ಹೊಳೆನರಸೀಪುರ : ರೇವಣ್ಣ ಪಾರುಪತ್ಯ ಮುಂದುವರೆಯಲಿದೆಯೇ?
Recommended Video
ಹಾಸನ, ಜನವರಿ 29 : ಕನ್ನಡಿಗನೊಬ್ಬನನ್ನು ಈ ದೇಶದ ಪ್ರಜಾಪ್ರಭುತ್ವದ ಅತ್ಯುನ್ನತ ಹುದ್ದೆ ಪ್ರಧಾನಿಯನ್ನಾಗಿಸುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸಿದ ಕ್ಷೇತ್ರ ಹೊಳೆನರಸೀಪುರ. ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಪ್ರತಿನಿಧಿಸುತ್ತಿರುವ ಹಾಸನ ಜಿಲ್ಲೆಯ ಪ್ರಮುಖ ಕ್ಷೇತ್ರವಿದು. ಹಿಂದೆ ಎಚ್.ಡಿ.ದೇವೇಗೌಡರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.
ಕ್ಷೇತ್ರದಿಂದ 6 ಬಾರಿ ಜನರು ದೇವೇಗೌಡರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ. 1957ರ ಚುನಾವಣೆಯಲ್ಲಿ ಎ.ಜಿ.ರಾಮಚಂದ್ರ ರಾವ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ವೈ.ವೀರಪ್ಪ ಅವರಿಂದ ಸೋಲು ಕಂಡರು. ನಂತರ ತಮ್ಮ ಅನುಯಾಯಿ ಎಚ್.ಡಿ.ದೇವೇಗೌಡರನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೇರೇಪಿಸಿದರು.
ಹಾಸನದಲ್ಲಿ ಗೆಲುವಿನ ಶಾಸನ ಯಾರು ಕೆತ್ತುತ್ತಾರೆ?
1962ರಲ್ಲಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು. ಆದರೆ, ಅಂದಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪನವರು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿ ಎಚ್.ಡಿ.ದೊಡ್ಡೇಗೌಡರಿಗೆ ಟಿಕೆಟ್ ನೀಡಿದರು.
ಸಕಲೇಶಪುರದಲ್ಲಿ ಬಿಜೆಪಿ vs ಕಾಂಗ್ರೆಸ್ ಬಾಡೂಟದ 'ಪಾರ್ಟಿ ಪಾಲಿಟಿಕ್ಸ್
ಆದ್ದರಿಂದ, ದೇವೇಗೌಡರು ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಗೆಲುವು ದಾಖಲಿಸಿದರು. ತಮ್ಮ 7ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಪುಟ್ಟಸ್ವಾಮಿ ಗೌಡರ ವಿರುದ್ಧ ಮೊದಲ ಸೋಲುಂಡರು. 1994ರಿಂದ ಇಲ್ಲಿವರೆಗೂ ಎಚ್.ಡಿ.ರೇವಣ್ಣ ಸ್ಪರ್ಧಿಸುತ್ತಿದ್ದಾರೆ.
ಜಿ.ಪುಟ್ಟಸ್ವಾಮಿ ಗೌಡರನ್ನು ಸೋಲಿಸಿದರು
1994ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿಯೇ ತಮ್ಮ ತಂದೆ ದೇವೇಗೌಡರನ್ನು ಮಣಿಸಿದ್ದ ಜಿ.ಪುಟ್ಟಸ್ವಾಮಿ ಗೌಡರನ್ನು ರೇವಣ್ಣ ಸೋಲಿಸಿ, ಗೆಲುವಿನ ರುಚಿ ಕಂಡರು. ಇಲ್ಲಿಯವರೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, 1996 ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. 2004ರಲ್ಲಿ ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾದರು. ಕುಮಾರಸ್ವಾಮಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು. 1999ರಲ್ಲಿ ಕಾಂಗ್ರೆಸ್ ನ ಎ.ದೊಡ್ಡೇಗೌಡರ ವಿರುದ್ಧ ರೇವಣ್ಣ, ಒಮ್ಮೆ ಸೋಲನ್ನೂ ಕಂಡಿದ್ದಾರೆ.
ಎಚ್.ಡಿ.ರೇವಣ್ಣರ ಬಲ
ಜನರು ಮಾತನಾಡಿಕೊಳ್ಳುವ ಹಾಗೆ ರೇವಣ್ಣರಿಗೆ ಹೊಳೆನರಸೀಪುರ ಹಾಗು ಹಾಸನ ರಾಜ್ಯ ಹಾಗೂ ದೇಶವಿದ್ದಂತೆ. ಯಾವುದೇ ಸರ್ಕಾರವಿದ್ದರೂ, ಸಾಧ್ಯವಾದಷ್ಟು ಅನುದಾನವನ್ನು, ಹೊಸ-ಹೊಸ ಯೋಜನೆಗಳನ್ನು ಹಾಸನ ಜಿಲ್ಲೆಗೆ ತರುವುದು ಇವರ ನೈಪುಣ್ಯತೆ.
ಉತ್ತಮ ಆಡಳಿತಗಾರ
ಕೆಎಂಎಫ್ ಅಧ್ಯಕ್ಷರಾಗಿ 9 ವರ್ಷ ಸೇವೆ ಸಲ್ಲಿಸಿ, ಅದರ ಉನ್ನತಿಗಿ ಶ್ರಮಿಸಿದ ರೇವಣ್ಣ ತಾವೊಬ್ಬ ಉತ್ತಮ ಆಡಳಿತಗಾರನೆಂದು ನಿರೂಪಿಸಿಕೊಂಡರು. ಕ್ಷೀರ ಕ್ರಾಂತಿಯ ಹರಿಕಾರ ಗುಜರಾತ್ ನ ಡಾ.ಕುರಿಯನ್ ಅವರು ಸ್ವತಃ, ಕರ್ನಾಟಕದ ಕೆಎಂಎಫ್ ಅನ್ನು ಹಾಗು ರೇವಣ್ಣರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದರು.
