CM Siddaramaiah: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಸಂತಸ; ಮರಳಿ ಪತ್ರ ಬರೆದ ಸಿದ್ದರಾಮಯ್ಯ! ಪತ್ರದಲ್ಲಿ ಏನಿದೆ?
ಬೆಂಗಳೂರು, ಜೂನ್ 28: ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರ ರಚಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ಅವರಿಗೆ ಕೊಪ್ಪಳದ ವಿದ್ಯಾರ್ಥಿನಿ ಬರೆದಿರುವ ಅಭಿನಂದನಾ ಪತ್ರ ಓದಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ಮಾಸ್ತಿ ಪಬ್ಲಿಕ್ ಸ್ಕೂಲ್ನ 8 ನೇ ತರಗತಿ ವಿದ್ಯಾರ್ಥಿನಿ ಶ್ರೆಯಾಂಕ ವಿ.ಮೆಣಸಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಅಭಿನಂದನಾ ಪತ್ರ ಬರೆದಿದ್ದಳು. ಪತ್ರದ ಮೂಲಕ ವ್ಯಕ್ತಪಡಿಸಿರುವ ವಿದ್ಯಾರ್ಥಿಯ ಸಾಮಾಜಿಕ ಕಾಳಜಿ ಕೊಂಡಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮರಳಿ ವಿದ್ಯಾರ್ಥಿನಿಗೆ ಪತ್ರ ಬರೆದು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಪತ್ರದ ಮುಖೇನ ವಿದ್ಯಾರ್ಥಿನಿ ಸಿದ್ದರಾಮಯ್ಯ 2013 ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಕಾರ್ಯಗಳಾದ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪ್ರಸ್ಥಾಪಿಸಿ, ಇದೇ ರೀತಿಯಾಗಿ ಈ ಬಾರಿಯೂ ಉತ್ತಮ ಆಡಳಿತ ನೀವು ನೀಡಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಳು.
ಸಾಮಾಜಿಕ ಕಳಕಳಿಯೊಂದಿಗೆ ಬರೆದಿರುವ ಈ ಪತ್ರವನ್ನು ಓದಿರುವ ಸಿದ್ದರಾಮಯ್ಯ, ಸಂತಸಗೊಂಡು ವಿದ್ಯಾರ್ಥಿನಿ ಶ್ರೇಯಾಂಕ ವಿ.ಮೆಣಸಗಿಗೆ ಮರಳಿ ಪತ್ರ ಬರೆದಿದ್ದಾರೆ. ಪ್ರೀತಿಯ ಶ್ರೇಯಾಂಕ, ತಾವು ಬರೆದ ಅಭಿನಂದನಾ ಪತ್ರ ತಲುಪಿದೆ. 8 ನೇ ತರಗತಿ ಓದುತ್ತಿರುವ ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು. ಈ ಎಳೆಯ ವಯಸ್ಸಿನಲ್ಲಿ ಬಡವರು, ದೀನ-ದಲಿತರು, ರೈತರ ಬಗೆಗಿನ ನಿನ್ನ ಕಾಳಜಿ ಬೆರಗು ಮೂಡಿಸುವಂತಹದ್ದು.
ಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯೆ ಕಲಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು ಎಂದು ಹಾರೈಸಿ ಮರಳಿ ಪತ್ರ ಬರೆದಿದ್ದು, ಗಮನ ಸೆಳೆದಿದೆ.
ಸದರಿ ವಿದ್ಯಾರ್ಥಿನಿಯ ತಂದೆ ವಿಜಯಕುಮಾರ ನಗರದ ಪಿಎಲ್ಡಿ ಬ್ಯಾಂಕ್ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಭಿನಂದನಾ ಪತ್ರಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಿ ಸಿಎಂ ಕಚೇರಿಯಿಂದ ಮರಳಿ ಪತ್ರ ಬಂದಿರುವುದಕ್ಕೆ ಮಾಸ್ತಿ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications