"ಕಾಂಗ್ರೆಸ್ನ ಕೆಜಿಎಫ್-2 ಡಿಸೆಂಬರ್ 20ರಂದು ರಿಲೀಸ್ ಆಗುತ್ತೆ"
ರಾಜ್ಯದ ಪವರ್ ಹೌಸ್ ಈಗ ಬೆಳಗಾವಿಯಲ್ಲಿದೆ. ಚಳಿಗಾಲದ ಅಧಿವೇಶನದ ನಡುವೆ ಕಾಂಗ್ರೆಸ್ನ ಕುರ್ಚಿ ಕಿತ್ತಾಟ ಮತ್ತೆ ಮುನ್ನೆಲೆಗೆ ಬಂದಿದೆ. ತಡರಾತ್ರಿವರೆಗೆ ಡಿನ್ನರ್ ಮೀಟಿಂಗ್ ನಡೆಯುತ್ತಿದ್ದು, ಅಧಿವೇಶನ ಮುಗಿದ ಕೂಡಲೇ ಸಿಎಂ ಬದಲಾಗ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದೆ. 'ಇಲ್ಲಿವರೆಗೆ ರಾಜ್ಯದ ಜನ ಕಾಂಗ್ರೆಸ್ನ ಅರ್ಧ ಸಿನಿಮಾ ನೋಡಿದ್ದಾರೆ, ಡಿಸೆಂಬರ್ 20ರಂದು ಕಾಂಗ್ರೆಸ್ ನಟನೆಯ ಕೆಜಿಎಫ್-2 ತೆರೆ ಕಾಣಲಿದೆ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು ಅಧಿವೇಶನಕ್ಕೂ ಮುನ್ನ ಎರಡು ಬಾರಿ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿ ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಸಂದೇಶ ರವಾನಿಸಿದ್ದರು. ಬಳಿಕ ಅಧಿವೇಶನದ ಕಾರಣಕ್ಕಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಬೀಡುಬಿಟ್ಟಿದೆ. ಈಗ ಮತ್ತೆ ಸಿಎಂ ಬದಲಾವಣೆ ಚರ್ಚೆ ಕಾವು ಪಡೆದುಕೊಂಡಿದೆ.

'ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ಬಾಯೇ ಬಿಡುತ್ತಿಲ್ಲ. ಆದರೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾತ್ರ ನಮ್ಮ ಅಪ್ಪ ಐದು ವರ್ಷ ಸಿಎಂ ಎಂದು ಹೇಳುತ್ತಲೇ ಇದ್ದಾರೆ. ಇದರ ಬಗ್ಗೆ ರಾಹುಲ್ ಗಾಂಧಿಯಾಗಲಿ, ಖರ್ಗೆ ಅವರಾಗಲಿ, ಡಿಕೆ.ಶಿವಕುಮಾರ್ ಆಗಲಿ ಬಾಯಿಬಿಟ್ಟಿದ್ದಾರಾ?' ಎಂದು ಅಶೋಕ್ ಕೇಳಿದ್ದಾರೆ.
'ಒಪ್ಪಂದ ಆಗಿರೋದು ನಿಜ'
'ನನ್ನ ಪ್ರಕಾರ ಎರಡೂವರೆ ವರ್ಷಕ್ಕೆ ಒಪ್ಪಂದ ಆಗಿರುವುದು ನಿಜ ಅನಿಸುತ್ತೆ. ಇಷ್ಟೊಂದು ಕಾಂಗ್ರೆಸ್ ಶಾಸಕರು ಒಡಕಿನ ಮಾತುಗಳನ್ನಾಡುತ್ತಿದ್ದಾರೆ. ಡಿನ್ನರ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಒಪ್ಪಂದ ಆಗಿರುವುದು ನಿಜ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಈಗ ಕಾಂಗ್ರೆಸ್ನಲ್ಲಿ ಕೊಡೇ-ಬಿಡೇ ಎನ್ನುವ ಸ್ಥಿತಿ ಇದೆ. ಇದು ಹಳೆ ಕಾಂಗ್ರೆಸ್ ಹಾಗೂ ಹೊಸ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಸಂಘರ್ಷ. ಈ ಎರಡರಲ್ಲಿ ಯಾವ ಕಾಂಗ್ರೆಸ್ ಗೆಲ್ಲುತ್ತೋ ಗೊತ್ತಿಲ್ಲ.'
