ಈ ಕಾರಣಕ್ಕೆ ತೇಜಸ್ವಿ ಸೂರ್ಯ ಚೈಲ್ಡ್ ಸಂಸದ ಎಂದ ಕಾಂಗ್ರೆಸ್
ರಾಜ್ಯದಲ್ಲಿ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ನ ಮೇಲೆ ಬಿಜೆಪಿ ದಾಳಿ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಟ್ವೀಟ್ಗಳನ್ನು ಮಾಡುತ್ತಿದೆ. ಈಗ ಬಿಜೆಪಿಯ ಪ್ರಮುಖ ನಾಯಕ ತೇಜಸ್ವಿ ಸೂರ್ಯನ ಅವರ ಬಗ್ಗೆ ಟ್ವೀಟ್ ಮಾಡಿದ್ದು, ಬಿಜೆಪಿಗೆ ಹತ್ತು ಪಾಯಿಂಟ್ಸ್ಗಳ ಮೂಲಕ ಪ್ರಶ್ನೆ ಮಾಡಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಪಡೆದ ಆರೋಪದ ಮೇಲೆ ಸಂಕಷ್ಟ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇಡೀ ಬಿಜೆಪಿ ನಾಯಕರೇ ತಿರುಗಿ ಬಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಅಲ್ಲಿಯೂ ಸಿದ್ದರಾಮಯ್ಯ ಅವರ ಬಗ್ಗೆ ಹಾಗೂ ಮುಡಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಮೋದಿ ಹಾಗೂ ಅವರ ಪಕ್ಷದವನ್ನು ಟೀಕಿಸುತ್ತಿದೆ. ಕಾಂಗ್ರೆಸ್ ಮಾಡಿದ ಟ್ವೀಟ್ನಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ರೈತರ ವಿಷಯ ಪ್ರಸ್ತಾಪಿಸಿ ಟಾಂಗ್ ಕೊಟ್ಟ ಕಾಂಗ್ರೆಸ್: ರಾಜ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡಲಾಗಿದೆ. ಅದರಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಮೃತರಾಗಿದ್ದು ಮೋದಿಗೆ ನೆನಪಿದೆಯೇ, ರೈತರನ್ನು ದೆಹಲಿ ಬೀದಿಗಳಲ್ಲಿ ಬಿಸಿಲು, ಮಳೆ ಹಾಗೂ ಚಳಿಯಲ್ಲಿ ವರ್ಷಗಟ್ಟಲೆ ಕೂರಿಸಿದ್ದು ಮೋದಿಗೆ ನೆನಪಿದೆಯೇ ಎಂದು ಹಾಗೂ ಬಿಜೆಪಿ ನಾಯಕರು ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಅವಮಾನಿಸಿದ್ದು ಮೋದಿಗೆ ನೆನಪಿದೆಯೇ ಎಂದು ಪ್ರಶ್ನೆ ಮಾಡಿದೆ.
ಅಲ್ಲದೇ ನಿಮ್ಮ ಸರ್ಕಾರವು ರೈತರ ಆದಾಯ ಡಬಲ್ ಮಾಡುತ್ತೇನೆಂದು ಬೀಜ, ರಸಗೊಬ್ಬರದ ಬೆಲೆ ಡಬಲ್ ಮಾಡಿದ್ದು. ದೇಶದಲ್ಲಿ ಕೃಷಿ ಜಿಡಿಪಿ ಕುಸಿತ ಕಂಡಿರುವುದು ಮೋದಿಯ ಗಮನಕ್ಕಿದೆಯೇ, ರೈತರನ್ನು ಹೀನಾಯವಾಗಿ ಅವಮಾನಿಸಿದ್ದ ಬಿ ಗ್ರೇಡ್ ನಟಿಯೊಬ್ಬಳನ್ನು ಕರೆದು ಟಿಕೆಟ್ ಕೊಟ್ಟಿದ್ದು ಮೋದಿಗೆ ನೆನಪಿದೆಯೇ ಎಂದು ತೀಕ್ಷಣವಾಗಿ ಟ್ವೀಟ್ ಮಾಡಿದೆ. ರೈತರಿಗೆ ಸ್ವರ್ಗವನ್ನೇ ತಂದಿಡುವೆ ಎಂದಿದ್ದ ಮೋದಿಯವರಿಗೆ ದೇಶದಲ್ಲಿ ಕಳೆದ 10 ವರ್ಷದಲ್ಲಿ 112000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ತಿಳಿದಿದೆಯೇ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಮೋದಿಯವರು ನಂತರ ಆ ಬಗ್ಗೆ ತುಟಿ ಪಿಟಕ್ ಎನ್ನಲಿಲ್ಲ (ಆ ಬಗ್ಗೆ ಮಾತನಾಡಲೇ ಇಲ್ಲ).
ರೈತರಿಂದ ಈ ದೇಶದ ಯಾವುದೇ ಕೊಡುಗೆ ಇಲ್ಲ, ರೈತರ ಸಾಲಮನ್ನಾದಿಂದ ಪ್ರಯೋಜನವಿಲ್ಲ ಎಂದಿದ್ದ ನಿಮ್ಮ ಚೈಲ್ಡ್ ಸಂಸದ ತೇಜಸ್ವಿ ಸೂರ್ಯ ಮಾತುಗಳ ಬಗ್ಗೆ ಮೋದಿಗೆ ಅರಿವಿದೆಯೇ, ನೆರೆ, ಬರಗಳಿಂದ ಕಂಗಲಾಗಿದ್ದ ರಾಜ್ಯದ ರೈತರಿಗೆ ಸಕಾಲದಲ್ಲಿ ಸಮರ್ಪಕ ಪರಿಹಾರ ನೀಡದೆ ವಂಚಿಸಿದ್ದು ಇದೇ ನಿಮ್ಮ ನರೇಂದ್ರ ಮೋದಿ ಅವರು ಅಲ್ಲವೇ ಎಂದು ಕೇಳಿದೆ.
ರೈತರ ಬದುಕು ಹಸನಾಗಿಸಿದರು ನಾವು: ರೈತರ ಬದುಕನ್ನು ಹಸನಾಗಿಸಿದರು ನಾವು ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯದ ರೈತರಿಗೆ ನೇಣಿನ ಕುಣಿಕೆ ರೆಡಿ ಮಾಡಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ. ಕೃಷಿ ಭಾಗ್ಯದ ಮೂಲಕ ರೈತರ ನೆರವಿಗೆ ನಿಂತಿದ್ದ ನಮ್ಮ ಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿಯಂತಹ ಯೋಜನೆಗಳಿಂದಲೂ ರೈತರ ಬದುಕಿನ ಹೊರೆಯನ್ನು ಕಡಿಮೆ ಮಾಡಿದೆ. ಕೃಷಿಕರ ಬದುಕಿಗೆ ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಹೇಳಿದೆ.












Click it and Unblock the Notifications