ಚುನಾವಣಾ ವೇಳೆ ಸಿದ್ದರಾಮಯ್ಯನವರ ಸಂಪೂರ್ಣ ಹಿಡಿತದತ್ತ ಕಾಂಗ್ರೆಸ್?
ಇದುವರೆಗಿನ ಹೆಚ್ಚುಕಮ್ಮಿ ಐದು ವರ್ಷದ ಅವಧಿಯಲ್ಲಿ ಮೂಲ ಕಾಂಗ್ರೆಸ್ಸಿಗರು ಏನು ಆಗಬಾರದೆಂದು ಬಯಸಿದ್ದರೋ, ಅದೇ ದಿಕ್ಕಿನಲ್ಲಿ ಸಾಗುತ್ತಿದೆಯಾ ರಾಜ್ಯ ಕಾಂಗ್ರೆಸ್ಸಿನ ವಿದ್ಯಮಾನಗಳು? ಮುಖ್ಯಮಂತ್ರಿ ಸಿದ್ದರಾಮಯ್ಯ, ಆಡಳಿತ ಯಂತ್ರದ ಜೊತೆಗೆ, ರಾಜ್ಯ ಕಾಂಗ್ರೆಸ್ ನಲ್ಲೂ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರಾ?
ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ನೀಡುತ್ತಿರುವ ಪ್ರಾಮುಖ್ಯತೆ ನೋಡಿದರೆ, ಯೆಸ್, ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಹೆಚ್ಚಾಗುತ್ತಿರುವುದು ಅತ್ಯಂತ ಸ್ಪಷ್ಟವಾಗುತ್ತಿದೆ.
ಕಾಂಗ್ರೆಸ್ ಟಿಕೇಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!
ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ನಡೆದ ಎಲ್ಲಾ ರ್ಯಾಲಿಯ ವೇಳೆಯೂ, ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೆಚ್ಚಾಗಿ ಅವಲಂಬಿಸಿದ್ದು ಮತ್ತು ಇದಕ್ಕೆ ಮೂಲ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿದ್ದು ಗುಟ್ಟಾಗಿ ಏನೂ ಉಳಿದಿಲ್ಲ.
ಸಿದ್ದರಾಮಯ್ಯನವರ ವಿರುದ್ದ ಹಲವು ಸುತ್ತಿನ ದೂರುದುಮ್ಮಾನಗಳು ನಂಬರ್ 10, ಜನಪಥ್ ಅಂಗಣದಲ್ಲಿ ಸುತ್ತುತ್ತಿದ್ದರೂ, ಚುನಾವಣೆಯ ಈ ಸಮಯದಲ್ಲಿ ಹೈಕಮಾಂಡ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದವಿಲ್ಲ. ಯಾಕೆಂದರೆ, ತನ್ನ ಆಡಳಿತದಲ್ಲಿರುವ ದೊಡ್ಡ ರಾಜ್ಯಗಳಲ್ಲಿ ಉಳಿದುಕೊಂಡಿರುವುದು ಕರ್ನಾಟಕ ಮತ್ತು ಪಂಜಾಬ್ ಮಾತ್ರ.
ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದಾಗ ಮತ್ತು ನಂತರದ ಒಂದೆರಡು ವರ್ಷಗಳಲ್ಲಿದ್ದ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಆಂತರಿಕ ಬೇಗುದಿ ಹೈಕಮಾಂಡ್ ಅಂಗಣದಲ್ಲಿ ನಿರ್ಣಾಯಕ ಹಂತ ತಲುಪಿದ್ದಾಗಲೂ, ತನ್ನ ಖಡಕ್ ನಿಲುವಿನಿಂದ ಎಲ್ಲಾ ಸವಾಲನ್ನು ಸಿದ್ದರಾಮಯ್ಯ ಮೆಟ್ಟಿನಿಂತವರು.
ಟ್ವಿಟ್ಟರ್ ಮೂಲಕ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡ ಸಿಎಂ
ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸುತ್ತಿರುವುದಕ್ಕೆ ಹಲವು ಕಾರಣಗಳು, ಮುಂದೆ ಓದಿ..
