'ಎನಗಿಂತ ಕಿರಿಯರಿಲ್ಲ': ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲಿ ಜಿಟಿಡಿ ಹೇಳಿಕೆ ಸರಿಯೇ?
ಮೈಸೂರು, ನ 10: ನಗರದ ಹಿನಕಲ್ ಮತ್ತು ಕೇರ್ಗಳ್ಳಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಆಡಿದ ಮಾತಿಗೆ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ. ಎಚ್. ಸಿ. ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
"ಅಂಬೇಡ್ಕರ್ ಏನು, ಅವರ ತತ್ವ ಸಿದ್ದಾಂತ ಏನು, ಸಂವಿಧಾನವೇನು ಇದನ್ನೆಲ್ಲಾ ಅರಿತು ಪರಿವರ್ತನೆಯಾಗಬೇಕಿದೆ. ಆದರೆ, ಇನ್ನೂ ಜನರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ವಿದ್ಯಾವಂತರಾಗುತ್ತಿಲ್ಲ. ನಾನು ಮತ್ತು ಮಹದೇವಪ್ಪನವರು ಬಂದು ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಅವರು ಕಾರಣಾಂತರದಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಸಿದ್ದರಾಮಯ್ಯನವರು ನನಗಿಂತ ಕಿರಿಯರಾದ ಮಹದೇವಪ್ಪ ಅವರನ್ನು ಬೆಳಿಸಿ, ಅವಕಾಶ ನೀಡಿದರು"ಎಂದು ಜಿ.ಟಿ.ದೇವೇಗೌಡ ಸಭೆಯಲ್ಲಿ ಹೇಳಿದ್ದರು.
ಎಚ್ಡಿಕೆ ಲೆಕ್ಕಾಚಾರದಂತೇ ಸಾಗುತ್ತಿರುವ ಜಿ.ಟಿ.ದೇವೇಗೌಡ ರಾಜಕೀಯ ಹೆಜ್ಜೆ!
ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಎಚ್.ಸಿ.ಮಹದೇವಪ್ಪ, "ನಿನ್ನೆ ಮೈಸೂರಿನ ಹಿನಕಲ್ ಮತ್ತು ಕೇರ್ಗಳ್ಳಿಯಲ್ಲಿ ಜೆಡಿಎಸ್ ಪಕ್ಷದ ಜಿ.ಟಿ.ದೇವೇಗೌಡ ಅವರು ನನಗಿಂತ ಕಿರಿಯವರಾದ ಎಚ್.ಸಿ ಮಹಾದೇವಪ್ಪ ಅವರನ್ನು ಬೆಳೆಸಿದರು, ಅವಕಾಶ ನೀಡಿದರು ಎಂದು ಹೇಳಿರುವುದು ವಿಚಿತ್ರವಾಗಿದೆ" ಎಂದು ಮಹದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿಗಳೇ, RSS ನಿಮಗೆ ಯಾವ ಬಹುಮಾನ ಕೊಡುತ್ತೆ?
ಮಂಗಳವಾರ (ನ 9) ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆಗೆ, ಜಿ.ಟಿ. ದೇವೇಗೌಡ ಕಾಣಿಸಿಕೊಂಡಿದ್ದರು. ಜಿಟಿಡಿ ಅವರು ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಸುದ್ದಿಯ ನಡುವೆ ಈ ಕಾರ್ಯಕ್ರಮ ಮಹತ್ವವನ್ನು ಪಡೆದಿತ್ತು. ಡಾ. ಮಹದೇವಪ್ಪ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು, ಆದರೆ ಅವರು ಕಾರಣಾಂತರದಿಂದ ಗೈರಾಗಿದ್ದರು.
ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದ ಜಿಟಿಡಿ
ಮೈಸೂರು ಹಿನಕಲ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೆರವೇರಿಸಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದ ಜಿಟಿಡಿ, "ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸಿದ್ದರಾಮಯ್ಯನವರು ನಮ್ಮ ಮೇಲಿನ ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಿದ್ದರಾಮಯ್ಯನವರಿಗೆ ದಲಿತರ ಮೇಲೆ ಎಷ್ಟು ಕಾಳಜಿಯಿದೆ ಎನ್ನುವುದನ್ನು ನಾನು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ, ಡಾ. ಮಹದೇವಪ್ಪ ಮುಂತಾದವರನ್ನು ಸಿದ್ದರಾಮಯ್ಯ ಬೆಳೆಸಿ, ಅವಕಾಶ ನೀಡಿದರು"ಎಂದು ಜಿ.ಟಿ. ದೇವೇಗೌಡ ಸಭೆಯಲ್ಲಿ ಹೇಳಿದ್ದರು.
ಸಭೆಯಲ್ಲಿ ಜಿ.ಟಿ.ದೇವೇಗೌಡ ಆಡಿದ ಮಾತಿಗೆ ಡಾ. ಮಹದೇವಪ್ಪ ಬೇಸರ
ಸಭೆಯಲ್ಲಿ ಜಿ.ಟಿ.ದೇವೇಗೌಡ ಆಡಿದ ಮಾತಿಗೆ ಡಾ. ಮಹದೇವಪ್ಪ ಬೇಸರವನ್ನು ವ್ಯಕ್ತ ಪಡಿಸುತ್ತಾ, " ನಾಲ್ಕು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಹಲವು ಪಕ್ಷಗಳು ನನಗೆ ಶಾಸಕನಾಗುವ ಮತ್ತು ಸಚಿವನಾಗುವ ಅವಕಾಶವನ್ನು ನೀಡಿವೆ. ಈ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ಜನರ ಹಿತಕ್ಕೆ ಅನುಕೂಲವಾಗುವಂತೆಯೇ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ.
ಜನಪರ ರಾಜಕಾರಣಕ್ಕೆ ಬುನಾದಿ ಹಾಕಿದ್ದು ಈ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು
"ನನ್ನ ಸಹದ್ಯೋಗಿಯೇ ಆಗಿದ್ದ ಜಿ.ಟಿ.ದೇವೇಗೌಡ ಅವರಿಗೂ ಈ ಸಂಗತಿ ಚೆನ್ನಾಗಿ ತಿಳಿದಿದೆ. ನನಗೆ ತಿಳಿದ ಮಟ್ಟಿಗೆ ನನ್ನೊಳಗೆ ಜನಪರವಾದ ತಿಳುವಳಿಕೆಯನ್ನು ಮೂಡಿಸಿ, ಸರ್ಕಾರಗಳ ಮಟ್ಟದಲ್ಲಿ ಆಡಳಿತ ನಡೆಸಲು ಬೇಕಾದಂತಹ ಪೂರಕ ಜ್ಞಾನವನ್ನು ಪಡೆಯಲು ಮತ್ತು ಜನಪರ ರಾಜಕಾರಣಕ್ಕೆ ಬುನಾದಿ ಹಾಕಿದ್ದು ಈ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು. ನನ್ನೊಳಗೆ ಜನಪರವಾಗಿ ಚಿಂತಿಸುವ ಚೈತನ್ಯ ಉಳಿಯುವುದಕ್ಕೆ ದಲಿತ ಸಂಘಟನೆಗಳೇ ಕಾರಣವಾಗಿದ್ದು ಇದಕ್ಕಾಗಿ ನಾನವರಿಗೆ ಸದಾ ಕೃತಜ್ಞನಾಗಿ ಇರುತ್ತೇನೆ" ಎಂದು ಮಹದೇವಪ್ಪ ಹೇಳಿದ್ದಾರೆ.
Recommended Video
ಮಹದೇವಪ್ಪ ಅವರನ್ನು ಬೆಳೆಸುವಲ್ಲಿ ದಲಿತ ಸಂಘಟನೆಗಳ ಪಾತ್ರ ದೊಡ್ಡದಿದೆ
"ಇದನ್ನು ಹೇಳದೆಯೂ ಇರಬಹುದಾಗಿತ್ತು. ಆದರೆ ಜಿ.ಟಿ.ದೇವೇಗೌಡರ ಮಾತಿನೊಳಗೆ ನಿಜವಾಗಿಯೂ ನನ್ನನ್ನು ನಾಯಕನನ್ನಾಗಿಸಲು ಶ್ರಮಿಸಿದ ದಲಿತ ಸಂಘಟನೆಗಳ ಪ್ರಸ್ತಾಪವೇ ಇಲ್ಲದ್ದನ್ನು ಕಂಡು ಬೇಸರವಾಗಿ ಈ ಮಾತುಗಳನ್ನು ಹೇಳಬೇಕಾಯಿತು. ಜಿಟಿಡಿಯವರೇ ಮುಂದಿನ ಬಾರಿ ಹೀಗೆ ಮಾತನಾಡುವಾಗ, ಮಹದೇವಪ್ಪ ಅವರನ್ನು ಬೆಳೆಸುವಲ್ಲಿ ದಲಿತ ಸಂಘಟನೆಗಳ ಪಾತ್ರ ದೊಡ್ಡದಿದೆ ಎಂದರೆ ನಿಮ್ಮ ಬಗ್ಗೆ ನಾನು ನಿಜಕ್ಕೂ ಸಂತೋಷ ಪಡುತ್ತೇನೆ"ಎಂದು ಮಹದೇವಪ್ಪನವರು ಜಿಟಿಡಿಗೆ ತಿರುಗೇಟು ನೀಡಿದ್ದಾರೆ.