ಹಾಸನ ಜಿಲ್ಲೆಯ ರಸ್ತೆಗಳು, ಬಸ್ ನಿಲ್ದಾಣಗಳು (ಹಾಸನ ಬಸ್ ನಿಲ್ದಾಣ, ದೇಶದಲ್ಲೇ ಅತ್ಯುತ್ತಮ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಗಳಲ್ಲೊಂದು), ಹಾಸನ ಜಿಲ್ಲೆಯವರಿಗೆ ವಯಕ್ತಿಕ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸಿರುವುದು ಇವರಿಗಿರುವ ಶ್ರೀರಕ್ಷೆ.
ಭವಾನಿ ರೇವಣ್ಣ
ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹೊಳೆನರಸೀಪುರ ಕ್ಷೇತ್ರಕ್ಕೆ ಸೇರುವ ಹಳೇಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಾಲಿ ಸದಸ್ಯೆ. ಇತ್ತೀಚಿನ ದಿನಗಳಲ್ಲಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೇಲೆ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡಿರುವುದು ರೇವಣ್ಣ ಅವರಿಗೆ ವರವಾಗಬಹುದು.
ಕಾಂಗ್ರೆಸ್ ಅಭ್ಯರ್ಥಿ ಯಾರು?
ರೇವಣ್ಣರ ಕುಟುಂಬದ ರಾಜಕೀಯ ಎದುರಾಳಿಯಾಗಿದ್ದ ಜಿ.ಪುಟ್ಟಸ್ವಾಮಿ ಗೌಡರ ಸೊಸೆ, ಕಳೆದೆರಡು ಚುನಾವಣೆಗಳಲ್ಲಿ ರೇವಣ್ಣ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಅನುಪಮರವರು ಕಳೆದೆರಡೂ ಚುನಾವಣೆಗಳಲ್ಲಿ ದೊಡ್ಡ ಅಂತರದಿಂದಲೇ ಪರಾಭವಗೊಂಡಿದ್ದರು. ಮತ್ತೆ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದರೂ ಟಿಕೆಟ್ ಯಾರಿಗೆಂದು ಅಂತಿಮವಾಗಿಲ್ಲ.
ಗೌಡರ ಕುಟುಂಬದ ರಾಜಕೀಯ ವೈರಿ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಹಾಗೂ ಅನುಪಮರ ಪುತ್ರ ಶ್ರೇಯಸ್ ಪಟೇಲ್ ದಂಡಿಗನಹಳ್ಳಿ ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯ. ಈ ಕ್ಷೇತ್ರವೂ ಕೂಡ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ರೇವಣ್ಣ ವಿರುದ್ಧ ಬಿಜೆಪಿಯ ಸ್ಪರ್ಧೆ
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಹೇಮಂತ್ ಕುಮಾರ್ ಗೌಡ ಕೇವಲ 1491 ಮತಗಳಿಗೆ ತೃಪ್ತಿಪಟ್ಟುಕೊಂಡರು. ಬಿಜೆಪಿಯ ಇಲ್ಲಿನ ಸ್ಥಿತಿಯನ್ನು ಕಳೆದ ಚುನಾವಣೆಯ ಮತಗಳಿದ ವಿಶ್ಲೇಷಿಸಬಹುದು. ಬಿಜೆಪಿ ಗೆ ಹೆಚ್ಚೆನೂ ಅನುಕೂಲಕರ ವಾತಾವರಣವಿರದಿದ್ದರೂ, ಬಿಜೆಪಿಯ ಒಂದಷ್ಟು ಸಾಂಪ್ರದಾಯಿಕ ಮತಗಳನ್ನು ಪಡೆಯಬಹುದು.
ಕಾಂಗ್ರೆಸ್ ವಿಫಲ ಯತ್ನ
ಕಾಂಗ್ರೆಸ್ 2008ರಲ್ಲಿ ದೇವೇಗೌಡರ ಮಕ್ಕಳಿಬ್ಬರ ವಿರುದ್ಧ ಇಬ್ಬರು ಹೆಣ್ಣು ಮಕ್ಕಳನ್ನು ಹುರಿಯಾಳಾಗಿಸಿತ್ತು. ರಾಮನಗರದಲ್ಲಿ ರಾಮಕೃಷ್ಣ ಹೆಗಡೆಯವರ ಮಗಳಾದ ಮಮತಾ ನಿಚ್ಚಾಣಿಯವರನ್ನು, ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣರ ವಿರುದ್ಧ ಜಿ.ಪುಟ್ಟಸ್ವಾಮಿ ಗೌಡರ ಸೊಸೆ ಎಸ್.ಜಿ.ಅನುಪಮಾ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಯಶಸ್ಸು ಕಾಣಲಿಲ್ಲ. ಮುಂದೆ 2013 ರ ಚುನಾವಣೆಯಲ್ಲೂ ಅನುಪಮಾ ಅವರು ರೇವಣ್ಣ ವಿರುದ್ಧ ಸೋತರು. ಈ ಬಾರಿಯೂ ರೇವಣ್ಣ ಗೆಲ್ಲಬಹುದಾದ ಸನ್ನಿವೇಶಗಳಿದ್ದು, ಕಾಂಗ್ರೆಸ್ ಸ್ಪರ್ಧೆಯ ಮೇಲೆ ಎಲ್ಲವೂ ಅವಲಂಬಿಸಿದೆ.