನು ಎಚ್ಚರಿಸಿದ್ದಾರೆ.
ಸಂಪುಟ ವಿಸ್ತರಣೆಯನ್ನು ಬೇಗನೆ ಮಾಡಿ ಇಲ್ಲದಿದ್ದರೆ ಪಕ್ಷಕ್ಕೆ ನಷ್ಟವಾಗುತ್ತದೆ. ಈಗಾಗಲೇ ಅತೃಪ್ತ ಕೆಲವು ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ಕೆಲವು ಕಾಂಗ್ರೆಸ್ ಶಾಸಕರು ಎಚ್ಚಿರಿಸಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ಈಶ್ವರ್ ಖಂಡ್ರೆ ಸಹ ಆತಂಕ ವ್ಯಕ್ತಪಡಿಸಿದ್ದರು, ಬಿಜೆಪಿಯು ಕಾಂಗ್ರೆಸ್ನ ಕೆಲವು ಶಾಸಕರನ್ನು ಸಂಪರ್ಕ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ ಎಂದಿದ್ದಾರೆ.

ಮಾಹಿತಿ ನೀಡಲು ನಿರಾಕರಣೆ
ಈ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ ಅವರು, ಬಿಜೆಪಿಯು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ಆರಂಭಿಸಿದೆ. ಆದರೆ ಬಿಜೆಪಿಯ ಯೋಜನೆ ವಿಫಲವಾಗುವಂತೆ ಮಾಡಲಾಗುವುದು ಎಂದಿದ್ದಾರೆ.

ದಿನೇಶ್ ಗುಂಡೂರಾವ್, ಡಿಕೆಎಸ್ ಸಹ ಆತಂಕ
ಆಪರೇಷನ್ ಕಮಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಡಿಕೆ.ಶಿವಕುಮಾರ್ ಸಹ ಆತಂಕ ವ್ಯಕ್ತಪಡಿಸಿದ್ದು, ಬಿಜೆಪಿಯು ಮತ್ತೆ ಆಪರೇಷನ್ ಕಮಲ್ಲೆ ಇಳಿದಿದ್ದು, ಸರ್ಕಾರವನ್ನು ಬೀಳಿಸುವ ಯತ್ನ ಮಾಡುತ್ತಿದೆ ಎಂದು ಹೇಳಿದ್ದರು.

ದೆಹಲಿಯಲ್ಲಿ ಬಿಎಸ್ವೈ ಭೇಟಿ ಮಾಡಿದ ಶಾಸಕರು?
ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿದ ಕಾರಣ ಆಪರೇಷನ್ ಕಮಲದ ಭೀತಿ ಉಂಟಾಗಿತ್ತು. ಆದರೆ ಈ ಬಗ್ಗೆ ನಿನ್ನೆಯೇ ಹೇಳಿಕೆ ನೀಡಿರುವ ಯಡಿಯೂರಪ್ಪ ತುರ್ತು ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗಿದ್ದೆ ಆಪರೇಷನ್ ಕಮಲಕ್ಕಲ್ಲ ಎಂದು ಹೇಳಿದ್ದಾರೆ.

ಜಾರಕಿಹೊಳೆ ನೇತೃತ್ವದ ಕಾಂಗ್ರೆಸ್ ಶಾಸಕರು
ಸಚಿವ ರಮೇಶ್ ಜಾರಕಿಹೊಳಿ ಜತೆ ಕೆಲವು ಕಾಂಗ್ರೆಸ್ ಶಾಸಕರು ಕೆಲ ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಅದೇ ಸಮಯದಲ್ಲಿ ಯಡಿಯೂರಪ್ಪ ಸಹ ದೆಹಲಿಗೆ ಹೋಗಿದ್ದರು. ಆದರೆ ಸಚಿವ ರಮೇಶ್ ಜಾರಕಿಹೊಳಿ ಸಹ ಈ ವಿಷಯವನ್ನು ತಳ್ಳಿ ಹಾಕಿದ್ದು, ತಾವು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ನಿವಾಸದಲ್ಲಿ ಇರುವುದಾಗಿ ಹೇಳಿದ್ದರು.












Click it and Unblock the Notifications