ಮಳವಳ್ಳಿ : ಆಡಳಿತ ವಿರೋಧಿ ಅಲೆ ಅನ್ನದಾನಿಗೆ ವರವಾಗುತ್ತಾ?
ಮಂಡ್ಯ, ಫೆಬ್ರವರಿ 18 : ಮಂಡ್ಯ ಜಿಲ್ಲೆಯ ಪ್ರತಿಷ್ಠೆಯ ವಿಧಾನಸಭಾಕ್ಷೇತ್ರ ಮಳವಳ್ಳಿ. ಕಾವೇರಿ ನದಿಯ ಶಿವನಸಮುದ್ರ ಜಲಾಶಯ (ಗಗನಚುಕ್ಕಿ ಮತ್ತು ಬರಚುಕ್ಕಿ) ಮಳವಳ್ಳಿ ತಾಲೂಕಿನ ಅತ್ಯಂತ ಪ್ರಮುಖ ಪ್ರವಾಸಿ ತಾಣ.
ಸುಮಾರು 90 ಮೀಟರ್ ಎತ್ತರದಿಂದ ಧುಮುಕುವ ಕಾವೇರಿಯ ಈ ಸ್ಥಳದಲ್ಲಿ ಇಡೀ ಏಷ್ಯಾ ಖಂಡದಲ್ಲೇ ಮೊದಲಬಾರಿಗೆ 1905 ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು.
ಮೇಲುಕೋಟೆ : ರೈತ ನಾಯಕನಿಗೆ ರಾಷ್ಟ್ರೀಯ ಪಕ್ಷಗಳ ಸವಾಲು!
ರಾಜಕೀಯವಾಗಿ ನೋಡುವುದಾದದರೆ ಹಿರಿಯ ಗಾಂಧಿವಾದಿ, ರಾಜಕಾರಿಣಿ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ತಮ್ಮ ರಾಜಕೀಯ ನೆಲೆ ಕಟ್ಟಿಕೊಂಡ ಕ್ಷೇತ್ರ ಮಳವಳ್ಳಿ.
ಮಂಡ್ಯ ರಾಜಕೀಯ : ದೇವೇಗೌಡರ ಟಾರ್ಗೆಟ್ ಕ್ಷೇತ್ರ ಶ್ರೀರಂಗಪಟ್ಟಣ!
1962ರಲ್ಲಿ ಮೊದಲ ಬಾರಿಗೆ ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವು ಪಡೆದರು. ನಂತರ 1967ರಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವನ್ನಾಗಿ ಪರಿವರ್ತಿಸಿದಾಗ, ಮಾದೇಗೌಡರು ಪಕ್ಕದ ಕ್ಷೇತ್ರವಾಗಿದ್ದ ಕಿರುಗಾವಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಮಂಡ್ಯ ರಾಜಕಾರಣ : ಬಿಜೆಪಿ ಸೇರಿದ ಕೆ.ಎಸ್.ನಂಜುಂಡೇಗೌಡ
1957ರಿಂದ 2013ರ ತನಕ ನಡೆದ ಚುನಾವಣೆಗಳಲ್ಲಿ, 1962ರ ಚುನಾವಣೆಯನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಚುನಾವಣೆಗಳಲ್ಲಿ ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರು?
ಹಾಲಿ ಶಾಸಕ ಕಾಂಗ್ರೆಸ್ ನ ಪಿ.ಎಂ.ನರೇಂದ್ರ ಸ್ವಾಮಿ. ಕಳೆದ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿ, 2008ರಲ್ಲಿ ಹಾಗು 2013ರಲ್ಲಿ ಗೆಲುವಿನ ನಗೆ ಬೀರಿದ್ದಾರೆ. 2008ರಲ್ಲಿ ಪಕ್ಷೇತರ ಶಾಸಕರಾಗಿದ್ದ ನರೇಂದ್ರಸ್ವಾಮಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಅನುಯಾಯಿಯೂ ಆಗಿರುವ ಅವರು ಈ ಬಾರಿಯೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ
2004ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಆರಿಸಿ ಬಂದಿದ್ದ ಡಾ.ಕೆ.ಅನ್ನದಾನಿ ಅವರು 2008 ಹಾಗು 2013ರ ಚುನಾವಣೆಗಳಲ್ಲಿ ನರೇಂದ್ರಸ್ವಾಮಿ ಅವರ ವಿರುದ್ಧ ಸೋಲುಕಂಡಿದ್ದಾರೆ. 2013ರ ಚುನಾವಣೆಯಲ್ಲಿ ಕೇವಲ 538 ಮತಗಳ ಅಂತರದಿಂದ ಸೋತಿದ್ದಾರೆ. ಹೆಚ್ಚು ಕ್ರಿಯಾಶೀಲರಾಗಿರುವ ಅನ್ನದಾನಿ ಈ ಬಾರಿ ಮತ್ತಷ್ಟು ಹುರುಪಿನಿಂದ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೇ ನಡೆದ ಕುಮಾರಸ್ವಾಮಿಯವರ "ಕುಮಾರ ಪರ್ವ" ಯಾತ್ರೆಯಲ್ಲಿ ಸೇರಿದ್ದ ಜನಸ್ತೋಮ ಕಂಡು, ಅನ್ನದಾನಿ ಅವರ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿದೆ.
