ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಬೀಳಬಹುದು: ಯತ್ನಾಳ್
ಬೆಂಗಳೂರು, ನವೆಂಬರ್ 2: ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಮುನ್ನವೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ಬಿಜೆಪಿ ನಾಯಕತ್ವ ವಿಳಂಬ ಮಾಡುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಯತ್ನಾಳ್ ಉತ್ತರಿಸಿದರು. ಶಾಸಕರು ಮತ್ತು ಇತರ ನಾಯಕರ ಪ್ರತ್ಯೇಕ ತಂಡವನ್ನು ರಚಿಸುವ ಮೂಲಕ ಬರ ಪೀಡಿತ ತಾಲೂಕುಗಳಲ್ಲಿ ಪ್ರವಾಸ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಿದರು.

ನವೆಂಬರ್ 6 ಮತ್ತು 7 ರಂದು ನಾನು ಮೈಸೂರು ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ. ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲ. ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತಿಲ್ಲ. ಎಲ್ಲ ಅಂಶಗಳನ್ನು ಪರಿಗಣಿಸಿ ನಮ್ಮ ಪಕ್ಷ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆದಿದೆ. ಸಚಿವರಾದ ಜಮೀರ್ ಅಹ್ಮದ್, ಎಂಬಿ ಪಾಟೀಲ್ ಮತ್ತು ಕೆಎನ್ ರಾಜಣ್ಣ, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಒಳಗಡೆಯೇ ಕುತಂತ್ರ ನಡೆದಿದೆ ಎಂದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಎಲ್ಲಿಲ್ಲಿ ಓಡಾಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇದೆ. ಡಿ.ಕೆ.ಶಿವಕುಮಾರ್ ಪರ 70 ಶಾಸಕರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಪರ 65 ಶಾಸಕರು ಇದ್ದಾರೆ ಅಂತ ಕಾಂಗ್ರೆಸ್ನವರೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಯುವನಿಧಿ ಯೋಜನೆ ಇನ್ನೂ ಜಾರಿ ಮಾಡಿಲ್ಲ. ಸರ್ಕಾರ ವೈಫಲ್ಯವಾಗಿದೆ. ಯೋಜನೆಗೆ ಹಣ ಕೊಡಲಾಗದೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದರು.
ಆಪರೇಷನ್ ಕಮಲ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಲಾಗುತ್ತಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು ಆಫರ್ ನೀಡಿದ ಬಗ್ಗೆ ವಿಡಿಯೋ, ಆಡಿಯೋ ಇದ್ದರೇ ಬಹಿರಂಗಪಡಸಲಿ. ಏನೇ ಆರೋಪ ಇದ್ದರೂ ಅದನ್ನು ಬಹಿರಂಗಪಡಿಸಬೇಕು. ಕಾಂಗ್ರೆಸ್ನವರು ತಾವೇ ಜಗಳವಾಡಿ ಹಾಳಾಗುವಾಗ ನಮ್ಮದೇನು ಕೆಲಸ ಎಂದು ಅವರು ಹೇಳಿದರು.
ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ನ ಮಹಾನಾಯಕರಿದ್ದಾರೆ. ನಕಲಿ ಸಿಡಿ ಮಾಡುವ ಕಂಪನಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೆ. ನಕಲಿ ಸಿಡಿ ಮಾಡುವ ಶಕ್ತಿ ಕಾಂಗ್ರೆಸ್ ಬಂಡೆಗಲ್ಲಿಗಿದೆ. ಬಂಡೆಗಲ್ಲು ಮಾಡಿದ್ದರೆ ಬಹಿರಂಗಪಡಿಸಿ ತನಿಖಾ ಸಂಸ್ಥೆಗೆ ಕೊಡಲಿ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಸನಗೌಡ ಪಾಟೀಲ್ ವಾಗ್ದಾಳಿ ಮಾಡಿದರು.












Click it and Unblock the Notifications