ದೇಶದಲ್ಲಿ ಈಗ ಮತ್ತೊಂದು ಕ್ರಾಂತಿ ನಡೆಯಬೇಕಿದೆ!
ಬೆಂಗಳೂರು: ಈಗ ನಮ್ಮ ದೇಶದಲ್ಲಿ ಮತ್ತೊಂದು ಸಂಪೂರ್ಣ ಕ್ರಾಂತಿ ನಡೆಯಬೇಕಾದ ಅಗತ್ಯತೆ ಇದೆ. ದೇಶದ ಸಮಸ್ಯೆ ಅಷ್ಟು ಹದಗೆಡುತ್ತಿದೆ. ಸಮಾಜವಾದಿ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರು ನಡೆಸಿದ ಸಂಪೂರ್ಣ ಕ್ರಾಂತಿ ಮಾದರಿ ಮತ್ತೊಂದು ಕ್ರಾಂತಿಗೆ ದೇಶ ಹದವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಭಾರತ ಯಾತ್ರಾ ಕೇಂದ್ರ & ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ನಲ್ಲಿ ನಡೆದ ಜಯಪ್ರಕಾಶ್ ನಾರಾಯಣ್-122 ಕಾರ್ಯಕ್ರಮದಲ್ಲಿ ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಪೂರ್ಣಕ್ರಾಂತಿಯ ಜಯಪ್ರಕಾಶ್ ನಾರಾಯಣ್ ಪ್ರಶಸ್ತಿಗೆ ಹೋರಾಟಗಾರ ಬಿ.ಆರ್.ಪಾಟೀಲ್ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಮಾತು ನೆನೆದ ಸಿಎಂ
ಬಿ.ಆರ್.ಪಾಟೀಲ್ ಜನಪರ ಕಾಳಜಿ & ಸಮಾಜವಾದಿ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ತುರ್ತು ಪರಿಸ್ಥಿಯಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದಾರೆ. ಈಗಲೂ ಅದೇ ಕಾಳಜಿಗಳನ್ನು ಇಟ್ಟುಕೊಂಡಿದ್ದಾರೆ ಎಂದರು ಸಿಎಂ. ಹಾಗೇ, ಜಾತಿ & ಆರ್ಥಿಕ ಅಸಮಾನತೆ ತೊಡೆದು ಹಾಕದೆ ಹೋದರೆ ರಾಜಕೀಯ ಸ್ವಾತಂತ್ರ್ಯದ ಸೌಧವನ್ನು ಶೋಷಿತ ಜನರೇ ಧ್ವಂಸ ಮಾಡ್ತಾರೆ ಎನ್ನುವ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳು ನನ್ನನ್ನು ಸದಾ ಎಚ್ಚರಿಸುತ್ತಿರುತ್ತವೆ ಎಂದರು.
ನಾನು ಪ್ರತಿ ವರ್ಷ ಬಜೆಟ್ ಮಂಡಿಸುವಾಗ ಪ್ರಣಾಳಿಕೆ ಅಂಗೈಯಲ್ಲಿ ಇಟ್ಟುಕೊಂಡೇ ಕಾರ್ಯಕ್ರಮ ರೂಪಿಸುತ್ತೇನೆ. ಮೊದಲ ಬಾರಿ ಸಿಎಂ ಆದಾಗಲೂ ಎಲ್ಲಾ ಭರವಸೆ ಈಡೇರಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಕೊಟ್ಟ ಎಲ್ಲಾ ಭರವಸೆ ನಾನು ಈಡೇರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು.
ಬಿಜೆಪಿ ವಿರುದ್ಧ ಸಿಎಂ ಗಂಭೀರ ಆರೋಪ
ಕಳೆದ 5 ವರ್ಷದಲ್ಲಿ ಬಿಜೆಪಿ ರಾಜ್ಯವನ್ನ ಆರ್ಥಿಕವಾಗಿ ದಿವಾಳಿ ಮಾಡಿದೆ. ಹಣ ಒದಗಿಸಲಾಗದಿದ್ರು ಅವೈಜ್ಞಾನಿಕ ಯೋಜನೆ ಘೋಷಿಸಿದ್ದಾರೆ. ಆದರೂ ನಾವು 56 ಸಾವಿರ ಕೋಟಿ ರೂಪಾಯಿಯನ್ನ 5 ಗ್ಯಾರಂಟಿಗಳಿಗೆ ಒದಗಿಸುವುದರ ಜತೆ ಇತರೆ ಅಭಿವೃದ್ಧಿ ಕಾರ್ಯಕ್ರಮಕ್ಕೂ ಹಣ ಕೊಡುತ್ತಿದ್ದೇವೆ. ಐದೂ ಗ್ಯಾರಂಟಿ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಲ್ಲುತ್ತಿದೆ ಎಂದು ಸಿಎಂ ವಿವರಿಸಿದರು. ಸರ್ವರ ಸರ್ವೋದಯದ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ಸರ್ವ ಜಾತಿ-ಧರ್ಮದವರಿಗಾಗಿ ಜಾರಿ ಮಾಡಿದ್ದೇವೆ. ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚುತ್ತದೆ. ಆರ್ಥಿಕತೆಗೆ ಚೈತನ್ಯ ಬಂದಿದೆ. ರಾಜ್ಯದ ಜಿಡಿಪಿ ಬೆಳವಣಿಗೆಯಾಗಿದೆ ಎಂದರು.

ಬಿ.ಆರ್.ಪಾಟೀಲ್ ನನ್ನನ್ನು ಕರೆಯುವುದೇ, "ಏನೋ ಗೆಳೆಯ" ಅಂತ. ನಾವಿಬ್ಬರೂ ಸಮಾಜವಾದಿಗಳು ಒಟ್ಟಿಗೇ ವಿಧಾನಸೌಧ ಪ್ರವೇಶಿಸಿದರು. ಆದರೆ ನಾನು ಬಿ.ಆರ್.ಪಾಟೀಲ್ ರಷ್ಟು ಹೋರಾಟ ಮಾಡಿಲ್ಲ. ಹೋರಾಟ ಮಾಡಿ ಜೈಲಿಗೆ ಹೋಗಲಿಲ್ಲ. ನಾನು ಈಗಲೂ 2013 ರ ಸಿದ್ದರಾಮಯ್ಯನೇ. ನನ್ನ ಕಾಳಜಿಗಳಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.












Click it and Unblock the Notifications