ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಮುನ್ನಡೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ಹೀಗೆ
ಶಿಗ್ಗಾಂವ್, ಮೇ. 05: ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೆಲ್ಲವನ್ನು ನಿರಾಕರಿಸಿದ್ದಾರೆ. ಜೊತೆಗೆ ತಮ್ಮ ಪಕ್ಷ ಬಹುಮತದಿಂದ ಅಧಿಕಾರ ಪಡೆಯಲಿದೆ ಎಂದಿದ್ದಾರೆ.
ಶುಕ್ರವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಪಕ್ಷ ಬಿಜೆಪಿಯು "ಆರಾಮದಾಯಕ ಬಹುಮತ" ದೊಂದಿಗೆ ಮತ್ತು ಜೆಡಿಎಸ್ ಬೆಂಬಲ ಇಲ್ಲದೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ನಾನು ಸಿಎಂ ಆಗಿ ಮುಂದುವರಿಯುವ ಬಗ್ಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂದೂ ಸೇರಿಸಿದ್ದಾರೆ.

ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ನಿಂದ ಮತ್ತೊಮ್ಮೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಪಕ್ಷಾಂತರಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಬಾರಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ, 2019ರಲ್ಲಿ ಕಾಂಗ್ರೆಸ್-ಜೆಡಿ(ಎಸ್) ಸರ್ಕಾರವನ್ನು ಪತನಗೊಳಿಸಲು ಬಿಜೆಪಿಗೆ ಸಹಾಯ ಮಾಡಿದ 14 ಪಕ್ಷಾಂತರಿಗಳು ಕೂಡ ಆಯಾ ಕ್ಷೇತ್ರಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಭಾಷಣವನ್ನು ಅತ್ಯಂತ ಕೀಳು ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಜೊತೆಗೆ "ಕಾಂಗ್ರೆಸ್ಗೆ ಈ ಸಮೀಕ್ಷೆಗಳಿಂದ ಯಾವುದೇ ಪ್ರಯೋಜನವಿಲ್ಲ. ಸಮೀಕ್ಷೆಗಳನ್ನು ಹೇಗೆ ಮಾಡಲಾಗುತ್ತದೆ ಎಂಬುದು ನಮಗೆ ತಿಳಿದಿದೆ. ನಾವು ಆರಾಮದಾಯಕ ಬಹುಮತದ ನಿರೀಕ್ಷೆಯಲ್ಲಿದ್ದೇನೆ. ಪಕ್ಷಕ್ಕೆ ಜೆಡಿಎಸ್ನ ಬೆಂಬಲದ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

"ಜೆಡಿಎಸ್ ಬೆಂಬಲ ಪಡೆಯುವ ಯಾವುದೇ ಅವಕಾಶವಿಲ್ಲ. ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿರುವುದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರ ಸ್ಥಾನವನ್ನು ನಾವೇ ಗೆಲ್ಲುತ್ತೇವೆ" ಎಂದಿದ್ದಾರೆ.
ಜಾತಿ ಆಧಾರಿತ ಕೋಟಾದಲ್ಲಿ, ಆಂತರಿಕ ಮೀಸಲಾತಿ ಮತ್ತು ಇತರ ವಿಷಯಗಳು ಬಹಳ ದಿನಗಳಿಂದ ಬಾಕಿಯಿದ್ದ ಬೇಡಿಕೆಯಾಗಿತ್ತು. ನಾನು ಅವುಗಳನ್ನು ಪರಿಹರಿಸಿದ್ದೇನೆ. ಹಿಂದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡದ ಕಾರಣ ಹಲವರಿಗೆ ಸೌಲಭ್ಯ ನಿರಾಕರಿಸಲಾಗಿತ್ತು. ಒಳಮೀಸಲಾತಿಯಿಂದ ಆ ವರ್ಗದ ಜನರಿಗೆ ಈಗ ಭರವಸೆ ಸಿಕ್ಕಿದೆ. ನಾವು ಒಳ ಮೀಸಲಾತಿಯನ್ನು ಶಿಫಾರಸು ಮಾಡಿದ್ದೇವೆ. ಕೇಂದ್ರ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಶೇ.40ರಷ್ಟು ಕಮಿಷನ್ ಆರೋಪವನ್ನು ತಳ್ಳಿಹಾಕಿದ ಬಸವರಾಜ ಬೊಮ್ಮಾಯಿ, 'ಪತ್ರಿಕೆಗಳು ಅಥವಾ ಪ್ರತಿಪಕ್ಷಗಳು ಅಥವಾ ಗುತ್ತಿಗೆದಾರರ ಸಂಘ ನಮ್ಮ ಸರ್ಕಾರದ ವಿರುದ್ಧ ಒಂದು ಪ್ರಕರಣ ತೋರಿಸಲಿ. ನಾನು ಉತ್ತರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಚುನಾವಣಾ ಭಾಷಣವನ್ನು ಅತ್ಯಂತ ಕೆಳಮಟ್ಟಕ್ಕೆ ಕೊಂಡೊಯ್ದಿದೆ ಎಂದು ಆರೀಪಿಸಿದ ಅವರು, ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಷ ಕನ್ಯೆ ಹೇಳಿಕೆಗಳು ಸರಿಯಲ್ಲ ಎಂದಿರುವ ಅವರು, ಆದರೆ ಅದನ್ನು ಕಾಂಗ್ರೆಸ್ ಅತ್ಯಂತ ಕೀಳು ಮಟ್ಟಕ್ಕೆ ಕೊಂಡೊಯ್ದಿದೆ ಎಂದಿದ್ದಾರೆ.
"ಇದು ಕಾಂಗ್ರೆಸ್ನಿಂದ ಪ್ರಾರಂಭವಾಯಿತು. ವಿಷ ಸರ್ಪ (ವಿಷಪೂರಿತ ಹಾವು) ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ (ಮಲ್ಲಿಕಾರ್ಜುನ ಖರ್ಗೆ) ಅವರು (ಪ್ರಧಾನಿ) ನರೇಂದ್ರ ಮೋದಿ ಅವರಿಗೆ ಹೋಲಿಸಿ ಮಾರಾನಡಿದ್ದಾರೆ. ಹೀಗಾಗಿ ಪ್ರತಿಕ್ರಿಯೆ ಹೀಗೆ ಬರುತ್ತದೆ" ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ನಂತರ ಲಿಂಗಾಯತ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಈಗ ಪಕ್ಷದಲ್ಲಿ ನಾಯಕರ ದಂಡೇ ಇದೆ. ಎಲ್ಲರೂ ನಾಯಕರು, ಎರಡನೇ ಹಂತ ಎಂದು ಏನೂ ಇಲ್ಲ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಿಂದ ಸಿಎಂ ಸತತ ನಾಲ್ಕನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ.
ಈ ಕ್ಷೇತ್ರದಿಂದ ಕಾಂಗ್ರೆಸ್ ಯಾಸಿರ್ ಅಹಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ನಿಂದ ಪಂಚಮಶಾಲಿ ಲಿಂಗಾಯತ ಶಶಿಧರ್ ಯೆಲಿಗಾರ್ ಅವರನ್ನು ಆಯ್ಕೆ ಮಾಡಿದೆ. "ಪ್ರತಿ ಬಾರಿಯೂ ಇಲ್ಲಿನ ಜನರು ನನಗೆ ಮತ ಹಾಕಿದ್ದಾರೆ. ಅವರು ಎಲ್ಲಾ ಕುಟುಂಬಗಳೊಂದಿಗೆ ರಾಜಕೀಯ ಸಂಬಂಧಕ್ಕಿಂತ ಹೆಚ್ಚು ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದಾರೆ. ಆದ್ದರಿಂದ, ಸಮಾಜದ ಎಲ್ಲಾ ವರ್ಗಗಳು ಮತ್ತು ಎಲ್ಲಾ ಜಾತಿಯ ಜನರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ" ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಕುರಿತು, ಇವು ಗ್ರಾಮ ಪಂಚಾಯಿತಿ ಸಮಸ್ಯೆಗಳಾಗಿವೆ. "ಅವು ತಾತ್ಕಾಲಿಕವಾಗಿದ್ದು, ಅವುಗಳನ್ನು ಪರಿಹರಿಸಲಾಗುವುದು. ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ನನ್ನ ಎಲ್ಲಾ ಹಳ್ಳಿಯ ರಸ್ತೆಗಳು ಕಾಂಕ್ರೀಟ್ ಮತ್ತು ಹಳ್ಳಿಯಿಂದ ಹೊಲದ ರಸ್ತೆಗಳು ಟಾರ್ ರಸ್ತೆಗಳಾಗಿವೆ, ಅದು ಬೇರೆ ಯಾವುದೇ ಕ್ಷೇತ್ರಗಳಲ್ಲಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications