"ಕಾಂಗ್ರೆಸ್ ಹೊಲಸಾಗಿದೆ" ಎಂದ ರಾಜ್ಯ ಕಾಂಗ್ರೆಸ್ ಪ್ರಭಾವಿ ಶಾಸಕ, ಸರ್ಕಾರಕ್ಕೆ ಮುಜುಗರ!
ರಾಜ್ಯ ಕಾಂಗ್ರೆಸ್ ಸರ್ಕಾರದ ಟೈಮ್ ಸರಿ ಇರುವಂತೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಒಂದಿಲ್ಲ ಒಂದು ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಸಿಕ್ಕಿ ಹಾಕಿಕೊಳ್ಳುತ್ತಲ್ಲೇ ಇದೆ. ಇನ್ನೂ ಕೆಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರವೇ ಎಳೆದುಕೊಳ್ಳುತ್ತಿದೆ. ಇದೀಗ ಇನ್ನೇನು ಉಪ ಚುನಾವಣೆ ಬಂದೇ ಬಿಡ್ತು ಎನ್ನುವಾಗಲೇ ಕಾಂಗ್ರೆಸ್ನ ಪ್ರಭಾವಿ ಶಾಸಕರೇ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ಸಚಿವರಿಗೆ ಇನ್ನಿಲ್ಲದಂತೆ ಮುಜುಗರವನ್ನುಂಟು ಮಾಡಿದೆ.
ರಾಜ್ಯದಲ್ಲಿ ಕೆಲವು ಸಚಿವರು ನಮ್ಮ ಮಾತೇ ಕೇಳ್ತಿಲ್ಲ. ನಮಗೆ ಗೌರವ ಕೊಡ್ತಿಲ್ಲ. ಅಲ್ಲದೇ ಅನುದಾನ ಹಾಗೂ ನಮ್ಮ ಕೆಲಸ ಮಾಡಿಕೊಡ್ತಿಲ್ಲ ಅಂತ ಈಗಾಗಲ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಬ್ಬ ಪ್ರಭಾವಿ ಕಾಂಗ್ರೆಸ್ ಶಾಸಕರೇ ತಿರುಗಿ ಬಿದ್ದಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ರೀತಿ ಕಾಂಗ್ರೆಸ್ನ ಒಬ್ಬೊಬ್ಬರೇ ಶಾಸಕರು ಆರೋಪ ಮಾಡುತ್ತಿರುವುದನ್ನು ನೋಡಿದರೆ, ಕಾಂಗ್ರೆಸ್ನಲ್ಲಿ ಎಲ್ಲವೂ ಸ್ಪಷ್ಟವಾಗಿಲ್ಲ ಎನ್ನುವುದು ತೋರಿಸುತ್ತದೆ. ಅದರಲ್ಲೂ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ತೀರ ಸಮೀಪಿಸಿದೆ. ಈಗ ಕಾಂಗ್ರೆಸ್ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿ ಹಾಗೂ ಜಿಲ್ಲೆಯಲ್ಲೇ ನಾನೇ ಹಿರಿಯ. ನಾನು ಈ ಭಾಗದ ಹಿರಿಯ ಶಾಸಕನೂ ಹೌದು ಆದರೆ, ನಂಗೇ ಕ್ಯಾರೇ ಅಂತಿಲ್ಲ. ಜಿಲ್ಲೆಯ ವಿವಿಧ ಅಭಿವೃದ್ಧಿ ವಿಚಾರ ಹಾಗೂ ಪಕ್ಷದ ವಿಚಾರಗಳಲ್ಲಿ ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಹಾಗೂ ಕೆಯುಐಡಿಎಫ್ ಮಂಡಳಿ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿರುವ ಹಾಗೂ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ನನ್ನ ಮಾತನ್ನು ಪರಿಗಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನನ್ನ ಮಾತಿಗೆ ಬೆಲೆನೇ ಕೊಡ್ತಿಲ್ಲ. ಕೋಲಾರದಲ್ಲಿ ಒಂದಷ್ಟು ಗುಂಪುಗಳಿವೆ. ಹೀಗಾಗಿ ಕಾಂಗ್ರೆಸ್ ಕೋಲಾರದಲ್ಲಿ ಹೊಲಸಾಗಿದೆ ಎಂದು ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಯಾರ್ಯಾರೋ ನಾಯಕರಾಗಿದ್ದಾರೆ. ಈಚೆಗೆ ಇಲ್ಲಿ ನಡೆದ ಸಭೆಯಲ್ಲಿ ಗಲಾಟೆ ಆಗಿತ್ತು. ಇದರಿಂದ ನಾವೆಲ್ಲ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
ನಾನು ಮಂತ್ರಿಯಾಗ್ತೀನಿ ನೋಡ್ತಿರಿ: ನಾನು ಸಹ ಮುಂದೆ ಸಚಿವನಾಗ್ತಿನಿ ಅಂತ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಈಗ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಎರಡೂವರೆ ವರ್ಷವಾದ ಮೇಲೆ ನನಗೂ ಸಚಿವ ಸ್ಥಾನ ಕೊಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಒಬ್ಬೊಬ್ಬ ಶಾಸಕರು ಈ ರೀತಿ ರಾಜ್ಯ ಸರ್ಕಾರ ಹಾಗೂ ಪಕ್ಷದ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿರುವುದು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡ್ತಿದೆ. ಈಗಾಗಲೇ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿದ್ದು, ಇದೀಗ ರಾಜ್ಯದ ಶಾಸಕರೇ ಈ ರೀತಿ ಆರೋಪ ಮಾಡಿರುವುದು. ವಿರೋಧ ಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.












Click it and Unblock the Notifications