'ಇಬ್ಬರೂ ಒಟ್ಟಾಗಿ ಸರ್ಕಾರ ನಡೆಸಿ, ಇಲ್ಲ ಸರ್ಕಾರ ಬಿಟ್ಟು ತೊಲಗಿ. ಈಗ ಕಾಂಗ್ರೆಸ್ನ ಅರ್ಧ ಪಿಚ್ಚರ್ ನೋಡಿದ್ದೀರಿ, ಡಿಸೆಂಬರ್ 20ರಿಂದ ಅದು ಮತ್ತೆ ಶುರುವಾಗುತ್ತೆ. ಕೆಜಿಎಫ್-1 ಈಗ ನೋಡಿದ್ದೀರಿ, ಮುಂದೆ ಪಾರ್ಟ್-2 ಡಿಸೆಂಬರ್ 20ರಿಂದ ಎಲ್ಲ ಕಡೆ ರಿಲೀಸ್ ಆಗುತ್ತೆ. ರಾಜ್ಯ ಜನರೆಲ್ಲ ಕಾಂಗ್ರೆಸ್ನ ಕೆಜಿಎಫ್-2 ದಯವಿಟ್ಟು ನೋಡಿ' ಎಂದು ವ್ಯಂಗ್ಯವಾಡಿದ್ದಾರೆ.
'ಕಾಂಗ್ರೆಸ್ನಲ್ಲಿ ಏನೇ ಇರಲಿ, ಅದು ನಮಗೆ ಬೇಕಿಲ್ಲ. ಇಲ್ಲಿ ರಾಜ್ಯದ ಅಭಿವೃದ್ಧಿಯಾಗಬೇಕು. ಅಧಿವೇಶನವನ್ನು ಸರಿಯಾಗಿ ನಡೆಸಲಿ. ನೀವು ರಾತ್ರಿ ಎರಡು ಗಂಟೆಯವರೆಗೆ ಡಿನ್ನರ್ ಪಾರ್ಟಿ ಮಾಡಿದರೆ, ಬೆಳಿಗ್ಗೆ ಸದನದಲ್ಲಿ ಬಂದು ಏನು ಉತ್ತರ ಕೊಡ್ತಾರೆ? ಸದನದಲ್ಲಿ ಯಾರೂ ಇರೋದಿಲ್ಲ, ಸುಮ್ಮನೆ ಕಾಟಾಚಾರಕ್ಕೆ ಬರ್ತಾರೆ' ಎಂದು ದೂರಿದ್ದಾರೆ.
'ರಾಜ್ಯದಲ್ಲಿ ಅಧಿಕಾರಿಗಳು ಸರಿಯಾಗಿ ಯಾವುದೇ ವಿಷಯಗಳಿಗೆ ಸ್ಪಂದಿಸುತ್ತಿಲ್ಲ. ಬಡವರ ಫೈಲುಗಳು ಸರ್ಕಾರಕ್ಕೆ ತಲುಪಲು ವರ್ಷಗಟ್ಟಲೆ ಸಮಯ ಹಿಡಿಯುತ್ತಿದೆ. ಇದರಿಂದಾಗಿ ರಾಜ್ಯದ ಜನರ ಪರಿಸ್ಥಿತಿ ಅತಂತ್ರವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಾತು ಕೂಡ ಕೇಳುತ್ತಿಲ್ಲ' ಎಂದು ಅಶೋಕ್ ಗುಡುಗಿದ್ದಾರೆ.












Click it and Unblock the Notifications