20+ ಏನಿದು ಕರ್ನಾಟಕ ಕಾಂಗ್ರೆಸ್ ಫಲಿತಾಂಶ ಲೆಕ್ಕಾಚಾರ?
ಬೆಂಗಳೂರು, ಮೇ 09: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗುತ್ತಿದೆ. ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಚುನಾವಣೆ ಫಲಿತಾಂಶದ ಲೆಕ್ಕಾಚಾರದಲ್ಲಿ ತೊಡಗಿದೆ. ಆದರೆ ಲೋಕಸಭೆ ಜೊತೆಗೆ ಮತ್ತೊಂದು ಚುನಾವಣೆ ಮೇಲೆಯೂ ಕಾಂಗ್ರೆಸ್ ಕಣ್ಣಿಟ್ಟಿದ್ದು ಇದು 20+ ಲೆಕ್ಕಾಚಾರವಾಗಿದೆ.
ಚುನಾವಣಾ ಆಯೋಗ ಕರ್ನಾಟಕ ವಿಧಾನ ಪರಿಷತ್ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಘೋಷಿಸಿದೆ. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯೂ ಕಾಂಗ್ರೆಸ್ಗೆ ಪ್ರಮುಖವಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡು ಮೈತ್ರಿ ಮುಂದುವರೆಸಲಿವೆ. ಆದರೆ ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟು ಮಾಡಿ ಸಭಾಪತಿ ಸ್ಥಾನವನ್ನು ಪಡೆಯಬೇಕು ಎಂದು ತಂತ್ರ ರೂಪಿಸುತ್ತಿದೆ.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಲ 75. ಸದ್ಯ ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್ನ 7 ಸದಸ್ಯರು ಇದ್ದಾರೆ. ಉಳಿದ ಸ್ಥಾನಗಳು ಖಾಲಿ ಇವೆ. ಬಿಜೆಪಿ-ಜೆಡಿಎಸ್ ಸೇರಿದರೆ ಸಾಮಾನ್ಯ ಬಹುಮತ 39 ಸದಸ್ಯರು ಇದ್ದಾರೆ. ಇದರಿಂದಾಗಿ ಕಾಂಗ್ರೆಸ್ಗೆ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ತೊಂದರೆ ಆಗುತ್ತಿದೆ. ಅಲ್ಲದೇ ಸಭಾಪತಿ ಸ್ಥಾನ ಬಿಜೆಪಿ ಕೈಯಲ್ಲಿ ಇದೆ.
ಸಭಾಪತಿ ಖುರ್ಚಿ: ಕಾಂಗ್ರೆಸ್ ನಾಯಕರೊಬ್ಬರು ಪರಿಷತ್ ಚುನಾವಣೆ ಲೆಕ್ಕಾಚಾರದ ಕುರಿತು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 20+ ಸ್ಥಾನಗಳನ್ನು ಗೆಲ್ಲುವ ಜೊತೆಗೆ ಪರಿಷತ್ನಲ್ಲಿಯೂ ಹೆಚ್ಚು ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ.
ಪರಿಷತ್ನಲ್ಲಿ ನಮ್ಮ ಸದಸ್ಯ ಬಲ 8 ರಿಂದ 9 ಹೆಚ್ಚಾದರೆ ನಾವು ಸುಲಭವಾಗಿ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಬಹುದು. ಅಲ್ಲದೇ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸಬಹುದು. ಅದಕ್ಕಾಗಿಯೇ ಪರಿಷತ್ ಚುನಾವಣೆ ಮೇಲೆಯೂ ಹೆಚ್ಚು ಗಮನ ನೀಡಲಾಗಿದೆ ಎಂದರು.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದೆ. ಆದ್ದರಿಂದ ಆಡಳಿತ ಪಕ್ಷ ಕಾಂಗ್ರೆಸ್ಗೆ ವಿಧಾನ ಪರಿಷತ್ ಚುನಾವಣೆ ಮೇಲೆ ಗಮನಹರಿಸಲು ಸಹ ಅನುಕೂಲವಾಗಿದೆ. ಪಕ್ಷ ಈಗಾಗಲೇ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ವಿರೋಧ ಪಕ್ಷವಾಗಿರುವ ಬಿಜೆಪಿ ಇನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿದೆ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮೇ 16 ಕೊನೆಯ ದಿನವಾಗಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳುವ ಪ್ರಕಾರ, "ಪ್ರತಿ ಕ್ಷೇತ್ರಕ್ಕೆ 2 ರಿಂದ 3 ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿದೆ. ದೆಹಲಿಯಲ್ಲಿರುವ ವರಿಷ್ಠರು ಎರಡು ದಿನದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ"
ಜೆಡಿಎಸ್ ನಾಯಕರ ಪ್ರಕಾರ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 2 ಸೀಟುಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಉಳಿದ ಕಡೆ ಬಿಜೆಪಿಗೆ ಪಕ್ಷ ಬೆಂಬಲ ನೀಡಲಿದೆ. ಈ ಮೂಲಕ ಮೈತ್ರಿ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಮೂಲದವರಾದ ಕಾರಣ ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ಗೆ ಮುಖ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನಗಳಿಸಿದ್ದ ಕಾಂಗ್ರೆಸ್ ಈ ಬಾರಿ ಡಬಲ್ ಡಿಜಿಟ್ ಮುಟ್ಟುವ ನಿರೀಕ್ಷೆಯಲ್ಲಿದೆ. ಇದರ ಜೊತೆಗೆ ಜೂನ್ 6ರಂದು ಪ್ರಕಟವಾಗಲಿರುವ ಪರಿಷತ್ ಚುನಾವಣೆ ಫಲಿತಾಂಶವೂ ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ಅತಿ ಮುಖ್ಯವಾಗಿದೆ.












Click it and Unblock the Notifications