ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯಲ್ಲಿ ಯುಟರ್ನ್: ಮತ್ತೆ ಸಿದ್ದು ಮೇಲುಗೈ?
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ಹೆಸರು ಇನ್ನೇನು ಘೋಷಣೆಯಾಗಬೇಕು ಎನ್ನುವಷ್ಟರಲ್ಲಿ, ಆಯ್ಕೆ ಪ್ರಕ್ರಿಯೆಯನ್ನು ಹೈಕಮಾಂಡ್ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮೇಲ್ನೋಟಕ್ಕೆ ಚಳಿಗಾಲದ ಅಧಿವೇಶನ ಎನ್ನುವ ನೆಪಯಿಟ್ಟುಕೊಂಡು, ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಲು ಹೈಕಮಾಂಡ್ ತಡಮಾಡುತ್ತಿದ್ದರೂ, ಅದಕ್ಕೆ ಮೂಲ ಕಾರಣ ಬೇರೆದೇ ಎನ್ನುವ ಮಾತುಗಳು ಕೇಳಿ ಬರುತ್ತಿದೆ. (ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡಿನ ಭರ್ಜರಿ ಗಿಫ್ಟ್)
ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ತುದಿಗಾಲಿನಲ್ಲಿ ನಿಂತಿದ್ದರೂ, ಸಿಎಂ ಸಿದ್ದರಾಮಯ್ಯ ಅವರ ಆಯ್ಕೆ ಬೇರೆಯದ್ದೇ ಆಗಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಇಲ್ಲೂ ಸಿದ್ದು ಮೇಲುಗೈ ಸಾಧಿಸುವ ಹಂತಕ್ಕೆ ಬಂದು ನಿಂತಿದ್ದಾರೆ.
ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ಹೆಚ್ಚಾದ ನಂತರ ಮೇಲ್ಮನೆ ಸ್ಪೀಕರ್ ಸ್ಥಾನಕ್ಕೆ ಎಸ್ ಆರ್ ಪಾಟೀಲ್ ಅವರ ಹೆಸರೇ ಹೆಚ್ಚುಕಮ್ಮಿ ಅಂತಿಮವಾಗಿತ್ತು. ಆದರೆ ಸಿಎಂ ಇದಕ್ಕೆ ತಡೆ ಹಿಡಿದು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. (ಯುಟರ್ನ್ ಚಿತ್ರ ವಿಮರ್ಶೆ)
ಪಕ್ಷದಲ್ಲಿನ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಹೆಚ್ಚುಕಮ್ಮಿ ವಿಫಲವಾಗುತ್ತಿರುವ ಹೈಕಮಾಂಡಿಗೆ, ಕರ್ನಾಟಕದಲ್ಲಿ ತಾನು ಬಯಸಿದ್ದೇ ನಡೆಯಬೇಕು ಎನ್ನುವಷ್ಟರ ಮಟ್ಟಿಗೆ ಸಿದ್ದರಾಮಯ್ಯ ಹಿಡಿತ ಸಾಧಿಸುತ್ತಿರುವುದು ತಲೆನೋವಾಗಿ ಪರಿಣಮಿಸುತ್ತಿದೆ. (ಫಾರ್ಚುನರ್ ಕಾರಿಗೆ ಡಿಕೆಶಿ ಬೆಂಬಲಿಗರು ಬೆಂಕಿ ಇಟ್ಟರೆ)
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಅವರ ಆಯ್ಕೆಯನ್ನು ಸಿದ್ದರಾಮಯ್ಯ ನಯವಾಗಿ ವಿರೋಧಿಸಿ, ತಮ್ಮ ಆಯ್ಕೆ ಇನ್ನೊಬ್ಬರು ಎನ್ನುವ ಸೂಕ್ಷ್ಮ ಸಂದೇಶವನ್ನು ದೆಹಲಿಗೆ ತಲುಪಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಿದ್ದು ಯಾರನ್ನು ಬಯಸುತ್ತಿದ್ದಾರೆ, ಡಿಕೆಶಿ ವರ್ಕಿಂಗ್ ಸ್ಟೈಲ್ ಸಿದ್ದುಗೆ ಭಯ ತಂದಿದೆಯೇ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಒಕ್ಕಲಿಗ ಸಮುದಾಯ
ಇತ್ತೀಚಿನ ರಾಜಕಾರಣದಲ್ಲಿ ದೇವೇಗೌಡ ಕುಟುಂಬದ ವಿರುದ್ದ ಡಿ ಕೆ ಶಿವಕುಮಾರ್ ಮೇಲುಗೈ ಸಾಧಿಸುತ್ತಿದ್ದರೂ, ಒಕ್ಕಲಿಗ ಸಮುದಾಯದವರು ಇನ್ನೂ ತಮ್ಮ ನಾಯಕ ದೇವೇಗೌಡರೇ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಹಾಗಾಗಿ, ಒಕ್ಕಲಿಗ ಸಮುದಾಯದವರನ್ನು ಆಯ್ಕೆ ಮಾಡಿದರೆ ಪಕ್ಷಕ್ಕೆ ಲಾಭವಿಲ್ಲ ಎನ್ನುವ ಕಾರಣವನ್ನು ಸಿದ್ದು ಮುಂದಿಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
ಎಸ್ ಆರ್ ಪಾಟೀಲ್
ಈ ಹಿಂದೆಯೇ ಎಸ್ ಆರ್ ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೇಮಿಸಲು ಹೈಕಮಾಂಡ್ ಸಜ್ಜಾಗಿತ್ತು. ಆದರೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿತ್ತು. ಈಗ ಸಿದ್ದರಾಮಯ್ಯ ಅವರು ಎಸ್ ಆರ್ ಪಾಟೀಲರೇ ಅಧ್ಯಕ್ಷರಾಗ ಬೇಕೆಂದು ಹೈಕಮಾಂಡ್ ಬಳಿ ಡಿಮಾಂಡ್ ಮಾಡಿದ್ದಾರೆ ಎನ್ನುವ ಸುದ್ದಿಯಿದೆ.
