'ಗಾಂಧಿ ಕುಟುಂಬಕ್ಕೂ ಮಠಗಳಿಗೂ, ಭಕ್ತರು ಮತ್ತು ದೇವರ ರೀತಿಯ ಸಂಬಂಧ'
ಹಿಜಾಬ್ ವಿಚಾರದ ಬಗ್ಗೆ ಮಾತನಾಡುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಠ, ಸ್ವಾಮೀಜಿ, ಖಾವಿಯನ್ನು ಎಳೆದು ತಂದಿದ್ದರು. ಇದು ನಾಡಿನ ಪೀಠಾಧಿಪತಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ಸಿದ್ದರಾಮಯ್ಯನವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.
ಎಲ್ಲಡೆ ಗದ್ದಲವಾಗುತ್ತಿರುವುದನ್ನು ಅರಿತ ಸಿದ್ದರಾಮಯ್ಯ, ನನ್ನ ಹೇಳಿಕೆಯನ್ನು ತಿರುಚಲಾಗಿದೆ, ನನಗೆ ನಾಡಿನ ಸ್ವಾಮೀಜಿಗಳ ಮೇಲೆ ಗೌರವವಿದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಈ ವಿಚಾರದಲ್ಲಿ ಮೌನ ವಹಿಸಿದ್ದ ಡಿ.ಕೆ.ಶಿವಕುಮಾರ್ ಈಗ ಪರೋಕ್ಷವಾಗಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿತ್ತಿರುವ ಎರಡು ದಿನಗಳ ಮುನ್ನ ಡಿಕೆಶಿ ಸವಿಸ್ತಾರವಾಗಿ, ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಮಠಮಾನ್ಯಗಳ ಬಗ್ಗೆ ಇರುವ ವಿಶೇಷ ಗೌರವವನ್ನು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಮಾರ್ಚ್ 31ರಂದು ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅಂದು, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಮರುದಿನ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ರಾಹುಲ್ ಗಾಂಧಿಯವರ ಸಿದ್ದಗಂಗಾ ಮಠದ ಭೇಟಿಯ ಒಂದು ದಿನದ ಅಂತರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಇಂದಿರಾ ಗಾಂಧಿಯವರು ಕೂಡಾ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು
"ಗಾಂಧಿ ಕುಟುಂಬಕ್ಕೂ ಮಠಗಳಿಗೂ ಭಕ್ತರು ಮತ್ತು ದೇವರ ರೀತಿಯ ಸಂಬಂಧ. ನಾಡಿನ ಸಾವಿರಾರು ಕುಟುಂಬಗಳಿಗೆ ಗಾಂಧಿ ಕುಟುಂಬ ಭೇಟಿ ನೀಡಿಕೊಂಡು ಬಂದಿದೆ. ಇಂದಿರಾ ಗಾಂಧಿಯವರು ಕೂಡಾ ಶೃಂಗೇರಿ ಮಠಕ್ಕೆ ಹೋಗಿ ಹಸ್ತ ತೆಗೆದುಕೊಂಡು ಬಂದ ಇತಿಹಾಸವಿದೆ. ಅಲ್ಲಿಗೆ ಮಾತ್ರವಲ್ಲದೇ ಕಂಚಿ ಮಠಕ್ಕೂ ಭೇಟಿ ನೀಡಿ ಸ್ವಾಮೀಜಿಯವರಿಂದ ಇಂದಿರಾ ಗಾಂಧಿಯವರು ಮಾರ್ಗದರ್ಶನವನ್ನು ಪಡೆಯುತ್ತಿದ್ದರು"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜೀವ್ ಗಾಂಧಿಯವರು ವಾರಗಟ್ಟಲೆ ಶೃಂಗೇರಿ ಮಠದಲ್ಲಿ ತಂಗಿದ್ದರು
"ಇನ್ನು ರಾಜೀವ್ ಗಾಂಧಿಯವರು ವಾರಗಟ್ಟಲೆ ಶೃಂಗೇರಿ ಮಠದಲ್ಲಿ ತಂಗಿ, ಹೋಮ ಹವನ ಮಾಡಿದ ಉದಾಹರಣೆ ನಮ್ಮ ಮುಂದಿದೆ, ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸೋನಿಯಾ ಗಾಂಧಿಯವರು ಸಿದ್ದಗಂಗಾ ಹಿರಿಯ ಶ್ರೀಗಳ ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತಿಹಾಸ ನಮ್ಮ ಮುಂದಿದೆ. ನಮ್ಮ ಸರಕಾರದ ಅವಧಿಯಲ್ಲಿ ಅಲ್ಲಿ ನಡೆಯುವ ಅನ್ನದಾಸೋಹ ಕಾರ್ಯಕ್ರಮವನ್ನು ಸರಕಾರದ ಕಾರ್ಯಕ್ರಮವನ್ನಾಗಿ ಮಾಡಿದ್ದೆವು"ಎಂದು ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹೇಳಿದರು.

ದಾಸೋಹ ಕಾರ್ಯಕ್ರಮವನ್ನು ನಾವು ಮಾಡಿಕೊಂಡು ಬಂದೆವು
"ಮಠಗಳು ಈ ನಾಡಿಗೆ ನೀಡಿದ ಮಾರ್ಗದರ್ಶನವನ್ನು ಗಮನದಲ್ಲಿ ಇಟ್ಟುಕೊಂಡು ದಾಸೋಹ ಕಾರ್ಯಕ್ರಮವನ್ನು ನಾವು ಮಾಡಿಕೊಂಡು ಬಂದೆವು. ಈಗ ಬಿಜೆಪಿಯವರಿಗೆ ಬೇರೆ ವಿಷಯವಿಲ್ಲ, ಹಾಗಾಗಿ ಇದನ್ನು ಹೈಜಾಕ್ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಪಕ್ಷ ಮತ್ತು ನಮ್ಮ ಪಕ್ಷದ ಮುಖಂಡರು ನಾಡಿನ ಪೀಠಾಧಿಪತಿಗಳಿಗೆ ಗೌರವ ನೀಡುವ ಕೆಲಸವನ್ನು ಹಿಂದೆಯೂ ಮಾಡಿತ್ತು, ಮುಂದೆಯೂ ಮಾಡುತ್ತದೆ"ಎಂದು ಡಿಕೆಶಿ ಸ್ಪಷ್ಟ ಪಡಿಸಿದರು.

ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ?
"ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ನಾವೇನು ಇದನ್ನು ಹೊಸದಾಗಿ ಮಾಡಿಕೊಂಡು ಬಂದಿದ್ದಲ್ಲ, ಹಿಂದಿನಿಂದಲೂ ಗೌರವ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ"ಎಂದು ಡಿಕೆಶಿ ಹೇಳಿದರು. "ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಹಾಕಿಕೊಳ್ಳಲು ಸಿದ್ದರಿದ್ದಾರೆ, ಅದರೆ ಜೊತೆಗೆ ಒಂದು ದುಪ್ಪಟ್ಟಾ ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳೂ ಸೆರಗನ್ನು ತಲೆಗೆ ಹಾಕಿಕೊಳ್ಳುವುದಿಲ್ಲವಾ, ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ. ಹಾಕಿಕೊಳ್ಳಲಿ ಬಿಡಿ, ಸರಕಾರಕ್ಕೆ ಇದರಿಂದ ಆಗುವ ತೊಂದರೆಯಾದರೂ ಏನು?" ಎಂದು ಸಿದ್ದರಾಮಯ್ಯ ಹೇಳಿದ್ದರು.ಇವರ ಈ ಹೇಳಿಕೆ ವ್ಯಾಪಕ ಚರ್ಚೆ/ಆಕ್ರೋಶಕ್ಕೆ ಕಾರಣವಾಗಿತ್ತು.












Click it and Unblock the Notifications