ಮೋದಿ ವಿರುದ್ಧ ಹೇಳಿಕೆ; ಚುನಾವಣಾ ಆಯೋಗದಿಂದ ಖರ್ಗೆ ಪುತ್ರನಿಗೆ ನೋಟಿಸ್
ಬೆಂಗಳೂರು, ಮೇ 03; ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ರಂಗೇರಿದೆ. ನಾಯಕರ ವಾಕ್ಸಮರ, ಟೀಕೆಗಳು ಜೋರಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಮಾಡಿದ ಟೀಕೆಯೊಂದಕ್ಕೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 8ರ ತನಕ ಬಹಿರಂಗ ಪ್ರಚಾರಕ್ಕೆ ಅನುಮತಿ ಇದೆ.
ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಮತ್ತು ಸ್ವತಃ ಕಲಬುರಗಿಯಲ್ಲಿ ಮೋದಿ ಮಂಗಳವಾರ ತಿರುಗೇಟು ನೀಡಿದ್ದರು. ಬಿಜೆಪಿ ಈ ಟೀಕೆಯ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿತ್ತು.

ಮಂಗಳವಾರ ಬಿಜೆಪಿ ನಾಯಕರ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಖರ್ಗೆ ಪುತ್ರನ ಹೇಳಿಕೆ ಕುರಿತು ದೂರು ನೀಡಿತ್ತು. ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು. ಬುಧವಾರ ಚುನಾವಣಾ ಆಯೋಗ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಜಾರಿಗೊಳಿಸಿದೆ, ತಮ್ಮ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?; ಕಲಬುರಗಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು "ನಾಲಾಯಕ್" ಎಂದು ಹೇಳಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿಯನ್ನು "ವಿಷದ ಹಾವು" ಎಂದು ಕರೆದಿದ್ದರು. ಅಪ್ಪ-ಮಕ್ಕಳು ತಮ್ಮ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯಲ್ಲಿ ತಿರುಗೇಟು ನೀಡಿದ್ದರು. ಮಂಗಳವಾರ ಖರ್ಗೆ ತವರು ನೆಲ ಕಲಬುರಗಿಯಲ್ಲಿ ಮೋದಿ ಪ್ರಚಾರ, ರೋಡ್ ಶೋ ನಡೆಸಿದ್ದರು. ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಪ್ರಿಯಾಂಕ್ ಖರ್ಗೆ, "ಮೋದಿ ಮೇಳಖೇಡಕ್ಕೆ ಬಂದಾಗ ಬಂಜಾರ ಸಮಾಜದವರಿಗೆ ಏನು ಹೇಳಿದ್ರಿ?. ಬಂಜಾರ ಸಮಾಜದ ಜನರ ಮಗ ದೆಹಲಿಯಲ್ಲಿದ್ದಾನೆ ಅಂತ ಹೇಳಿದ್ದೀರಿ. ಆದರೆ ಇಂತಹ ನಾಲಾಯಕ್ ಮಗನಿದ್ದರೆ ಹೇಗೆ ನಡೆಯತ್ತೆ?. ದೇಶ ನಡೆಸೋನು ಮಾತ್ರವಲ್ಲ, ಮನೇಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯಲ್ಲ" ಎಂದು ಹೇಳಿದ್ದರು.
ಚುನಾವಣಾ ಆಯೋಗ ಪ್ರಿಯಾಂಕ್ ಖರ್ಗೆಗೆ ನೀಡಿರುವ ನೋಟಿಸ್ನಲ್ಲಿ ನಿಮ್ಮ ಹೇಳಿಕೆ ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದೆ. ನೀವು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಣೆ ನೀಡಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ನೀಡಿತ್ತು. ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು "ವಿಷದ ಹಾವು" ಎಂದು ಕರೆದಿದ್ದಾರೆ. ಅವರ ಮಗ ಪ್ರಿಯಾಂಕ್ ಖರ್ಗೆ "ನಾಲಾಯಕ್" ಎಂದು ಕರೆದಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದೂರಿನಲ್ಲಿ ಮನವಿ ಮಾಡಿತ್ತು.
ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ್ದ ಪಿಯೂಷ್ ಗೋಯಲ್, "ಆಯೋಗದ ಮುಂದೆ ಬಜರಂಗ ದಳದ ವಿಚಾರವನ್ನು ಮೌಖಿಕವಾಗಿ ಪ್ರಸ್ತಾಪಿಸಲಾಗಿದೆ. ಬಜರಂಗದಳವು ಭಗವಾನ್ ಹನುಮಾನ್ ಹಾಗೂ ಜನರ ಸೇವೆ ಮಾಡುವ ಸಂಘಟನೆ. ಇಂತಹ ಸಂಘಟನೆ ಮೇಲೆ ಕಾಂಗ್ರೆಸ್ ದಾಳಿ ಮಾಡಲು ಹೊರಟಿರುವುದು ನಾಚಿಕೆಗೇಡು. ಕಾಂಗ್ರೆಸ್ ಓಲೈಕೆ ರಾಜಕಾರಣದಲ್ಲಿ ತೊಡಗಿದೆ" ಎಂದು ದೂರಿದ್ದರು.
ಕರ್ನಾಟಕ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ಹಲವು ನಾಯಕರನ್ನು ಸೋಲಿಸಲು ತಂತ್ರ ರೂಪಸಿದೆ, ಆ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆ ಸಹ ಇದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಗಾಗ ಟೀಕೆ ಮಾಡುತ್ತಲೇ ಇರುತ್ತಾರೆ.












Click it and Unblock the Notifications