ಪಾಟೀಲ್ ಆಯ್ಕೆ
ಹಿರಿಯರಾದ ಮತ್ತು ಮೃದು ಸ್ವಭಾವದ ಎಸ್ ಆರ್ ಪಾಟೀಲ್, ಕೆಪಿಸಿಸಿ ಅಧ್ಯಕ್ಷರಾದರೆ ಪೂರ್ಣ ಪ್ರಮಾಣದಲ್ಲಿ ಸರಕಾರದ ವಿಚಾರದಲ್ಲೂ ಮತ್ತು ಪಕ್ಷದ ಆಗುಹೋಗಿನ ವಿಚಾರದಲ್ಲಿ ಹಿಡಿತ ಸಾಧಿಸಬಹುದು ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರ ಇದ್ದರೂ ಇರಬಹುದು.
ಡಿಕೆಶಿ ಯಾಕೆ ಬೇಡ
ನುಗ್ಗುವ ಪ್ರವೃತ್ತಿಯ, ಡೋಂಟ್ ಕೇರ್ ಮನೋಭಾವಾದ ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರೆ ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆಯಿರುವುದಿಲ್ಲ. ಡಿಕೆಶಿ ಸಂಪೂರ್ಣವಾಗಿ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ತಮ್ಮ ಕಂಟ್ರೋಲಿಗೆ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಸಿದ್ದು ವಿರೋಧಕ್ಕೆ ಕಾರಣವಿರಬಹುದು.
ಮುಂದಿನ ಚುನಾವಣೆ
ಅಸೆಂಬ್ಲಿ ಚುನಾವಣೆಗೆ ಪಕ್ಷದ ಪರವಾಗಿ ಬಿಫಾರಂ ನೀಡುವ ಅಧಿಕಾರವಿರುವುದು ಕೆಪಿಸಿಸಿ ಅಧ್ಯಕ್ಷರಿಗೆ. ಎಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಡಿ ಕೆ ಶಿವಕುಮಾರ್ ಟಿಕೆಟ್ ನೀಡಲು ನಿರಾಕರಿಸುತ್ತಾರೋ ಎನ್ನುವ ಭಯ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರಲ್ಲಿದೆ ಎನ್ನುವ ಮಾಹಿತಿ ಆಫ್ ದಿ ರೆಕಾರ್ಡ್.
ಡಿಕೆಶಿ ಜೊತೆ ಸಿದ್ದು ಉತ್ತಮ ಸಂಬಂಧ
ಸಿದ್ದರಾಮಯ್ಯ ಸಿಎಂ ಆದಾಗ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಹೈಕಮಾಂಡ್ ಲೆವೆಲಿನಲ್ಲೇ ಡೀಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಡಿಕೆಶಿ ನಂತರ ಹಲವಾರು ಬಾರಿ ಸಿದ್ದು ಬೆಂಬಲಕ್ಕೆ ನಿಂತಿದ್ದರು. ಮೊನ್ನೆ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯೇ ಅದಕ್ಕೆ ಸಾಕ್ಷಿ. ಆದರೂ, ಸಿದ್ದು ಅಧ್ಯಕ್ಷ ಹುದ್ದೆಗೆ ಡಿಕೆಶಿ 'ನೋ' ಎನ್ನುವಂತಿದ್ದರೆ ಅದಕ್ಕೇ ಅನ್ನೋದು ನೋಡಿ ರಾಜಕೀಯ ಎಂದು!