ಬಿಜೆಪಿ ಟಿಕೆಟ್ಗೆ ಇಬ್ಬರ ಹೆಸರು
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ. ಮಾಜಿ ಸಚಿವ ಬಿ.ಸೋಮಶೇಖರ್ ಪಕ್ಷ ಸೇರ್ಪಡೆ ಹಾಗು ಸ್ಪರ್ಧೆಯಿಂದ ಒಂದಷ್ಟು ಬಲ ತಂದುಕೊಡಬಹುದು. 1983ರಿಂದ 1999ರವರೆಗೆ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದ ಸೋಮಶೇಖರ್, ಎರಡು ಬಾರಿ ಜನತಾಪಕ್ಷದಿಂದ, ಒಮ್ಮೆ 1994ರಲ್ಲಿ ಜನತಾದಳದಿಂದ ಹಾಗು ಪಕ್ಷ ವಿಭಜನೆಗೊಂಡನಂತರ 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು.
ಕೆ.ಶಿವರಾಮ್ ಸ್ಪರ್ಧೆ?
2013ರಲ್ಲಿ ಜೆಡಿಯೂ ನಿಂದ ಸ್ಪರ್ಧಿಸಿದ್ದ ಸೋಮಶೇಖರ್ ಕೇವಲ 3914 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿರುವ ಸೋಮಶೇಖರ್ ಅವರಿಗೆ ಟಿಕೆಟ್ ಇನ್ನೂ ಖಾತರಿಯಾಗಿಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಸೋಮಶೇಖರ್ ಪಕ್ಷ ಸಂಘಟನೆಯಲ್ಲೂ ತೊಡಗಿಕೊಂಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಕೂಡ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದಾರೆ.
ಕೆ.ಶಿವರಾಮ್ ಅವರಿಗೆ ಸಹಾಯಕ
ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ತೆರೆದು, ಯುವಕರ ಓಲೈಕೆಯಲ್ಲಿ ತೊಡಗಿದ್ದು, ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೊಬ್ಬರ ಅನಿಸಿಕೆಯಂತೆ, ಶಿವರಾಮ್ ರವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಪ್ರಬಲ ಸ್ಪರ್ಧೆ ಒಡ್ಡುವುದೂ ಕಷ್ಟವಾಗಬಹುದು.
ಸ್ಪರ್ಧಿಗಳ ಬಲಾಬಲ
ನರೇಂದ್ರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಆರ್ಥಿಕವಾಗಿ ಸದೃಢರು, ಕಾರ್ಯಕರ್ತರ ಪಡೆಯನ್ನು ಹೊಂದಿದ್ದು ಸಹಾಯಕವಾಗಬಹುದು.
ಅನ್ನದಾನಿ ಅವರು ಸರಳ ಸಜ್ಜನಿಕೆಯ ವ್ಯಕ್ತಿ. ನರೇಂದ್ರಸ್ವಾಮಿಯವರ ಮೇಲಿನ ಆಡಳಿತ ವಿರೋಧಿ ಅಲೆ, ಕುಮಾರಸ್ವಾಮಿ ಖ್ಯಾತಿ, ನರೇಂದ್ರಸ್ವಾಮಿ ಮೇಲಿನ ಮರಳು ದಂಧೆಯ ಅಪಖ್ಯಾತಿ, ಬಿಎಸ್ಪಿ ಯೊಂದಿಗಿನ ಮೈತ್ರಿ ಸಹಾಯಕವಾಗಬಹುದು.
ಜನರು ಹೇಳುವುದೇನು?
'ಅನ್ನದಾನಿ ಅವರು ಈಗಾಗಲೇ ಕೆಲವು ತಿಂಗಳಿನಿಂದ ಬೆಳಿಗಿನ ವಾಯು ವಿಹಾರ ಮುಗಿಸಿದ ನಂತರ ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ, ಭೇಟಿಕೊಟ್ಟು ಜನರ ಸಂಪರ್ಕದಲ್ಲಿದ್ದು, ಅಹವಾಲುಗಳನ್ನು ಸ್ವೀಕರಿಸಿ ಸ್ಪಂದಿಸುತ್ತಿದ್ದಾರೆ' ಎನ್ನುತ್ತಾರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾಫಿ ಅಂಗಡಿಯ ಮಾಲೀಕ ನಾಗೇಂದ್ರಪ್ಪ. ಕಳೆದ ಬಾರಿ ಅತ್ಯಂತ ಅಲ್ಪ ಮತಗಳಿಂದ ಪರಾಭವಗೊಂಡಿರುವ ಅನ್ನದಾನಿ ಮೇಲಿರುವ ಅನುಕಂಪದ ಅಲೆ, ಗೆಲುವಿನ ದಡ ಸೇರಿಸಬಹುದಾದ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿವೆ.