ಜಿಮ್ನಲ್ಲಿ ವರ್ಕೌಟ್ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!
ಬೆಂಗಳೂರು, ಜ. 08: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜಂಜಡ ಬಿಟ್ಟು ಜಿಮ್ನಲ್ಲಿ ವರ್ಕೌಟ್ ಮಾಡಿದರು. ಜಿಮ್ನಲ್ಲಿ ಶೋಲ್ಡರ್ ಪ್ರೆಸ್ ಎಕ್ಸರ್ಸೈಜ್ ಸೇರಿದಂತೆ ಒಂದಿಷ್ಟು ತಾಲೀಮು ಮಾಡಿದರು. ಆ ಮೂಲಕ ತಮ್ಮ ದೈನಂದಿನ ರಾಜಕೀಯದಿಂದ ಸ್ವಲ್ಪಹೊತ್ತು ದೂರ ಉಳಿದರು.
ಇದು ನಡೆದಿದ್ದು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ದಿನಚರಿ ಬಿಡುಗಡೆ ಹಾಗೂ ಶತಮಾನೋತ್ಸವ ಭವನಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮ ಮುಗಿದ ಬಳಿಕ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಮ್ನಲ್ಲಿ ಕೆಲಹೊತ್ತು ಕಳೆಯುವ ಮೂಲಕ ಅಧಿಕಾರಿಗಳಿಗೂ ಮಾದರಿಯಾದರು. ಎಷ್ಟೇ ಒತ್ತಡಗಳಿದ್ದರೂ ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ವಾಕಿಂಗ್ ಮಾಡುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಪ್ಪಿಸುವುದಿಲ್ಲ.
ಸರ್ಕಾರದ ಸೌಲಭ್ಯ ಪಡೆಯಲು ಇನ್ಮುಂದೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿಲ್ಲ!
ಅದೇ ರೀತಿ ಯುವಕರಿಗೆ ಮಾದರಿಯಾಗುವಂತೆ ಆರೋಗ್ಯ ಕಾಪಾಡಿಕೊಂಡಿರುವ ಹಿರಿಯ ರಾಜಕಾರಿಗಳ ದೊಡ್ಡ ಪಟ್ಟಿಯೆ ನಮ್ಮ ರಾಜ್ಯದಲ್ಲಿದೆ. ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಹೀಗೆ ಹಲವು ಹಿರಿಯ ರಾಜಕಾರಣಿಗಳು ಯುವಕರಿಗೂ ಮಾದರಿ ಆಗುವಂತೆ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಹೀಗಾಗಿಯೆ ಕೊರೊನಾ ವೈರಸ್ ಆತಂಕದ ಕಾಲದಲ್ಲಿಯೂ ಅವರೆಲ್ಲರೂ ಅಂಜದೆ ಸಾರ್ವಜನಿಕರೊಂದಿಗೆ ಬೆರೆತಿರುವುದು ಅವರ ಉತ್ತಮ ಆರೋಗ್ಯಕ್ಕೊಂದು ಉದಾಹರಣೆ.
ಅಧಿಕಾರಿಗಳಿಗೆ ಅಚ್ಚರಿ!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ದಿನಚರಿಯನ್ನು ಬಿಡುಗಡೆ ಮಾಡಿದ ಬಳಿಕ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಅಧಿಕಾರಿಗಳ ಸಂಘದ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಮ್ ಉದ್ಘಾಟಿಸಿದರು. ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಜಿಮ್ನಲ್ಲಿ ವರ್ಕೌಟ್ ಮಾಡಿದ್ದನ್ನು ನೋಡಿ ಅಧಿಕಾರಿಗಳು ಕೂಡ ಆಶ್ಚರ್ಯಚಕಿತರಾಗಿದ್ದರು.
ಅತ್ಯಂತ ಔಚಿತ್ಯಪೂರ್ಣ
ಜಿಮ್ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ವತಿಯಿಂದ ಶತಮಾನೋತ್ಸವ ಭವನದ ಶಂಕುಸ್ಥಾಪನೆ ಹಾಗೂ ಜಿಮ್ ಉದ್ಘಾಟನೆಯನ್ನು ಅತ್ಯಂತ ಸಂತೋಷದಿಂದ ನೆರವೇರಿಸಿದ್ದೇನೆ ಎಂದರು. ಕರ್ನಾಟಕ ಆಡಳಿತ ಸೇವೆ ಪ್ರಾರಂಭವಾಗಿ 100 ವರ್ಷಗಳು ಸಂದಿರುವ ಸಂದರ್ಭದಲ್ಲಿ ಸಂಘದ ವತಿಯಿಂದ ಶತಮಾನೋತ್ಸವ ಭವನದ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.
ಫಿಟ್ ಇಂಡಿಯಾ
ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಕೆಎಎಸ್ ಅಧಿಕಾರಿಗಳು ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸರ್ಕಾರದ ಆಡಳಿತ ಯಂತ್ರವು ಸುಗಮವಾಗಿ ನಿರ್ವಹಿಸಲು ಹಾಗೂ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ. 'Sound Body Carries Sound Mind' ಎಂಬ ಉಕ್ತಿಯಂತೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 'FIT INDIA' ಅಭಿಯಾನಕ್ಕೆ ಚಾಲನೆ ನೀಡಿರುವುದು ನಮಗೆಲ್ಲ ತಿಳಿದಿದೆ ಎಂದು ಯಡಿಯೂರಪ್ಪ ವಿವರಿಸಿದರು.
ಒತ್ತಡ ನಿವಾರಣೆ
ಒತ್ತಡ ನಿವಾರಣೆ, ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಹಾಗೂ ಆರೋಗ್ಯ ವೃದ್ಧಿಗೆ ಜಿಮ್ನಲ್ಲಿ ವರ್ಕೌಟ್ ಮಾಡುವುದು ಸಹಕಾರಿಯಾಗಲಿದೆ. ಸರ್ಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು. ಜನರು ತಮ್ಮ ದೂರು, ಸಂಕಷ್ಟಗಳನ್ನು ಹೊತ್ತು ಬಂದಾಗ ಸಕಾಲದಲ್ಲಿ ಸ್ಪಂದಿಸಿ ಪರಿಹಾರ ಸೂಚಿಸಿದರೆ, ಸರ್ಕಾರ ಜನಪರವಾಗಿದೆ ಎಂಬ ಸದಭಿಪ್ರಾಯ ಮೂಡುತ್ತದೆ. ಆ ಜವಾಬ್ದಾರಿ ನಿಮ್ಮ ಮೇಲಿದೆ. ನೂತನವಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿಗಳು, ನಿಷ್ಠೆ, ಜವಾಬ್ದಾರಿ ಹಾಗೂ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಸಿಎಂ ಯಡಿಯೂರಪ್ಪ ಹಾರೈಸಿದರು.