ಮೋದಿಯವರ ಟೀಕೆಗೆ ತಿರುಗೇಟು ನೀಡುವಲ್ಲಿ ಸಿದ್ದು ಹಿಂದೆ ಬೀಳುತ್ತಿಲ್ಲ
2014ರ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳಲ್ಲಿ ಮೋದಿ Vs ರಾಹುಲ್ ಅಥವಾ ಸೋನಿಯಾ ಎಂದೇ ಬಿಂಬಿತವಾಗಿತ್ತು. ಆದರೆ, ಕರ್ನಾಟಕದಲ್ಲಿ ಮೋದಿ Vs ರಾಹುಲ್ ಎನ್ನುವುದಕ್ಕಿಂತ ಹೆಚ್ಚಾಗಿ ಮೋದಿ Vs ಸಿದ್ದರಾಮಯ್ಯ ಎಂದೇ ಹೆಚ್ಚಾಗಿ ಬಿಂಬಿತವಾಗುತ್ತಿರುವುದು ಗಮನಿಸಬೇಕಾದ ಅಂಶ. ಅಪ್ರತಿಮ ವಾಗ್ಮಿಯಾಗಿರುವ ಮೋದಿಯವರ ಟೀಕೆಗೆ ತಿರುಗೇಟು ನೀಡುವಲ್ಲಿ ಸಿದ್ದರಾಮಯ್ಯ ಹಿಂದೆ ಬೀಳುತ್ತಿಲ್ಲ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ, ಬದಲಾದ ಕಾಂಗ್ರೆಸ್ಸಿನ ರಾಜಕೀಯ ತಂತ್ರಗಾರಿಕೆಯಲ್ಲಿ ಸಿದ್ದರಾಮಯ್ಯನವರೇ ಮುನ್ನಲೆಯಲ್ಲಿ ಸಾಗಲಿ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗುತ್ತಿದೆ.
ಆದಾಯ ತೆರಿಗೆ ದಾಳಿಯ ನಂತರ ತುಸು ಮಂಕಾಗಿರುವ ಡಿಕೆಶಿ
ಕಾಂಗ್ರೆಸ್ ಪಕ್ಷದ ಅಪ್ರತಿಮ ಸಂಘಟನಾಕಾರರಲ್ಲಿ ಒಬ್ಬರಾದ ಡಿ ಕೆ ಶಿವಕುಮಾರ್, ಆದಾಯ ತೆರಿಗೆ/ಇಡಿ ದಾಳಿಯ ನಂತರ ತುಸು ಮಂಕಾಗಿರುವುದು, ರಾಜ್ಯ ಕಾಂಗ್ರೆಸ್ಸಿನ ಮೇಲೆ ಸಿದ್ದರಾಮಯ್ಯನವರಿಗೆ ಹಿಡಿತ ಸಾಧಿಸಲು ಆಗಿರುವ ಇನ್ನೊಂದು ಪ್ಲಸ್ ಪಾಯಿಂಟ್. ಐಟಿ ದಾಳಿಯ ತೂಗುಗತ್ತಿ ಚುನಾವಣಾ ಹೊಸ್ತಿಲಲ್ಲಿ ಇನ್ನೂ ಹೆಚ್ಚಾಗಿ ಡಿಕೆಶಿ ಮೇಲೆ ತೂಗುತ್ತಿರುವುದರಿಂದ ಟಿಕೆಟ್ ಹಂಚಿಕೆಯ ವಿಚಾರದಲ್ಲೂ ಸಿದ್ದು ಹಿಡಿತ ಸಾಧಿಸದೇ ಇರಲಾರರು.
ವರ್ಚಸ್ವೀ ನಾಯಕರಾಗದೇ ಪರಮೇಶ್ವರ್ ಉಳಿದರು
ಕಳೆದ ಚುನಾವಣೆಯ ವೇಳೆ ಕಾಂಗ್ರೆಸ್ಸಿನ ಸಿಎಂ ಅಭ್ಯರ್ಥಿಗಳಲ್ಲೊಬರೆಂದೇ ಬಿಂಬಿತರಾಗಿದ್ದ ಪರಮೇಶ್ವರ್, ತಾನು ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದರಿಂದ ಭಾರೀ ಹಿನ್ನಡೆ ಅನುಭವಿಸಿದರು. ಇದಾದ ನಂತರ ಹಲವು ಸುತ್ತಿನಲ್ಲಿ ಉಪಮುಖ್ಯಮಂತ್ರಿ ಆಗಬೇಕೆಂದು ಪ್ರಯತ್ನಿಸಿದರೂ ಅದು ಫಲಕೊಡಲಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿದ್ದರೂ, ಒಟ್ಟಾರೆಯಾಗಿ ವರ್ಚಸ್ವೀ ನಾಯಕರಾಗದೇ ಪರಮೇಶ್ವರ್ ಉಳಿದದ್ದು, ಸಿದ್ದು ಮೇಲುಗೈಗೆ ಇನ್ನೊಂದು ಕಾರಣ. ಗೃಹ ಸಚಿವರಾಗಿದ್ದರೂ, ಕೆಂಪಯ್ಯನವರ ಉಸ್ತುವಾರಿಯೇ ಜೋರಾಗಿತ್ತು ಮತ್ತು ಈಗ ಕೂಡಾ ಜೋರಾಗಿದೆ ಉಳಿದಿದೆ ಕೂಡಾ..
