ಸಿಕ್ರೆಟ್ ಬ್ಯಾಲೆಟ್ ಆಧಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ: ಸತೀಶ್ ಜಾರಕಿಹೊಳಿ
ಬೆಂಗಳೂರು, ಮೇ 17: ಬಹುನಿರೀಕ್ಷಿತ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಿದೆ. ಶಾಸಕರ ಗೌಪ್ತ ಮತದಾನ (ಸಿಕ್ರೆಟ್ ಬ್ಯಾಲೆಟ್) ಆಧಾರದಲ್ಲಿ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದೆ ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾಹಿತಿ ನೀಡಿದ್ದಾರೆ
ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ರೇಸ್ನಲ್ಲಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಪೈಪೋಟಿ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಘೋಷಣೆ ಮಾಡುವುದು ಒಂದೇ ಬಾಕಿ ಇದೆ. ಈ ಕುರಿತು ಸುದ್ದಿಗಾರರಿಗೆ ಸತೀಶ್ ಜಾರಿಕಿಹೊಳಿಯವರು ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ಸಿಎಂ ಆಯ್ಕೆ ವಿಚಾರವಾಗಿ ಸಿಕ್ರೆಟ್ ಬ್ಯಾಲೆಟ್ ನಡೆದಿದೆ. ಅದರಲ್ಲಿ ಬಹುತೇಕರು ಸಿದ್ದರಾಮಯ್ಯನವರ ಪರ ಮತ ಚಲಾಯಿಸಿದ್ದಾರೆ. ಅದರ ಆಧಾರದಲ್ಲಿ ಸಿದ್ದರಾಮಯ್ಯನವರನ್ನು ಹೈಕಮಾಂಡ್ ವರಿಷ್ಠರು ಆಯ್ಕೆ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯನವರಿಂದ ಉತ್ತಮ ಆಡಳಿತದ ವಿಶ್ವಾಸ
ಸಿದ್ದರಾಮಯ್ಯನವರಿಗೆ ಆಡಳಿತದ ಅನುಭವ ಇದೆ. ಕಳೆದ ಬಾರಿ ಐದು ವರ್ಷ ಪೂರ್ಣ ಅವದಿಗೆ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಈ ಬಾರಿ ಸಹ ಅವರಿಂದ ಒಳ್ಳೆಯ ಆಡಳಿತ ನಿರೀಕ್ಷೆ ಇದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಜನರಿಗೆ ವಿಶ್ವಾಸ ವಿದೆ.

ಕರ್ನಾಟಕ ಚುನಾವಣೆ 2023ರ ಫಲಿತಾಂಶ ಶನಿವಾರ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಗೊಂದಲ ಆರಂಭವಾಯಿತು. ಸೋಮವಾರವೇ ನೂತನ ಸಿಎಂ ಪ್ರಮಾಣವಚನ ಎಂದು ಹೇಳಲಾಗಿತ್ತು. ಆದರೆ ಅಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಾರೆಂಬುದು ನೀರ್ಧಾರವಾಗಲಿಲ್ಲ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಈ ಇಬ್ಬರಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬುದು ಸಿಎಲ್ಪಿ ಸಭೆಯಲ್ಲಿ ಒಮ್ಮತ ಮೂಡದ ಕಾರಣ, ಈ ವಿಚಾರ ದೆಹಲಿ ಹೈಕಮಾಂಡ್ ಅಂಗಳಕ್ಕೆ ಬಿತ್ತು. ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ನಿರಂತರ ಸಭೆಗಳು ಉಭಯ ನಾಯಕರಿಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸಿದ್ದರಾಮಯ್ಯ ನಿವಾಸಕ್ಕೆ, ರಾಮನಗರದಲ್ಲಿ ಬಿಗಿ ಭದ್ರತೆ
ಇತ್ತ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಸಹ ಚರ್ಚಿಸಿದ್ದಾರೆ. ಅದರ ಆಧಾರದಡಿ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂಬುದು ಬಹುತೇಕ ಪಕ್ಕಾ ಆಗಿದೆ. ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.
ಈಗಾಗಲೇ ರಾಮನಗರದಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಸೂಕ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇತ್ತ ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣ ಮತ್ತು ಸಿದ್ದರಾಮನಹುಂಡಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಇದರೊಂದಿಗೆ ಸಿದ್ದರಾಮಯ್ಯನವರ ಬೆಂಗಳೂರು ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.












Click it and Unblock the Notifications