ಮಂಡ್ಯ: ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರಿಟ್ಟ ರಮ್ಯಾ
ಮಂಡ್ಯ, ಮಾ 26: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಬುಧವಾರ (ಮಾ 26) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಭಾವೋದ್ವೇಗಕ್ಕೆ ಒಳಗಾಗಿ ರಮ್ಯಾ ಕಣ್ಣೀರಿಟ್ಟಿದ್ದಾರೆ.
ನಾಮಪತ್ರ ಸಲ್ಲಿಸುವ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ನೆರೆದಿದ್ದ ಅಪಾರ ಜನಸ್ತೋಮವನ್ನು ಕಂಡು, ಜೊತೆಗೆ ತನ್ನ ಸಾಕು ತಂದೆ ದಿವಂಗತ ನಾರಾಯಣ್ ಅವರನ್ನು ನೆನೆಪಿಸಿಕೊಂಡು ರಮ್ಯಾ ಭಾವುಕರಾಗಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನಾಮಪತ್ರಿಕೆ ಸಲ್ಲಿಕೆಯ ಮುನ್ನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ರಮ್ಯಾ, ಅಲ್ಲಿಂದ ಮಾದೇಗೌಡರ ಆಶೀರ್ವಾದ ಪಡೆದು ನಾಮಪತ್ರಿಕೆ ಸಲ್ಲಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.
ಅಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಮ್ಯಾ ಅಭಿಮಾನಿಗಳು ಹತ್ತಿರದಿಂದ ನೋಡಲು ಮುಗಿಬಿದ್ದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸ ಬೇಕಾಯಿತು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸಿ ಎಸ್ ಪುಟ್ಟರಾಜು ಮತ್ತು ಬಿಜೆಪಿಯಿಂದ ಬಿ ಶಿವಲಿಂಗಯ್ಯ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿ ರಮ್ಯಾ ಭಾಷಣ
ನಾಮಪತ್ರ ಸಲ್ಲಿಸಿದ ನಂತರ ಮಾತನಾಡುತ್ತಿದ್ದ ರಮ್ಯಾ, ಕಳೆದ ಬಾರಿ ಉಪಚುನಾವಣೆಯಲ್ಲಿ ನಾಮಪತ್ರಿಕೆ ಸಲ್ಲಿಕೆಯ ವೇಳೆ ನನ್ನ ತಂದೆ ಮತ್ತು ಅಂಬರೀಶ್ ಅಂಕಲ್ ಇದ್ದರು. ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ, ಅಂಬಿ ಅಂಕಲ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆಂದು ಹೇಳಿ ಭಾವೋದ್ವೇಗಕ್ಕೆ ಒಳಗಾದರು. (file photo)
ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಪರ್ಯಾಯ
ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಪರ್ಯಾಯ, ಕ್ಷೇತ್ರದ ಅಭಿವೃದ್ದಿಗಾಗಿ ಕಾಂಗ್ರೆಸ್ ಮತನೀಡಿ. ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕೆಂದು ಕಾರ್ಯಕರ್ತರಲ್ಲಿ ರಮ್ಯಾ ಮನವಿ ಮಾಡಿದ್ದಾರೆ. (ಟ್ವಿಟರ್ ಫೋಟೋ)
ವಿಡಿಯೋ ಚಿತ್ರೀಕರಣ
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ವಿಡಿಯೋ ಚಿತ್ರೀಕರಣಕ್ಕಾಗಿ ದೆಹಲಿಗೆ ತೆರಳಿದ್ದರಿಂದ, ನಾಮಪತ್ರಿಕೆ ಸಲ್ಲಿಸಲು ಕೊನೆಯ ದಿನವಾದ ಬುಧವಾರ ರಮ್ಯಾ ನಾಮಪತ್ರ ಸಲ್ಲಿಸಿದ್ದಾರೆ.
ದೆಹಲಿಯಿಂದ ಬುಲಾವ್
ಮಂಡ್ಯದ ಹಾಲಿ ಸಂಸದೆ ರಮ್ಯಾ ಸೋಮವಾರ (ಮಾ 24) ನಾಮಪತ್ರ ಸಲ್ಲಿಸ ಬೇಕಾಗಿತ್ತು. ಆದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಮ್ಯಾ ಅವರಿಗೆ ತುರ್ತಾಗಿ ದೆಹಲಿಗೆ ಬರುವಂತೆ ಸೂಚಿಸಿದ್ದರು. ಪಕ್ಷದ ಚುನಾವಣಾ ಜಾಹೀರಾತಿನ ಚಿತ್ರೀಕರಣಕ್ಕಾಗಿ ದೆಹಲಿಯಿಂದ ರಮ್ಯಾಗೆ ಬುಲಾವ್ ಬಂದಿತ್ತು.
ರೈತರ ಸಮಸ್ಯೆ ಬಗ್ಗೆ ಗಮನ ಸೆಳಿದಿದ್ದ ರಮ್ಯಾ
ಉಪಚುನಾವಣೆಯ ಮೂಲಕ ಸಂಸತ್ ಪ್ರವೇಶ ಮಾಡಿದ್ದ ರಮ್ಯಾ, ತಮಗೆ ಸಿಕ್ಕ ಸೀಮಿತ ಕಾಲಾವಕಾಶದಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಲೋಕಸಭಾ ಅಧಿವೇಶನದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ರಮ್ಯಾ, ಮಂಡ್ಯದ ಕಬ್ಬು ಬೆಳೆಗಾರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.