ರಾಷ್ಟ್ರ ರಾಜಕಾರಣದಲ್ಲೇ ಖರ್ಗೆ ಮುಂದುವರಿಯುವ ಅನಿವಾರ್ಯತೆ
ಹೈಕಮಾಂಡ್ ಬಯಸುವ ಶಿಸ್ತಿನ ಸಿಪಾಯಿ ಮತ್ತು ರಾಜ್ಯದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೇರೆ ವಿಧಿಯಿಲ್ಲದೇ ಕಾಂಗ್ರೆಸ್ ತನ್ನ ನಾಯಕನನ್ನಾಗಿ ಲೋಕಸಭೆಯಲ್ಲಿ ನೇಮಿಸಿತು. ಸಿಎಂ ಹುದ್ದೆ ಮತ್ತು ರಾಜ್ಯ ರಾಜಕಾರಣದಲ್ಲಿ ಮುಂದುವರಿಯಬೇಕೆಂದು ಖರ್ಗೆ ಬಯಸಿದ್ದರೂ, ರಾಷ್ಟ್ರ ರಾಜಕಾರಣದಲ್ಲೇ ಖರ್ಗೆ ಅವರನ್ನು ಮುಂದುವರಿಸುವ ಅನಿವಾರ್ಯತೆ ಪಕ್ಷಕ್ಕೆ ಬಂತು. ಅಲ್ಲಿಗೆ ಸಿದ್ದರಾಮಯ್ಯನವರಿಗೆ ಇನ್ನೊಂದು ಕ್ಲಿಯರೆನ್ಸ್ ಸಿಕ್ಕಿತು.
ಆಡಳಿತ ಯಂತ್ರದ ಮೇಲೆ ಸಿದ್ದರಾಮಯ್ಯ ಸಂಪೂರ್ಣ ಕಂಟ್ರೋಲ್
ಆಡಳಿತ ಯಂತ್ರದ ಮೇಲೆ ಸಿದ್ದರಾಮಯ್ಯ ಸಂಪೂರ್ಣ ಕಂಟ್ರೋಲ್ ಇರುವುದರಿಂದಲೇ ರಾಜ್ಯ ಕಾಂಗ್ರೆಸ್ಸಿನಲ್ಲಿ ದಿನದಿಂದ ದಿನಕ್ಕೆ ಅವರಿಗೆ ಹಿಡಿತ ಸಾಧಿಸಲು ಪೂರಕ ವಾತಾವರಣ ಸೃಷ್ಟಿಯಾಗುತ್ತಿರುವುದು. ಯಾವುದೇ ಇಲಾಖೆಯ ಲೆಕ್ಕಾಚಾರವನ್ನು ಸಾರ್ವಜನಿಕವಾಗಿ ಹೇಳಲು, ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಯಶಸ್ವಿಯಾಗುತ್ತಿರುವುದು, ಹೈಕಮಾಂಡ್ ಲೆವೆಲಿನಲ್ಲಿ ಅವರಿಗೆ ಸಿಕ್ಕ ಪ್ಲಸ್ ಪಾಯಿಂಟ್ ಗಳಲ್ಲೊಂದು.
ವಿರೋಧ ಪಕ್ಷಗಳ ಬಾಯಿ ಮುಚ್ಚಿಸುತ್ತಿರುವುದೂ ಸಿದ್ದರಾಮಯ್ಯನವರ ಸಾಧನೆ
ಇನ್ನು, ಅಸೆಂಬ್ಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಸಿದ್ದರಾಮಯ್ಯ ಎದುರಿಸಿದರು. ತಮ್ಮದೇ ಪಕ್ಷದ ನಾಯಕರು/ಸಚಿವರು ಮುಜುಗರ ಪಡುವಂತಹ ಹೇಳಿಕೆಯನ್ನು ನೀಡಿದಾಗ, ಪಕ್ಷ ಮತ್ತು ಸರಕಾರದ ಪರವಾಗಿ ಅದಕ್ಕೆ ತೇಪೆ ಹಾಕುವ ಕೆಲಸವನ್ನು ಮಾಡಿ, ವಿರೋಧ ಪಕ್ಷಗಳ ಬಾಯಿ ಮುಚ್ಚಿಸುತ್ತಿರುವುದೂ ಸಿದ್ದರಾಮಯ್ಯನವರ ಸಾಧನೆ ಎನ್ನುವುದು ರಾಜಕೀಯವಾಗಿ ಒಪ್ಪಿಕೊಳ್ಲಬೇಕಾದ ವಿಚಾರ.