ಪ್ರಭಾವಿ ಖಾತೆಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿದ್ದಾರೆ: ಆರ್.ಅಶೋಕ್ ಹೊಸ ಬಾಂಬ್
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕ್ಯಾಬಿನೆಟ್ ಪುನರ್ ರಚನೆ ಚರ್ಚೆಗಳು ನಡೆಯುತ್ತಲೇ ಇವೆ. ಹಲವರು ಸಚಿವ ಸ್ಥಾನ ಸಿಗುವ ಕನಸು ಕಂಡಿದ್ದಾರೆ. ಈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಖಾತೆ ಉಳಿಸಿಕೊಳ್ಳಲು ಮತ್ತು ಪ್ರಭಾವಿ ಖಾತೆ ಪಡೆಯಲು ಇಂತಿಷ್ಟು ಹಣ ಎಂದು ನಿಗದಿ ಮಾಡಲಾಗಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಜೊತೆಗೆ ಕ್ಯಾಬಿನೆಟ್ ಪುನರ್ ರಚನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೋಟಿ ಕೋಟಿ ಮೊತ್ತಕ್ಕೆ ಮಂತ್ರಿಗಿರಿ ಬಿಕರಿಯಾಗುತ್ತಿದೆ. ಈ ಭ್ರಷ್ಟ ಹಣವನ್ನು ಬಿಹಾರ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಳ್ಳಲಿದೆ ಎಂದೂ ಅಶೋಕ್ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ದುರಾಡಳಿತವನ್ನು ಮುಚ್ಚಿ ಹಾಕಲು, ಉದ್ಯಮಗಳು ರಾಜ್ಯದಿಂದ ಸ್ಥಳಾಂತರವಾಗುತ್ತಿರುವ ಸುದ್ದಿಯನ್ನು ಮರೆಮಾಚಲು ಸಚಿವರು ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಈ ಸರ್ಕಾರ ಹೆಚ್ಚು ದಿನ ಉಳಿಯಲಾರದು ಎಂದು ಅಶೋಕ್ ಎಚ್ಚರಿಸಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದಿದ್ದಾರೆ.

ಆಶಾ ಕಾರ್ಯಕರ್ತೆಯರ ಗೌರವಧನವನ್ನ ₹8,000ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಗೌರವಧನ ಹೆಚ್ಚಿಸುವುದಿರಲಿ, ಕಳೆದ ಮೂರು ತಿಂಗಳಿಂದ ಕೊಡಬೇಕಾದ ಗೌರವಧನವನ್ನೂ ಕೊಟ್ಟಿಲ್ಲ. ವಿಪಕ್ಷಗಳು ಸರ್ಕಾರ ದಿವಾಳಿ ಆಗಿದೆ ಎಂದು ಟೀಕೆ ಮಾಡಿದಾಗಲೆಲ್ಲ ಎಲ್ಲ ಸರಿಯಿದೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತೀರಲ್ಲ ಸ್ವಾಮಿ, ಸರ್ಕಾರ ಪಾಪರ್ ಆಗಿಲ್ಲ ಎನ್ನುವುದಾದರೆ 42,000 ಆಶಾ ಕಾರ್ಯಕರ್ತೆಯರಿಗೆ ಸಿಗಬೇಕಾದ ₹63 ಕೋಟಿ ರೂಪಾಯಿ ಗೌರವಧನ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ?
ಸಿಎಂ ಕುರ್ಚಿಗಾಗಿ ಅಹಿಂದ ಅಸ್ತ್ರ
ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತಿಮ ಘಟ್ಟದಲ್ಲಿದೆ. ಹೇಗಾದರೂ ಮಾಡಿ ಇನ್ನರ್ಧ ಅವಧಿಯನ್ನು ಸಿಎಂ ಆಗಿಯೇ ಮುಗಿಸಬೇಕು ಎಂದುಕೊಂಡಿರುವ ಸಿದ್ದರಾಮಯ್ಯ ಅವರು ಈಗ ಅಹಿಂದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಅಹಿಂದ ಬಳಸಿಕೊಳ್ಳುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು ಬಿಟ್ಟರೆ ಹಿಂದುಳಿದ ವರ್ಗ, ದಲಿತರ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ದಲಿತರ ಅಭಿವೃದ್ಧಿಗೆ ಮೀಸಲಾಗಿದ್ದ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು, ದಲಿತ ಕಲ್ಯಾಣ ನಿಗಮ ಮಂಡಳಿಗಳಲ್ಲಿ ದೋಚಿರುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಬಿಜೆಪಿ ದೂರಿದೆ.
ಕಾಂಗ್ರೆಸ್ ಒಳಜಗಳ ಈಗ ಬೀದಿಗೆ ಬಂದು ನಿಂತಿದೆ. ಸಿಎಂ ಪುತ್ರ ಯತೀಂದ್ರ ಹೇಳಿಕೆಯಿಂದ ಕಾಂಗ್ರೆಸ್ ಒಳಗೆ ಬೆಂಕಿ ಬಿದ್ದಿದೆ. ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸುತ್ತಿರುವುದು ಡಿಕೆಶಿ ಬಣವನ್ನು ಕೆರಳಿಸಿದೆ. ಶಾಸಕ ಇಕ್ಬಾಲ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದ ಮುಖವಾಡ ಕಳಚಿ ಬಿದ್ದಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯನವರೇ ಅಂದು ಬಾದಾಮಿ ಕ್ಷೇತ್ರದ ಜನ ನಿಮಗೆ ರಾಜಕೀಯ ಮರುಜನ್ಮ ನೀಡದಿದ್ದರೆ, ಮುಖ್ಯಮಂತ್ರಿ ಸ್ಥಾನ ಕನಸಾಗಿಯೇ ಉಳಿಯುತ್ತಿತ್ತು. ಬಾದಾಮಿಯನ್ನು ಸಿಂಗಾಪುರ ಮಾಡುತ್ತೇನೆ, ದುಬೈ ಮಾಡುತ್ತೇನೆಂದು ಹುಸಿ ಭರವಸೆ ನೀಡಿ, ಇಂದು ಕನಿಷ್ಠ ಸೌಲಭ್ಯವೂ ಇಲ್ಲದಂತೆ ಮಾಡಿ ಉಂಡ ಮನೆಗೆ ದ್ರೋಹ ಬಗೆದು ಹೋಗಿದ್ದೀರಿ. ಬಾದಾಮಿ ಕ್ಷೇತ್ರದ ಜನತೆ ನಿಮ್ಮನ್ನು ಕ್ಷಮಿಸಲಾರರು ಎಂದು ಟೀಕಿಸಿದೆ.












Click it and Unblock the Notifications