ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!
ಬೆಂಗಳೂರು, ಮಾರ್ಚ್ 02 : ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ಸರ್ಕಾರದ ಆಸ್ತಿಯಾಗಿದೆ. ಬುಧವಾರ ಸಿದ್ದರಾಮಯ್ಯ ಅವರು ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.
'ಡಾ.ಗಿರೀಶ್ ಚಂದ್ರ ಶರ್ಮಾ ಅವರು ನನಗೆ 2015ರ ಜುಲೈನಲ್ಲಿ ನನಗೆ ನೀಡಿದ ಊಬ್ಲೋ ಬಿಗ್ ಬ್ಯಾಂಗ್ 301-ಎಂ ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದೇನೆ' ಎಂದು ಅಫಿಡೆವಿಟ್ ಸಲ್ಲಿಸಿರುವ ಸಿದ್ದರಾಮಯ್ಯ ಅವರು, ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿದರು. [ವಾಚ್ ಹಸ್ತಾಂತರಿಸಿದ ಸಿದ್ದರಾಮಯ್ಯ]
ಸ್ಪೀಕರ್ ವಾಚ್ ಅನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಲಿದ್ದು, ಅದು ಇನ್ನು ಮುಂದೆ ಸರ್ಕಾರದ ಆಸ್ತಿಯಾಗಲಿದೆ. ವಾಚ್ ಹಸ್ತಾಂತರ ಮಾಡಿದರೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ವಾಚ್ ಎಲ್ಲಿಂದ ಬಂತು?, ಉಡುಗೊರೆಯಾಗಿ ಕೊಟ್ಟ ಗಿರೀಶ್ ಚಂದ್ರ ವರ್ಮಾ ಯಾರು? ಎಂದು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ ಊಬ್ಲೋ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಇದೆ ಎಂದು ಮೊದಲು ಮಾತನಾಡಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಸದ್ಯ, ವಾಚು ಕಾಗೋಡು ತಿಮ್ಮಪ್ಪ ಕೈ ಸೇರಿದೆ. ವಾಚ್ ವಿವಾದದ Timeline ಇಲ್ಲಿದೆ... [ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?]

ಮೊದಲು ಮಾತನಾಡಿದ್ದು ಎಚ್ಡಿಕೆ
ಸಿದ್ದರಾಮಯ್ಯ ಅವರ ಕೈಯಲ್ಲಿ ಉಬ್ಲೋ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಇದೆ ಎಂದು ಮೊದಲು ಮಾತನಾಡಿದ್ದು ಕುಮಾರಸ್ವಾಮಿ. 'ಮುಖ್ಯಮಂತ್ರಿಗಳ ಬಳಿ ಇನ್ನೂ 7 ರಿಂದ 8 ದುಬಾರಿ ವಾಚ್ಗಳಿವೆ ಅವುಗಳ ಬಗ್ಗೆ ದಾಖಲೆ ಸಮೇತ ವಿವರಣೆ ನೀಡುತ್ತೇನೆ. ಸ್ವಲ್ಪ ಸಮಯ ಕೊಡಿ' ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದರು.

ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ಕುಮಾರಸ್ವಾಮಿ ಅವರ ಹೇಳಿಕೆಗೆ ಮೊದಲು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, 'ವಾಚ್ಗೆ 5 ಲಕ್ಷ, ಕನ್ನಡಕಕ್ಕೆ 50 ಸಾವಿರ ಕೊಟ್ರೆ ಸಾಕು ಅವುಗಳನ್ನು ಅವರಿಗೇ ಕೊಡುತ್ತೇನೆ' ಎಂದು ವ್ಯಂಗ್ಯವಾಡಿದ್ದರು.

'ನಾನು ಸೆಕೆಂಡ್ ಹ್ಯಾಂಡ್ ಗಿರಾಕಿ ಅಲ್ಲ'
ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಅವರು, 'ಹರಾಜು ಹಾಕಿದ ವಾಚ್ ಪಡೆಯಲು ನಾನು ಸೆಕೆಂಡ್ ಹ್ಯಾಂಡ್ ಗಿರಾಕಿ ಅಲ್ಲ' ಎಂದು ಖಡಕ್ ಆಗಿ ಉತ್ತರ ನೀಡಿದ್ದರು.

'ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ?'
ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟಿದ್ದ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಬೇಡ. ಅವರ ಮಗ ಕೋಟ್ಯಂತರ ರೂ.ಮೌಲ್ಯದ ಕಾರು ತೆಗೆದುಕೊಂಡಿಲ್ವಾ?, ಅದು ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ? ಅವ್ರ ಮಗ ಕೋಟ್ಯಾಂತರ ರೂಪಾಯಿ ಸಿನಿಮಾ ಮಾಡ್ತಿದ್ದಾನೆ. ಈ ಸಿನಿಮಾ ಮಾಡಲು ದುಡ್ಡು ಎಲ್ಲಿಂದ ಬಂತು?' ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್ನವರ ವಾಗ್ದಾಳಿ
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ವಾಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಪೂಜಾರಿ ಅವರು, ಸಿದ್ದರಾಮಯ್ಯ ಅವರು ಅವರು ವಾಚ್ ಅನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಸಿಯಾಚಿನ್ ಹುತಾತ್ಮ ಕನ್ನಡಿಗ ಯೋಧರಿಗೆ ಹಂಚುತ್ತೇನೆ ಎಂದು ಹೇಳಿಕೆ ನೀಡಲಿ' ಎಂದು ಒತ್ತಾಯಿಸಿದ್ದರು.

'ಸರ್ಕಾರಕ್ಕೆ ವಾಚ್ ನೀಡಲಿ'
'ಸಿದ್ದರಾಮಯ್ಯ ಅವರು ಊಬ್ಲೋ ವಾಚ್ ಕಂಪನಿಯ ವಜ್ರ ಖಚಿತ ವಾಚ್ ಅನ್ನು ಸರ್ಕಾರಕ್ಕೆ ನೀಡಿ, ಮುಂದಿನ ಮುಖ್ಯಮಂತ್ರಿಗಳು ಅದನ್ನು ಧರಿಸಲು ಅನುವು ಮಾಡಿಕೊಡಬೇಕು. ಸರ್ಕಾರದ ಬಳಿ ನಿಜಲಿಂಗಪ್ಪನವರ ಒಂದು ವಾಚ್ ಇದೆ. ಅಂತೆಯೇ ಸಿದ್ದರಾಮಯ್ಯ ಅವರು ತಮ್ಮ ದುಬಾರಿ ವಾಚ್ ಅನ್ನು ಸರ್ಕಾರಕ್ಕೆ ನೀಡಲಿ' ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಸಲಹೆ ನೀಡಿದ್ದರು.

ಜಾರಿ ನಿರ್ದೇಶನಾಲಯಕ್ಕೆ ದೂರು
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ಹೇಳಿಕೆ ನೀಡಿದ್ದರು. 'ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಬಹಿರಂಗಪಡಿಸಬೇಕು' ಎಂದು ಒತ್ತಾಯಿಸಿದ್ದರು. ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.












Click it and Unblock the Notifications